ಕೊಡಿಗೇನಹಳ್ಳಿ: ಮಧುಗಿರಿ ತಾಲ್ಲೂಕಿನ ಕೆರೆಗಳ ದುರಸ್ತಿ ಮಾಡಿಸುವುದರ ಜೊತೆಗೆ ಅವುಗಳಿಗೆ ಎತ್ತಿನಹೊಳೆಯಿಂದ ನೀರು ತುಂಬಿಸುವ ಕೆಲಸವನ್ನು ತ್ವರಿತವಾಗಿ ಮಾಡಿಸಲಾಗುವುದು ಎಂದು ಶಾಸಕ ಕೆ.ಎನ್. ರಾಜಣ್ಣ ತಿಳಿಸಿದರು.
ಐಡಿಹಳ್ಳಿ ಹೋಬಳಿ ಗರಣಿ ಗ್ರಾಮ ಪಂಚಾಯಿತಿ ಕಟ್ಟಡ ಹಾಗೂ ಯಲ್ಕೂರು ಇಂದಿರಾ ಗಾಂಧಿ ವಸತಿ ಶಾಲೆ ಉದ್ಘಾಟನೆ ನಂತರ ಪಟ್ಟಣದ ಗ್ರಾಮ ಪಂಚಾಯಿತಿ ಮುಂಭಾಗ ನಡೆದ ಜನಸ್ಪಂದನ ಹಾಗೂ ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎತ್ತಿನಹೊಳೆ ಯೋಜನೆ ಅಡಿ ₹300 ಕೋಟಿ ವೆಚ್ಚದಲ್ಲಿ 54 ಕೆರೆಗಳಿಗೆ ನೀರು ತುಂಬಿಸುವ ಕೆಲಸ ನಡೆಯುತ್ತಿದೆ. 26 ಆರೋಗ್ಯ ಕೇಂದ್ರಗಳಿಗೆ ತಲಾ ₹65 ಲಕ್ಷದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಶಾಲೆ ಕಟ್ಟಡ, ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಮುಂದಿನ ಅಧಿವೇಶನದಲ್ಲಿ ಕ್ಷೇತ್ರದಲ್ಲಿ ನೋಟ್ಬುಕ್ ವಿತರಣೆ ಕಾರ್ಯಕ್ರಮ ಮಾದರಿಯಾಗಿಟ್ಟುಕೊಂಡು ರಾಜ್ಯದಾದ್ಯಂತ ನೋಟ್ಬುಕ್ ವಿತರಣಾ ಕಾರ್ಯಕ್ರಮ ನಡೆಸಲು ಸರ್ಕಾರ ಚಿಂತನೆ ನಡೆಸಿದೆ ಎಂದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 138 ನಿವೇಶನಗಳ ಹಕ್ಕುಪತ್ರ ಮತ್ತು 187 ಮನೆ ನಿರ್ಮಾಣ ಕಾರ್ಯದೇಶ ಪತ್ರಗಳನ್ನು ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಭೂಮಿ ಹಕ್ಕನ್ನು ಕರಾರುವಕ್ಕಾಗಿ ಎಲ್ಲರಿಗೂ ಮಾಡಿಕೊಡಲಾಗುವುದು. ಈ ದಿನ 28 ಜನರಿಗೆ ಮಾಸಾಶನ, 55 ಮಂದಿಗೆ ಹಕ್ಕುಪತ್ರ , 85 ಮಂದಿಗೆ ಪೌತಿ ಖಾತೆ, 138 ಮಂದಿಗೆ ನಿವೇಶನ ಹಂಚಿಕೆ ಹಕ್ಕುಪತ್ರ ನೀಡಲಾಗುತ್ತಿದೆ ಎಂದರು.
ತಹಶೀಲ್ದಾರ್ ಶ್ರೀನಿವಾಸ್ ಮಾತನಾಡಿ, ಶಾಸಕರ ಸೂಚನೆ ಮೇರೆಗೆ ಎಲ್ಲ ಇಲಾಖೆಯವರು 15 ದಿನಗಳಿಗೊಮ್ಮೆ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ ಸದಾಶಿವರೆಡ್ಡಿ, ಉಪಾಧ್ಯಕ್ಷೆ ಲಕ್ಷ್ಮಮ್ಮ, ಪಿಡಿಒ ಕೆ.ಎಸ್. ಆಂಜನೇಯ, ಗರಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಸ್. ಹನುಮಪ್ಪರಾಜು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಂಜೀವಪ್ಪ, ರವಿ ಗರಣಿ, ಇಂದಿರದೇನಾನಾಯ್ಕ್, ಶನಿವಾರಮರೆಡ್ಡಿ, ಪಿ.ಟಿ. ಗೋವಿಂದಪ್ಪ, ಶ್ರೀನಿವಾಸರೆಡ್ಡಿ, ಶ್ರೀಧರರೆಡ್ಡಿ, ಸುರೇಂದ್ರ, ನಾಗೇಶ್, ವಕೀಲ ನರಸಿಂಹಮೂರ್ತಿ, ಇಒ ಲಕ್ಷ್ಮಣ್, ಎಡಿಒ ಧನಂಜಯ್, ಪಶು ಇಲಾಖೆ ಜಗದೀಶ್, ಗ್ರಾ.ಪಂ. ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.