ADVERTISEMENT

ದೇಗುಲ ಪ್ರವೇಶ ನಿಷೇಧ ರಸ್ತೆ ವಿಭಜಕಕ್ಕೆ ಪೂಜೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 2:29 IST
Last Updated 15 ಆಗಸ್ಟ್ 2021, 2:29 IST
ಪಾವಗಡದ ಶನೈಶ್ಚರ ಸ್ವಾಮಿ ದೇಗುಲ ಪ್ರವೇಶ ನಿಷೇಧಿಸಿದ್ದರಿಂದ ಭಕ್ತರು ರಸ್ತೆ ವಿಭಜಕ್ಕೆ ಪೂಜೆ ಸಲ್ಲಿಸಿದರು
ಪಾವಗಡದ ಶನೈಶ್ಚರ ಸ್ವಾಮಿ ದೇಗುಲ ಪ್ರವೇಶ ನಿಷೇಧಿಸಿದ್ದರಿಂದ ಭಕ್ತರು ರಸ್ತೆ ವಿಭಜಕ್ಕೆ ಪೂಜೆ ಸಲ್ಲಿಸಿದರು   

ಪಾವಗಡ: ಶ್ರಾವಣ ಶನಿವಾರದ ಪ್ರಯುಕ್ತ ಪಟ್ಟಣದ ಶನೈಶ್ಚರ ದೇಗುಲಕ್ಕೆ ಬಂದಿದ್ದ ಭಕ್ತರು, ದೇವಾಲಯ ಪ್ರವೇಶ ನಿಷೇಧಿಸಿದ್ದ ಕಾರಣ ರಸ್ತೆ ವಿಭಜಕಕ್ಕೆ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದರು.

ಕೋವಿಡ್ ಮೂರನೆ ಅಲೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ 144 ಸೆಕ್ಷನ್ ವಿಧಿಸಿ ಶನಿವಾರ, ಭಾನುವಾರ, ಸೋಮವಾರ, ಸರ್ಕಾರಿ ರಜಾ ದಿನ ಹಾಗೂ ವಿಶೇಷ ದಿನಗಳಂದು ದೇಗುಲ ಪ್ರವೇಶ ನಿಷೇಧಿಸಿರುವುದರಿಂದ ಪಟ್ಟಣದ ಶನೈಶ್ಚರ ದೇಗುಲದ ಬಾಗಿಲು ಮುಚ್ಚಲಾಗಿತ್ತು.

ವಿಷಯ ತಿಳಿಯದೆ ಆಂಧ್ರ ಪ್ರದೇಶದ ವಿವಿಧ ಭಾಗಗಳಿಂದ ಭಕ್ತರು ಬಂದಿದ್ದರು. ಶನೈಶ್ಚರ ದೇಗುಲದ ಸುತ್ತಲೂ ಬ್ಯಾರಿಕೇಡ್ ಹಾಕಿದ್ದರಿಂದ ರಸ್ತೆ ವಿಭಜಕದ ಬಳಿ ಫೋಟೊ ಇರಿಸಿ ವಿಭಜಕಕ್ಕೆ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದರು.

ADVERTISEMENT

ಸುಮಾರು 50 ಮೀಟರ್ ದೂರದಿಂದ ಭಕ್ತರು ದೇಗುಲದ ಗೋಪುರಕ್ಕೆ ನಮಸ್ಕರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವಸತಿ ಗೃಹದಲ್ಲಿ ಕೊಠಡಿ ನೀಡದ ಕಾರಣ ಭಕ್ತರು ಪಟ್ಟಣದ ಶೌಚಾಲಯ, ಹೊರ ವಲಯದ ಕಣಿವೆ ಲಕ್ಷ್ಮಿ ನರಸಿಂಹ ಸ್ವಾಮಿ ದೇಗುಲದ ಬಳಿ ಸ್ನಾನ ಮಾಡಿ, ಅಲ್ಲಿಯೇ ಆಹಾರ
ಸೇವಿಸಿದರು.

ದೇವಾಲಯದಲ್ಲಿ ಪ್ರಸಾದ ವಿತರಣೆ ಸ್ಥಗಿತಗೊಳಿಸಲಾಗಿತ್ತು. ರಸ್ತೆಗಳು ವಾಹನ, ಜನರಿಂದ ತುಂಬಿತ್ತು. ವಾರದ ಮುನ್ನವೇ ದರ್ಶನ ನಿಷೇಧಿಸುವ ಬಗ್ಗೆ ವ್ಯಾಪಕ ಪ್ರಚಾರ ನೀಡಿದ್ದರೆ ಜನರಿಗಾದ ನಿರಾಶೆ ತಪ್ಪಿಸಬಹುದಿತ್ತು ಎಂದು ನೂರಾರು ಕಿ.ಮೀ. ದೂರದಿಂದ ಬಂದಿದ್ದ ಭಕ್ತರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.