ADVERTISEMENT

ದೊಂಬರಹಟ್ಟಿ ದೇಗುಲದ ವೈಭವ

ಶನೇಶ್ವರಸ್ವಾಮಿಯ ಶಿವರಾತ್ರಿ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 2:36 IST
Last Updated 10 ಮಾರ್ಚ್ 2021, 2:36 IST
ದೊಂಬರಹಟ್ಟಿಯಲ್ಲಿ 36ನೇ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಸಿದ್ಧವಾಗುತ್ತಿರುವ ಶನೇಶ್ವರಸ್ವಾಮಿ ದೇವಾಲಯ
ದೊಂಬರಹಟ್ಟಿಯಲ್ಲಿ 36ನೇ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಸಿದ್ಧವಾಗುತ್ತಿರುವ ಶನೇಶ್ವರಸ್ವಾಮಿ ದೇವಾಲಯ   

ಕುಣಿಗಲ್: ಶನಿ ಪ್ರಭಾವದಿಂದ ತೊಂದರೆ ಅನುಭವಿಸಿದ ಗಂಗರಾಜು ಸ್ವಾಮಿ ನಂತರ ಶನಿದೇವರ ಮೊರೆ
ಹೋಗಿ ಶನೈಶ್ಚರನಿಗಾಗಿ ನಿರ್ಮಿಸಿದ ದೇಗುಲವೇ ದೊಂಬರಹಟ್ಟಿ.

30 ವರ್ಷಗಳ ಹಿಂದೆ ತುಮಕೂರಿನಲ್ಲಿ ತನ್ನ ತಾಯಿಯಿಂದ ಪರಿತ್ಯಕ್ತನಾದ ಗಂಗರಾಜು ಬಂದು ನೆಲಸಿದ್ದು ತನ್ನ ಸಹೋದರ ಮಾವ ಮೂಗಯ್ಯ ಮತ್ತು ಸೀತಮ್ಮನವರ ಆಶ್ರಯಕ್ಕೆ. ನಂತರ ಶನಿದೇವರ ಆಕರ್ಷಣೆಗೆ ಒಳಗಾದ ಗಂಗರಾಜು ತನ್ನ ಅಜ್ಜಿ ನೀಡಿದ ಒಂದು ಗುಂಟೆ ಜಾಗದಲ್ಲಿ ಗುಡಿಸಲು ನಿರ್ಮಿಸಿ ಶನಿದೇವರ ಪೂಜೆ ಪ್ರಾರಂಭಿಸಿದರು. 12 ವರ್ಷ ನಿರಂತರ ತಪಸ್ಸು ಮಾಡಿದರು ಎಂಬ ನಂಬಿಕೆ ಇದೆ.

ಶನೇಶ್ವರಸ್ವಾಮಿಯ ಐತಿಹ್ಯ ಪ್ರಸಿದ್ಧಿಯಾದಂತೆ ನಿರಂತರವಾಗಿ ಭಕ್ತರು ಬರಲು ಪ್ರಾರಂಭಿಸಿದರು. ಜನರು ನೀಡಿದ ಕಾಣಕೆಯನ್ನು ದೇಗುಲದ ಅಭಿವೃದ್ಧಿಗೆ ಬಳಸಿದ ಕಾರಣ ಐದು ವರ್ಷಗಳ ಹಿಂದೆ ₹9 ಕೋಟಿ ವೆಚ್ಚದಲ್ಲಿ ನೂತನ ಶನೇಶ್ವರಸ್ವಾಮಿ ದೇಗುಲ ನಿರ್ಮಾಣಗೊಂಡು ಭಕ್ತರನ್ನು ಆಕರ್ಷಿಸುತ್ತಿದೆ. 58 ಕಂಬಗಳು, 108 ಚಿನ್ನದ ಕಳಸಗಳಿಂದ ನಿರ್ಮಿಸಲಾಗಿದೆ. ಇಲ್ಲಿ ಶನಿಮಹಾರಾಜನೇ ಅಧಿಪತಿ, ನವ ಗ್ರಹಗಳಿಲ್ಲದಿರುವುದು ಇಲ್ಲಿಯವಿಶೇಷ.

ADVERTISEMENT

ಸಂಸ್ಥಾಪಕ ಗಂಗರಾಜು ಸ್ವಾಮಿ ನಿಧನದ ನಂತರ ಮಗ ಆನಂದ್ ಸ್ವಾಮಿ ಪ್ರತಿವರ್ಷವೂ ಮಹಾಶಿವರಾತ್ರಿ, ಶನೇಶ್ವರ ಜಯಂತಿ, ಗಂಗರಾಜು ಸ್ವಾಮಿ ಆರಾಧನಾ ಮತ್ತು ಲಕ್ಷದೀಪೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಸ್ಥಳೀಯ ರಂಗಭೂಮಿ ಕಲಾವಿದರಿಗೆ ಕ್ಷೇತ್ರದಲ್ಲಿ ನಡೆಯುವ ಶಿವರಾತ್ರಿ ಜಾತ್ರೆ, ಶನೇಶ್ಚರ ಜಯಂತಿ ಮತ್ತು ಲಕ್ಷದಿಪೋತ್ಸವ ಕಾರ್ಯಕ್ರಮದಲ್ಲಿ ನಾಟಕ ಮತ್ತು ನಾದಸ್ವರಗಳ ಪ್ರದರ್ಶನಕ್ಕೆ ಮತ್ತು ಹರಿಕಥೆಗಳಿಗೆ ಅವಕಾಶ ನೀಡಲಾಗುತ್ತಿದೆ.

ಗುರುಗಳ ಆರಾಧನೆ ಪ್ರಯುಕ್ತ ಸಸಿಗಳ ವಿತರಣೆ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕಲಾವಿದರ ಕುಟುಂಬಗಳಿಗೆ ಅಗತ್ಯ ಪಡಿತರ ವಿತರಿಸಲಾಗಿತ್ತು.

ಶಿವರಾತ್ರಿ ಜಾತ್ರೆಗೆ ಭಕ್ತರ ಸಮೂಹವೇ ಬರುತ್ತಿದ್ದು, ಎಲ್ಲರಿಗೂ ದಾಸೋಹದ ವ್ಯವಸ್ಥೆ ನಡೆಯುತ್ತಿದೆ. ಒಂದು ಗುಂಟೆ ವಿಸ್ತೀರ್ಣದಲ್ಲಿದ್ದ ದೇವಾಲಯ ಇಂದು 14 ಎಕರೆ ವಿಶಾಲ ಪ್ರದೇಶದಲ್ಲಿ ವಿಸ್ತರಿಸಿದೆ. ಮೂಲಸೌಕರ್ಯ ಸಹ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.