ADVERTISEMENT

‘ದೇವಸ್ಥಾನಗಳ ಪರಿಷತ್ತು’ ಸಭೆ ನಾಳೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 4:52 IST
Last Updated 2 ಮಾರ್ಚ್ 2024, 4:52 IST

ತುಮಕೂರು: ದೇವಸ್ಥಾನಗಳು ಹಾಗೂ ನಮ್ಮ ಸಂಸ್ಕೃತಿ ರಕ್ಷಣೆಗಾಗಿ ಚಿಂತನ, ಮಂಥನ ನಡೆಸಲು ಜಿಲ್ಲಾ ಮಟ್ಟದ ‘ದೇವಸ್ಥಾನಗಳ ಪರಿಷತ್ತು’ ಸಭೆ ಮಾರ್ಚ್ 3ರಂದು ನಗರದ ಜೆ.ಸಿ.ರಸ್ತೆ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ಹಿಂದೂ ಜನಜಾಗೃತಿ ಸಮಿತಿ ಹಾಗೂ ಕರ್ನಾಟಕ ದೇವಸ್ಥಾನ– ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಆಶ್ರಯದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕಾರ ಚಂದ್ರ ಮೊಗವೀರ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

ದೇವಸ್ಥಾನಗಳ ಸರ್ಕಾರೀಕರಣ, ದೈವಸ್ಥಾನಗಳನ್ನು ಅಪವಿತ್ರಗೊಳಿಸುತ್ತಿರುವುದು, ಮೂರ್ತಿ ಭಂಜನ, ಅನಧಿಕೃತವೆಂದು ದೇವಸ್ಥಾನ ಧ್ವಂಸಗೊಳಿಸುವುದು, ದೇಗುಲ ಜಮೀನು ಲೂಟಿ, ದೇವನಿಧಿ ಅಪವ್ಯಯ ಸೇರಿದಂತೆ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ. ದೇವಸ್ಥಾನಗಳಲ್ಲಿ ದೇವತಾತತ್ವ ಕಾಪಾಡುವುದು, ದೇವಸ್ಥಾನಗಳಲ್ಲಿ ಧರ್ಮಪ್ರಸಾರ ಮಾಡುವುದು, ಭಕ್ತಾದಿಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು, ದೇವಸ್ಥಾನಗಳ ಸಂಘಟನೆ, ವಸ್ತ್ರಸಂಹಿತೆ ಅಳವಡಿಸುವಂತೆ ಸಮಾವೇಶದಲ್ಲಿ ಒತ್ತಾಯಿಸಲಾಗುವುದು ಎಂದು ಅವರು ವಿವರಿಸಿದರು.

ADVERTISEMENT

ಜಿಲ್ಲೆಯಿಂದ 150ಕ್ಕೂ ಹೆಚ್ಚು ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು, ಪುರೋಹಿತರು, ಪ್ರತಿನಿಧಿಗಳು, ದೇಗುಲ ರಕ್ಷಣೆಗಾಗಿ ಹೋರಾಡುವ ವಕೀಲರು, ಧಾರ್ಮಿಕ ಚಿಂತಕರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಭೀಮಸಂದ್ರ ಗಣಪತಿ ದೇವಸ್ಥಾನದ ಅರ್ಚಕ ಜಯರಾಮ್, ಗುಡ್ಡದ ರಂಗನಾಥಸ್ವಾಮಿ ದೇವಸ್ಥಾನದ ಟ್ರಸ್ಟಿ ಮಂಜುನಾಥ್, ಕಾಳಿಕಾಂಬ, ವಿಶ್ವಕರ್ಮ, ಗಾಯತ್ರಿ ದೇವಿ, ವೀರ ಬ್ರಹ್ಮೇಂದ್ರ ಸ್ವಾಮಿಗಳ ದೇವಸ್ಥಾನದ ಅಧ್ಯಕ್ಷ ಚಂದ್ರಶೇಖರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.