ತುಮಕೂರು: ಜಾಗತೀಕರಣದ ವೈಫಲ್ಯಕ್ಕೆ ಸಾರ್ವಜನಿಕರು ಬಲಿಯಾಗುತ್ತಿದ್ದಾರೆ. ಹಲವು ರಾಷ್ಟ್ರಗಳ ಮಧ್ಯೆ ನಡೆಯುತ್ತಿರುವ ಯುದ್ಧ ನಿಲ್ಲದಿದ್ದರೆ ಸಾಮಾನ್ಯ ಜನ ಬೆಲೆ ತೆರಬೇಕಾಗುತ್ತದೆ ಎಂದು ಪರಿಸರವಾದಿ ಸಿ.ಯತಿರಾಜು ಆತಂಕ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಸಿಪಿಐ, ಸಿಪಿಎಂ, ಎಸ್ಯುಸಿಐ, ಎಡಪಕ್ಷಗಳಿಂದ ರಾಷ್ಟ್ರೀಯ ಸೌಹಾರ್ದತೆಯ ದಿನ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅಮೆರಿಕದ ಲಾಭಕೋರ ನೀತಿಗಾಗಿ ಯುದ್ಧ ನಡೆಯುತ್ತಿವೆ. ಈ ಯುದ್ಧದಿಂದ ಲಕ್ಷಾಂತರ ಜನರ ಜೀವನ ಬೀದಿಗೆ ಬರುತ್ತದೆ. ಯುದ್ಧಕೋರ ನೀತಿ ನಿಲ್ಲಬೇಕಾದರೆ ಜನ ಚಳವಳಿಗಳು ವ್ಯಾಪಕವಾಗಬೇಕು. ಇಸ್ರೇಲ್ ಎರಡು ವರ್ಷಗಳಿಂದ ಸತತವಾಗಿ ನಡೆಸುತ್ತಿರುವ ಅನಾಗರಿಕ ದಾಳಿ, ಮಿಲಿಟರಿ ಆಕ್ರಮಣದಿಂದ ಸಾವಿರಾರು ಜನ ಪ್ಯಾಲೆಸ್ತೀನಿಯರು ಕೊಲ್ಲಲ್ಪಟ್ಟಿದ್ದಾರೆ ಎಂದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್, ‘ಮೊದಲ ಹಂತದ ಕದನ ವಿರಾಮ ಪೂರ್ಣಗೊಂಡ ಕೂಡಲೇ ಇಸ್ರೇಲ್ ಗಾಜಾ ಮೇಲೆ ದಾಳಿ ಪುನರಾರಂಭಿಸಿತು. ಗಾಜಾಗೆ ಆಹಾರ, ನೀರು, ಇಂಧನ, ನೆರವು ಮತ್ತು ಇತರ ಎಲ್ಲ ಅಗತ್ಯ ವಸ್ತುಗಳ ಪೂರೈಕೆ ಕಡಿತಗೊಳಿಸಿದೆ. ಗಾಜಾ ಭಾಗದ ಜನರು ಹಸಿವಿನಿಂದ ಸಾಯುವಂತೆ ಮಾಡಲು ಇಸ್ರೇಲ್ ಉದ್ದೇಶಿಸಿದೆ’ ಎಂದು ಹೇಳಿದರು.
ಮುಖಂಡರಾದ ಎಂ.ವಿ.ಕಲ್ಯಾಣಿ, ಎನ್.ಕೆ.ಸುಬ್ರಮಣ್ಯ, ಅಪ್ಸರ್, ಕಂಬೇಗೌಡ, ಕಾಂತರಾಜು, ಕಲ್ಪನಾ, ರತ್ನಮ್ಮ, ಅಶ್ವಿನಿ, ನಾಗರಾಜು, ಇಂತಿಯಾಜ್, ಖಲೀಲ್, ಮಂಜುಳಾ ಮೊದಲಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.