ADVERTISEMENT

ಭವನದಲ್ಲಿ ಕೊಳೆಯುತ್ತಿವೆ ಪಡಿತರ ಕಿಟ್‌

ಕುಣಿಗಲ್‌: ಕಾರ್ಮಿಕರಿಗೆ ವಿತರಣೆಯಾಗಿಲ್ಲ– ಶಾಸಕರ ವಿರುದ್ಧ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 3:09 IST
Last Updated 10 ಅಕ್ಟೋಬರ್ 2020, 3:09 IST
ಕುಣಿಗಲ್ ಕಂದಾಯ ಭವನದಲ್ಲಿ ಕಾರ್ಮಿಕರಿಗೆ ವಿತರಣೆಯಾಗದೆ ಕೊಳೆಯುತ್ತಿರುವ ಕಾರ್ಮಿಕ ಇಲಾಖೆಯ ಪಡಿತರ ಕಿಟ್
ಕುಣಿಗಲ್ ಕಂದಾಯ ಭವನದಲ್ಲಿ ಕಾರ್ಮಿಕರಿಗೆ ವಿತರಣೆಯಾಗದೆ ಕೊಳೆಯುತ್ತಿರುವ ಕಾರ್ಮಿಕ ಇಲಾಖೆಯ ಪಡಿತರ ಕಿಟ್   

ಕುಣಿಗಲ್: ಕೊರೊನಾ ಸಂಕಷ್ಟ ಹಾಗೂ ಲಾಕ್‌ಡೌನ ಸಮಯದಲ್ಲಿ ಕೂಲಿ ಕಾರ್ಮಿಕರಿಗೆ ವಿತರಿಸಲು ಕಾರ್ಮಿಕ ಇಲಾಖೆಯಿಂದ ಸರಬರಾಜಾಗಿದ್ದ ನೂರಾರು ಪಡಿತರ ಸಾಮಗ್ರಿ ಕಿಟ್‌ಗಳು ಕಂದಾಯ ಭವನದಲ್ಲಿ ಕೊಳೆಯುತ್ತಿವೆ.

ಲಾಕ್‌ಡೌನ್‌ ಅವಧಿಯಲ್ಲಿ ಕಾರ್ಮಿಕರಿಗೆ ವಿತರಿಸಲು ಶಾಸಕ ಡಾ.ರಂಗನಾಥ್ ಮತ್ತು ಸಂಸದ ಡಿ.ಕೆ.ಸುರೇಶ್ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರ ಮನವೊಲಿಸಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ತಾಲ್ಲೂಕಿಗೆ 3 ಸಾವಿರ ಪಡಿತರ ಕಿಟ್‌ ಕೊಡಿಸಿದ್ದರು.

ಕಿಟ್‌ ವಿತರಣೆಯಲ್ಲಿ ಶಿಷ್ಟಾಚಾರ ಪಾಲಿಸಿಲ್ಲ ಎಂದು ಶಾಸಕರ ವಿರುದ್ಧ, ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ವಿರೊಧ ವ್ಯಕ್ತಪಡಿಸಿದ್ದರು.

ADVERTISEMENT

ತಾಲ್ಲೂಕಿನಲ್ಲಿ 7ಸಾವಿರ ಕಾರ್ಮಿಕರು ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ ಕಡುಬಡವರಿಗೆ ಮಾತ್ರ ಕಿಟ್ ವಿತರಿಸುವುದಾಗಿ ಶಾಸಕರು ಸ್ಪಷ್ಟಪಡಿಸಿದ್ದರು.

ಕಂದಾಯ ಭವನದಲ್ಲಿ ಇನ್ನೂ ನೂರಾರು ಕಿಟ್ ವಿತರಣೆಯಾಗದೆ ಕೊಳೆಯುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಕೂಲಿ ಕಾರ್ಮಿಕರಿಗೆ ಸಕಾಲದಲ್ಲಿ ಕಿಟ್ ವಿತರಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ಘಟಕದ ಉಪಾಧ್ಯಕ್ಷ ರಮೇಶ್ ಆರೋಪಿಸಿದ್ದಾರೆ.

‘ಶಾಸಕರು ತಮ್ಮ ಪ್ರಭಾವ ಬಳಸಿ 3 ಸಾವಿರ ಕಿಟ್‌ಗಳನ್ನು ತರಿಸಿದ್ದರೂ, ವಿತರಿಸುವಲ್ಲಿ ರಾಜಕೀಯ ಮಾಡಿದ್ದಾರೆ. ಕಿಟ್‌ನಲ್ಲಿನ ಕೆಲ ಪದಾರ್ಥಗಳ ಬಳಕೆ ಅವಧಿ ಮುಗಿದಿದೆ’ ಎಂದರು.

ತಾಲ್ಲೂಕಿನಲ್ಲಿರುವ ಎಲ್ಲ ಅಸಂಘಟಿತ ಕೂಲಿ ಕಾರ್ಮಿಕರಿಗೆ ಕಿಟ್ ವಿತರಣೆಯಾಗಿಲ್ಲ. ವಿತರಣೆ ಮಾಡುವ ನೆಪದಲ್ಲಿ ಕಳೆದ ಐದು ತಿಂಗಳಿಂದ ಕಂದಾಯ ಭವನದಲ್ಲಿಟ್ಟು
ಕೊಳೆಸುತ್ತಿದ್ದಾರೆ ಎಂದು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಕೃಷ್ಣರಾಜು ಆರೋಪಿಸಿದ್ದಾರೆ.

ಮಂಗಳವಾರ ರಾತ್ರಿ ಶಾಸಕರ ಆಪ್ತರು ಕಂದಾಯ ಭವನದಿಂದ ಪೊಲೀಸರಿಗೆ ಕಿಟ್‌ ವಿತರಿಸಿದ್ದು, ಎಲ್ಲ ಪೊಲೀಸರಿಗೂ ತಲುಪಿಲ್ಲ ಎಂಬ ಆಕ್ಷೇಪಗಳು ಕೇಳಿಬಂದಿವೆ.

‘ಕಿಟ್‌ನಲ್ಲಿನಲ್ಲಿರುವ ಕಳಪೆ ಪದಾರ್ಥಗಳನ್ನು ಬಿಟ್ಟು ಉಳಿದವೆಲ್ಲ ಖಾಲಿಯಾಗಿದೆ. ಅಧಿಕಾರಿಗಳು ಗಮನ ಹರಿಸಿ ವಿಲೇವಾರಿಗೆ ಕ್ರಮತೆಗೆದುಕೊಳ್ಳಬೇಕು’ ಎಂದು ಪುರಸಭೆ ಮಾಜಿ ಉಪಾಧ್ಯಕ್ಷ ಶ್ರೀನಿವಾಸ್ ಮನವಿ ಮಾಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.