ತುಮಕೂರು: ಕಣ್ಣಿಗೆ ಕಾಣದ ವೈರಾಣು ದೇಹ ಸೇರುವುದು ಗೊತ್ತಾಗುವುದಿಲ್ಲ. ಅದೇ ರೀತಿ ಮನೆಯಲ್ಲೇ ಇದ್ದು, ನಮಗೆ ನಾವೇ ಕೋಟೆ ಕಟ್ಟಿಕೊಂಡು ಗುಣಮುಖರಾಗಿದ್ದೇವೆ ಎಂದು ತುರುವೇಕೆರೆ ಪಟ್ಟಣದ ನಂದಿನಿ ಯೋಗಾನಂದ್ ಹೇಳುತ್ತಾರೆ.
ರೋಗ ಲಕ್ಷಣಗಳು ಕಂಡೊಡನೆ ಪರೀಕ್ಷೆಗೆ ಒಳಗಾದೆವು. ನನಗೆ, ನನ್ನ ಪತಿಗೆ ಸೋಂಕು ಇರುವುದು ಖಚಿತಪಟ್ಟಿತು. ರೋಗ ಉಲ್ಬಣಿಸದಂತೆ ತಡೆಯಲು ಹಾಗೂ ಬೇಗ ಗುಣಮುಖರಾಗಲು ಚಿಕಿತ್ಸೆ ಪಡೆದುಕೊಂಡೆವು. ವಯಸ್ಸಾದ ಅತ್ತೆ ಹಾಗೂ ಮಕ್ಕಳಿಗೆ ಸೋಂಕು ಹರಡಬಾರದು ಎಂಬ ಕಾರಣಕ್ಕೆ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾದೆವು. ನಂತರ ಮನೆಗೆ ಹಿಂದಿರುಗಿ 14 ದಿನಗಳ ಕಾಲ ಹೋಮ್ ಐಸೋಲೇಷನ್ಗೆ ಒಳಗಾದೆವು ಎಂದು ನೆನಪಿಸಿಕೊಳ್ಳುತ್ತಾರೆ.
ಗೋಡೆಗಳ ಮಧ್ಯೆ 14 ದಿನ ಕಳೆಯಲು ನಮ್ಮ ಹವ್ಯಾಸಗಳು ಸಹಾಯ ಮಾಡಿದವು. ಮನೆಯವರು ಪುಸ್ತಕಗಳನ್ನು ಓದಿದರೆ, ನಾನು ‘ರಿವೈಂಡ್ ಇನ್ ಮೈ ಲೈಫ್’ ಎಂಬಂತೆ ಬಾಲ್ಯದಲ್ಲಿ ಮಾಡುತ್ತಿದ್ದ ಪೆನ್ಸಿಲ್ ಸ್ಕೆಚ್ ಮುಂದುವರಿಸಿದೆ. ಅಷ್ಟೂ ದಿನಗಳ ಕಾಲ ಧೈರ್ಯ ಹಾಗೂ ನೆಮ್ಮದಿಯಿಂದ ಕಾಲ ಕಳೆಯಲು ಮನೆಯವರು, ವೈದ್ಯರು, ಸ್ನೇಹಿತರು ಸಲಹೆ ನೀಡಿದರು ಎಂದು ಸ್ಮರಿಸುತ್ತಾರೆ.
ನಮ್ಮಿಂದ ಯಾರಿಗೂ ರೋಗ ಹರಡದಂತೆ ಕೈಗೊಂಡ ಮುಂಜಾಗ್ರತೆ ನಮಗೆ ಆತ್ಮ ತೃಪ್ತಿ ನೀಡಿದೆ. ರೋಗ ಬರದಂತೆ ಎಚ್ಚರವಹಿಸುವುದು ಕ್ಷೇಮ. ಒಂದು ವೇಳೆ ರೋಗ ಬಂದರೆ ಪರರಿಗೆ ಹರಡದಂತೆ ಜವಾಬ್ದಾರಿಯಿಂದ ನಡೆದುಕೊಳ್ಳುವುದು ಉತ್ತಮ ಎಂದು ಸಲಹೆ ನೀಡುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.