ಕುಣಿಗಲ್: ತಾಲ್ಲೂಕಿನ ಬಾಗೇನಹಳ್ಳಿ ಗ್ರಾಮದ ಯುವಕನೊಬ್ಬನ ಸಮಯಪ್ರಜ್ಞೆಯಿಂದಾಗಿ ದೇವಾಲಯದ ಕಳ್ಳತನ ತಪ್ಪಿದ್ದು, ಪರಾರಿಯಾಗುತ್ತಿದ್ದ ಕಳ್ಳ ಸಿಕ್ಕಿಬಿದ್ದಿದ್ದಾನೆ.
ಗ್ರಾಮದ ಚನ್ನಿಗರಾಯಸ್ವಾಮಿ ದೇವಾಲಯದ ಬಳಿ ಶನಿವಾರ ರಾತ್ರಿ ಕಳ್ಳತನ ಮಾಡಲು ಬಂದ ಮೂವರು ಮೊದಲಿಗೆ ಹಾರೆಕೋಲು ಬಳಸಿ ದೇವಾಲಯದ ಬೀಗ ಮುರಿದು, ಒಳ ಪ್ರವೇಶಿಸಿದರು. ಸದ್ದು ಕೇಳಿ ದೇವಾಲಯದ ಮುಂದಿನ ಮನೆಯ ಮೇಲಿದ್ದ ಹೇಮಂತ್ ಕುಮಾರ್ ನೋಡಿ ಮೊದಲಿಗೆ ಗಾಬರಿಗೊಂಡರೂ ಚೇತರಿಸಿಕೊಂಡು ಕೆಳಗೆ ಇಳಿದು ಅಕ್ಕಪಕ್ಕದವರನ್ನು ಕರೆದುಕೊಂಡು ದೇವಾಲಯವನ್ನು ಸುತ್ತುವರೆದರು. ಈ ಸಮಯದಲ್ಲಿ ಕಳ್ಳರು ಹುಂಡಿ ದೋಚಲು ಹಾರೆಕೋಲು ಬಳಸುತ್ತಿದ್ದು ಗ್ರಾಮಸ್ಥರನ್ನು ಕಂಡು ಪರಾರಿಯಾದರು.
ಗ್ರಾಮಸ್ಥರು ಕಳ್ಳರನ್ನು ಹಿಡಿಯಲು ಬೆನ್ನಟ್ಟಿದರು. ಓಡುವ ಭರದಲ್ಲಿ ಒಬ್ಬ ಬಿದ್ದು ಕಾಲು ಮುರಿದುಕೊಂಡಿದ್ದು, ಇಬ್ಬರು ಪರಾರಿಯಾಗಿದ್ದಾರೆ. ನಂತರ ಗ್ರಾಮಸ್ಥರು ಪೊಲೀಸರಿಗೆ ನೀಡಿದ ಮಾಹಿತಿ ಮೇರೆಗೆ ಗಾಯಗೊಂಡಿದ್ದ ಕಳ್ಳನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆಂಧ್ರಮೂಲದ ವೆಂಕಣ್ಣ ಎಂದು ಗುರುತಿಸಲಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.