ವೈ.ಎನ್. ಹೊಸಕೋಟೆ/ ಪಾವಗಡ: ತಾಲ್ಲೂಕಿನ ವದನಕಲ್ಲು ಮತ್ತು ಮಾರಮ್ಮನಹಳ್ಳಿ ಗ್ರಾಮದಲ್ಲಿ ಮಾರ್ಚ್ 10ರಂದು ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ನಡೆಯಲಿದೆ.
ಗುರು ತಿಪ್ಪೇರುದ್ರಸ್ವಾಮಿಯು ಪವಾಡಗೈದ ನಾಯಕನಹಟ್ಟಿ, ಎರಡುಕೆರೆ, ವನದಕಲ್ಲು, ಮಾರಮ್ಮನಹಳ್ಳಿ ಮತ್ತು ಕೊಂಡ್ಲಹಳ್ಳಿಯಲ್ಲಿ ಪ್ರತಿವರ್ಷ ಫಾಲ್ಗುಣ ಮಾಸದ ಚಿತ್ತಾ ನಕ್ಷತ್ರದಂದು ಏಕಕಾಲಕ್ಕೆ ರಥೋತ್ಸವ ನಡೆಯುವುದು ಸಂಪ್ರದಾಯವಾಗಿದೆ.
ರಥೋತ್ಸವದ ಅಂಗವಾಗಿ ವದನಕಲ್ಲು ಗ್ರಾಮದಲ್ಲಿ ಮಾರ್ಚ್ 8ರಿಂದ ಎಂಟು ದಿನಗಳ ಕಾಲ ಜಾತ್ರಾ ಮಹೋತ್ಸವ ನೆರವೇರಲಿದೆ. ಬುಧವಾರ ಗಂಗಾಪೂಜೆ, ಕಳಶ ಸ್ಥಾಪನೆ, ನಂದಿಧ್ವಜ ಪೂಜೆ, ಕಂಕಣ ಧಾರಣೆ, ಗುರುವಾರ ರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ, ಶುಕ್ರವಾರ ರಥೋತ್ಸವ, ಶನಿವಾರ ಕಳಶಾರಾಧನೆ ಮತ್ತು ಎಲೆಪೂಜೆ, ಭಾನುವಾರ ಕೊಬ್ಬರಿ ಕರ್ಪೂರ ಅಗ್ನಿಗುಂಡ ಮತ್ತು ಬಂಡಿ ಉತ್ಸವ ನಡೆಯಲಿದೆ.
ಸೋಮವಾರ ಹೂವಿನ ರಥೋತ್ಸವ, ಮಂಗಳವಾರ ವಸಂತೋತ್ಸವ ಹಾಗೂ ಬುಧವಾರ ಭಿಕ್ಷಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಾತ್ರೆಯಲ್ಲಿ ಕಲಾವಿದರಿಂದ ಕುರುಕ್ಷೇತ್ರ ನಾಟಕ ಪ್ರದರ್ಶನಗೊಳ್ಳಲಿದೆ.
ಮಾರಮ್ಮನಹಳ್ಳಿ ಗದ್ದುಗೆಯಲ್ಲಿ ಐದು ದಿನಗಳ ಕಾಲ ವಿಶೇಷ ಪೂಜಾ ಕೈಂಕರ್ಯ ನೆರವೇರಲಿವೆ. ಬುಧವಾರ ಗಂಗಾಪೂಜೆ, ಧ್ವಜಾರೋಹಣ ಮತ್ತು ಪಲ್ಲಕ್ಕಿ ಉತ್ಸವ, ಗುರುವಾರ ಗಣಂತೇರು, ಶುಕ್ರವಾರ ಕೊಬ್ಬರಿ ಕರ್ಪೂರ ಅಗ್ನಿಗೊಂಡ, ಸಂಜೆ ರಥೋತ್ಸವ ನಡೆಯಲಿದೆ. ಶನಿವಾರ ಉಟ್ಲು ಪರಿಷೆ, ಭಾನುವಾರ ವಸಂತೋತ್ಸವ ಮತ್ತು ಹೂವಿನ ಪಲ್ಲಕ್ಕಿ ಕಾರ್ಯಕ್ರಮ ನೆರವೇರಲಿವೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ದೇವಸ್ಥಾನದ ಸಮಿತಿ ಪ್ರಕಟಣೆಯಲ್ಲಿ ಮನವಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.