ADVERTISEMENT

ಬಡತನದಲ್ಲಿ ಅರಳಿದ ‘ದೀಪ್ತಿ’

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 14:42 IST
Last Updated 14 ಜುಲೈ 2020, 14:42 IST
ತಾಯಿ ಜತೆ ಸಂಭ್ರಮದಲ್ಲಿ ದೀಪ್ತಿ
ತಾಯಿ ಜತೆ ಸಂಭ್ರಮದಲ್ಲಿ ದೀಪ್ತಿ   

ತುಮಕೂರು: ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶೇ 98.83 ಫಲಿತಾಂಶ ಪಡೆದು ಗಮನ ಸೆಳೆಯುತ್ತಿರುವ ಎ.ದೀಪ್ತಿ ಬಡತನದಲ್ಲಿ ಅರಳಿದ ಪ್ರತಿಭೆ ಎಂದರೆ ಖಂಡಿತ ಅತಿಶಯವಲ್ಲ.

ಅವರ ತಂದೆ ಅಂಜನಾಚಾರ್ ಗ್ಯಾರೇಜ್‌ನಲ್ಲಿ ಕೆಲಸ ಮಾಡುವರು. ತಾಯಿ ಜಯಲಕ್ಷ್ಮಿ ಗೃಹಿಣಿ. ಇಂತಹ ಕುಟುಂಬದ ಕುಡಿ ದೀಪ್ತಿ. ಬಡತನ ರೇಖೆಗಿಂತ ಕೆಳಗಿರುವ ಈ ಕುಟುಂಬಕ್ಕೆ ತಮ್ಮ ಪುತ್ರಿಯನ್ನು ಚೆನ್ನಾಗಿ ಓದಿಸಬೇಕು ಎನ್ನುವ ಹೆಬ್ಬಯಕೆ. ಇದಕ್ಕೆ ಪೂರಕವಾಗಿದೆ ದೀಪ್ತಿ ವ್ಯಾಸಂಗ.

‘ಅಪ್ಪ, ಅಮ್ಮನಿಗೆ ನಾನು ಚೆನ್ನಾಗಿ ಓದಬೇಕು ಎನ್ನುವ ಆಸೆ. ನನಗೂ ಏನಾದರೂ ಸಾಧನೆ ಮಾಡಬೇಕು ಎನ್ನುವ ತುಡಿತ. ಸಾಧಕರನ್ನು ನೋಡಿದಾಗ ಖುಷಿ ಆಗುತ್ತದೆ. ಅಣ್ಣ ಖಾಸಗಿ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಾನೆ. ಮನೆಯ ಎಲ್ಲರ ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು’ ಎಂದು ಖುಷಿಯಿಂದ ನುಡಿಯುವರು ದೀಪ್ತಿ.

ADVERTISEMENT

ಶಿಕ್ಷಕರಾದ ರಂಗಸ್ವಾಮಿ, ಸೌಮ್ಯ ಮೇಡಂ ನನಗೆ ಎಸ್ಸೆಸ್ಸೆಲ್ಸಿಯಿಂದಲೂ ಪ್ರೋತ್ಸಾಹ ನೀಡುತ್ತಿದ್ದಾರೆ. ವಿದ್ಯಾನಿಧಿ ಕಾಲೇಜಿನ ಮುಖ್ಯಸ್ಥರಾದ ಪ್ರದೀಪ್ ಸರ್, ಪ್ರಾಂಶುಪಾಲರಾದ ಸಿದ್ದೇಶ್ವರಯ್ಯ ಸರ್ ಅವರ ಸಹಕಾರ ಪ್ರಮುಖವಾದುದು. ನಮ್ಮ ಮನೆಯ ಬಡತದ ಸ್ಥಿತಿ ಅವರಿಗೆ ಗೊತ್ತಿತ್ತು. ಪುಸ್ತಕ ಖರೀದಿಯ ಶಕ್ತಿ ಇಲ್ಲದಿದ್ದಾಗ ಅವರೇ ಕೊಡಿಸಿದ್ದಾರೆ ಎಂದು ಸ್ಮರಿಸುವರು.

ಇಲ್ಲಿಯವರೆಗೂ ಮನೆ ಪಾಠಕ್ಕೆ ಹೋಗಿಲ್ಲ. ಕಾಲೇಜಿನಲ್ಲಿ ಕೇಳಿದ ಪಾಠವನ್ನು ಮನೆಗೆ ಬಂದ ನಂತರ ಮತ್ತೆ ಪುನರಾವರ್ತನೆ ಮಾಡುತ್ತಿದ್ದೆ. ಮುಂದೆ ವಿಜ್ಞಾನಿ ಆಗಬೇಕು ಎನ್ನುವ ಆಸೆ ಇದೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.