ಕುಣಿಗಲ್: ಪಟ್ಟಣದ ಆಶ್ರಯ ಕಾಲೊನಿ ಬಳಿ ಶುಕ್ರವಾರ ರೈಲು ಹಳಿಗಳ ಮೇಲೆ ಹೋದ ಕುರಿಗಳನ್ನು ಪಾರು ಮಾಡಲು ಹೋದ ಕುರಿಗಾಹಿ ಮೇಲೆ ಗೂಡ್ಸ್ ರೈಲು ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜತೆಗೆ 13 ಕುರಿಗಳು ರೈಲಿಗೆ ಸಿಲುಕಿ ಸತ್ತಿವೆ.
ಪ್ರಕರಣ ದಾಖಲಾಗುವ ಭೀತಿಯಿಂದ ಗ್ರಾಮಸ್ಥರು ಕುರಿಗಾಹಿ ಶವವನ್ನು ಕ್ಷಣಾರ್ಧದಲ್ಲೇ ತೆರವುಗೊಳಿಸಿ ಅಂತ್ಯಕ್ರಿಯೆ ಮಾಡಿದ್ದಾರೆ.
ನೇಪಾಳದ ಧನ್ ವೀರ್ (50) ಮೃತ ಕುರಿಗಾಹಿ. ಅವರು ಐದು ವರ್ಷದಿಂದ ಸಹೋದರನ ಮನೆಯಲ್ಲಿದ್ದುಕೊಂಡು ಕುರಿ ಮೇಯಿಸುತ್ತಿದ್ದರು. ಶುಕ್ರವಾರ ಬೆಳಿಗ್ಗೆ ಕುರಿಗಳನ್ನು ಮೇಯಿಸುತ್ತಿರುವಾಗ ಆಶ್ರಯ ಕಾಲೊನಿ ಬಳಿಯ ರೈಲು ಹಳಿಗಳ ಮೇಲೆ ಕುರಿಗಳು ಹೋಗುತ್ತಿದ್ದವು. ಆಗ ಗೂಡ್ಸ್ ಗಾಡಿ ಬಂದಿದ್ದನ್ನು ಕಂಡ ಕುರಿಗಾಹಿ ಕುರಿಗಳನ್ನು ಪಾರು ಮಾಡಲು ಹೋದಾಗ ರೈಲು ಚಕ್ರಗಳಿಗೆ ಸಿಲುಕಿದರು.
ಇನ್ನೂ ಕೆಲವರು ರೈಲ್ವೆ ಹಳಿ ನಿಷೇಧಿತ ಪ್ರದೇಶವಾಗಿದ್ದು, ಕುರಿ ಮೇಯಿಸಲು ಬಂದಿದ್ದು ಅಪರಾಧ. ಇಲಾಖೆಯವರು ನಿಷೇಧಿತ ಪ್ರದೇಶಕ್ಕೆ ಪ್ರವೇಶ ಮಾಡಿದ ಕಾರಣ ಮೃತನ ಸಂಬಂಧಿಕರ ಮೇಲೆ ಪ್ರಕರಣ ದಾಖಲಿಸಿವುದಾಗಿ ತಿಳಿಸಿದ ಕಾರಣ ಹೆದರಿದ ಸಂಬಂಧಿಗಳು ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಅಂತ್ಯಕ್ರಿಯೆ ನಡೆಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಕೆಲ ಗ್ರಾಮಸ್ಥರು ಮಾಂಸದ ಆಸೆಗೆ ಸತ್ತು ಬಿದ್ದಿದ್ದ ಕುರಿಗಳ ಕಡೆ ಗಮನ ಹರಿಸಿದರೇ ಹೊರತು ಮೃತ ವ್ಯಕ್ತಿಯ ಕಡೆ ಗಮನ ಕೊಡಲಿಲ್ಲ ಎಂದು ಹಿರಿಯ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.