ADVERTISEMENT

ವರ್ಷದಲ್ಲಿ 11 ಸಾವಿರ ಮರಗಳಿಗೆ ಕೊಡಲಿ!

ಸ್ಮಾರ್ಟ್‌ಸಿಟಿಗೆ ‘ಮರಬಲಿ’ l ಮೂರು ರಾಷ್ಟ್ರೀಯ ಹೆದ್ದಾರಿ ಮತ್ತು ಒಂದು ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿ

ಡಿ.ಎಂ.ಕುರ್ಕೆ ಪ್ರಶಾಂತ
Published 11 ಜನವರಿ 2021, 19:38 IST
Last Updated 11 ಜನವರಿ 2021, 19:38 IST
ಬೀದರ್– ಶ್ರೀರಂಗಪಟ್ಟಣ ರಸ್ತೆ ಅಭಿವೃದ್ಧಿಗಾಗಿ ತಿಪಟೂರು ತಾಲ್ಲೂಕು ಕೆ.ಬಿ.ಕ್ರಾಸ್ ಬಳಿ ಮರ ಕಡಿದಿರುವುದು
ಬೀದರ್– ಶ್ರೀರಂಗಪಟ್ಟಣ ರಸ್ತೆ ಅಭಿವೃದ್ಧಿಗಾಗಿ ತಿಪಟೂರು ತಾಲ್ಲೂಕು ಕೆ.ಬಿ.ಕ್ರಾಸ್ ಬಳಿ ಮರ ಕಡಿದಿರುವುದು   

ತುಮಕೂರು:ಸ್ಮಾರ್ಟ್‌ಸಿಟಿ ಮತ್ತು ಹೆದ್ದಾರಿ ಕಾಮಗಾರಿಗಾಗಿ 2020ನೇ ಸಾಲಿನಲ್ಲಿಜಿಲ್ಲೆಯ ಸರ್ಕಾರಿ ಜಮೀನು ಮತ್ತು ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟ 11 ಸಾವಿರಕ್ಕೂ ಹೆಚ್ಚು ಮರಗಳು ಬಲಿಯಾಗಿವೆ.

ಜಿಲ್ಲೆಯಲ್ಲಿ ಹಾದು ಹೋಗಿರುವ ಮೂರು ರಾಷ್ಟ್ರೀಯ ಹೆದ್ದಾರಿ ಮತ್ತು ಒಂದು ರಾಜ್ಯ ಹೆದ್ದಾರಿಯ ವಿಸ್ತರಣೆಯ ಜತೆಗೆ ಸ್ಮಾರ್ಟ್‌ಸಿಟಿ ಕಾಮಗಾರಿ ಭರದಿಂದ ಸಾಗಿದ್ದು, ಅಭಿವೃದ್ಧಿಯ ಹೆಸರಿನಲ್ಲಿ ಮರ ಕಡಿಯುವ ಪ್ರಕ್ರಿಯೆ ಈಗಲೂ ಮುಂದುವರಿದಿದೆ. ಮರ ಕಡಿಯಲು ಅನುಮತಿ ಕೋರಿ ಅರಣ್ಯ ಇಲಾಖೆಗೆ ಪ್ರಸ್ತಾವಗಳು ಸಲ್ಲಿಕೆಯಾಗುತ್ತಲೇ ಇವೆ.

ಇದರಿಂದ ಜಿಲ್ಲೆಯ ಪರಿಸರದ ಮೇಲೆ ಗಂಭೀರ ಪರಿಣಾಮವಾಗುತ್ತದೆ ಎಂದು ಆರೋಪಿಸಿ ಪರಿಸರಪ್ರಿಯರು ‘ಅಪ್ಪಿಕೊ’ ಮಾದರಿಯ ಚಳವಳಿ ಸಹ ನಡೆಸಿದ್ದರು. ಇದರಿಂದ ಏನೂ ಪ್ರಯೋಜನವಾಗಿಲ್ಲ.

ADVERTISEMENT

‘ಅರಣ್ಯ ಇಲಾಖೆಯು ನಿಯಮಾನುಸಾರ ತೆರಿಗೆ ಕಟ್ಟಿಸಿಕೊಂಡು 11,333 ಮರಗಳನ್ನು ಕಡಿಯಲು ಅನುಮತಿ ನೀಡಿದೆ. ಈಗಾಗಲೇ ಬಹಳಷ್ಟು ಮರಗಳನ್ನು ಕಡಿಯಲಾಗಿದೆ. ಮತ್ತಷ್ಟು ಮರಗಳು ನೆಲಕ್ಕೊರಗುವ ಹಂತದಲ್ಲಿವೆ. ಇದು ಬರೀ ಸರ್ಕಾರಿ ಜಮೀನು ಅರಣ್ಯ ಇಲಾಖೆ ವ್ಯಾಪ್ತಿಯ ಮರಗಳ ಸಂಖ್ಯೆ. ಇನ್ನೂ ಖಾಸಗಿ ಜಮೀನುಗಳಲ್ಲಿ ಕಡಿದ ಮರಗಳನ್ನು ಲೆಕ್ಕಹಾಕಿದರೆ ಇದರ ಮೂರು ಪಟ್ಟು ಮರಗಳು ಧರೆಗೆ ಉರುಳಿವೆ’ ಎನ್ನುತ್ತವೆ ಅರಣ್ಯ ಇಲಾಖೆ ಮೂಲಗಳು.

ಕುಣಿಗಲ್, ಗುಬ್ಬಿ, ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಮರಗಳನ್ನು ಕಡಿಯಲಾಗಿದೆ. ರಾಜ್ಯದಲ್ಲಿಯೇ ತೀವ್ರ ಅಂತರ್ಜಲ ಕುಸಿದಿರುವ ತಾಲ್ಲೂಕುಗಳಲ್ಲಿ ಚಿಕ್ಕನಾಯಕನಹಳ್ಳಿ ಎರಡನೇ ಸ್ಥಾನದಲ್ಲಿದೆ.

‘ಅಭಿವೃದ್ಧಿಗಾಗಿ ಮರ ಕಡಿಯುವುದು ಅನಿವಾರ್ಯ ಎನ್ನುವಂತೆ ಆಗಿದೆ. ಅನುಮತಿ ಕೊಡುವುದು ಸ್ವಲ್ಪ ತಡವಾದರೂ ಅರಣ್ಯ ಇಲಾಖೆಯವರು ಅಭಿವೃದ್ಧಿ ವಿರೋಧಿಗಳು ಎಂದು ಜನಪ್ರತಿನಿಧಿಗಳು ದೂರುತ್ತಾರೆ’ ಎಂದು ಇಲಾಖೆ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

ಒಂದು ಮರ ಕಡಿದರೆ 10 ಸಸಿ ನಾಟಿ

ಒಂದು ಮರ ಕಡಿದರೆ ಅದಕ್ಕೆ ಪ್ರತಿಯಾಗಿ 10 ಸಸಿಗಳನ್ನು ಬೆಳೆಸಲಾಗುವುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪ್ರತಿ ಸಸಿ ಬೆಳೆಸಲು ಅರಣ್ಯ ಇಲಾಖೆಗೆ ₹ 373 ನೀಡುತ್ತದೆ. ಹೆದ್ದಾರಿ ಕಾಮಗಾರಿ ಪೂರ್ಣವಾದ ನಂತರ ಇವುಗಳ ಎರಡೂ ಬದಿಯಲ್ಲಿ ಸಸಿಗಳನ್ನು ನೆಡಲಾಗುವುದು’ ಎಂದು ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಗಿರೀಶ್ ಮಾಹಿತಿ ನೀಡಿದರು.

‘ಇದರ ಜತೆಗೆ ಹೆದ್ದಾರಿಯ ಎರಡೂ ಬದಿಯಲ್ಲಿ ಸಸಿಗಳನ್ನು ನೆಡಲು ಪ್ರತಿ ಒಂದು ಕಿ.ಮೀ.ಗೆ ಹೆದ್ದಾರಿ ಪ್ರಾಧಿಕಾರದವರು ₹ 3 ಲಕ್ಷ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.