
ಕುಣಿಗಲ್: ನಾಣ್ಯಗಳು ಆರ್ಥಿಕ ಇತಿಹಾಸದ ಕುರುಹು, ಭಾರತವನ್ನಾಳಿದ ರಾಜರ ಕೊಡುಗೆ, ಸಾಧನೆ, ದಿಗ್ವಿಜಯಗಳ ನೆನಪಿಗಾಗಿ ನಾಣ್ಯಗಳನ್ನು ಚಲಾವಣೆಗೆ ತರಲಾಗುತ್ತಿತ್ತು. ಹಳೆಯ ನಾಣ್ಯಗಳು ಆರ್ಥಿಕ ಇತಿಹಾಸ ನೆನಪಿಸುವ ಮೂಲ ಎಂದು ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಟಿ.ಈಶ್ವರಪ್ಪ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ, ಪರಂಪರಾ ಕೂಟ ಮತ್ತು ಐ.ಕ್ಯೂ.ಎ.ಸಿ. ವತಿಯಿಂದ ನಡೆದ ಐತಿಹಾಸಿಕ ನಾಣ್ಯಗಳ ಪ್ರದರ್ಶನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ವಸ್ತು ವಿನಿಮಯ ಪದ್ಧತಿ ಇತ್ತು. ವೇದಗಳ ಕಾಲದಲ್ಲಿ ಚಿನ್ನ, ಬೆಳ್ಳಿ, ತಾಮ್ರ ಲೋಹಗಳ ಮೂಲಕ ನಾಣ್ಯಗಳನ್ನು ಚಲಾವಣೆಗೆ ತರುತ್ತಿದ್ದರು. ರಾಜರು ಅವರ ಚಿತ್ರ, ಕಾಲ, ರಾಜಮನೆತನದ ವಿವರ ಹಾಕಿಸುತ್ತಿದ್ದರು. ನಾಣ್ಯಗಳಿಗೆ ವರಹ, ಗದ್ಯಾಣ, ಹೊನ್ನು, ಪದ್ಮಟಂಕಾ ಎಂದು ಕರೆಯುತ್ತಿದ್ದರು. ಸಂಶೋಧಕಾರಾದ ಡಾ.ಎ.ವಿ.ನರಸಿಂಹಮೂರ್ತಿಯವರು ರಚಿಸಿದ ‘ಭಾರತದಲ್ಲಿ ನಾಣ್ಯ ಪರಂಪರೆ’ ಪುಸ್ತಕದಲ್ಲಿ ಭಾರತದ ನಾಣ್ಯ ಪರಂಪರೆಯನ್ನು ಸ್ಥೂಲವಾಗಿ ವಿವರಿಸಿದೆ. ಯುವಜನರು ನಾಣ್ಯಗಳ ವೀಕ್ಷಿಸಿ ಇತಿಹಾಸ ಅರಿಯಬೇಕು ಎಂದು ಹೇಳಿದರು.
ಪ್ರಾಂಶುಪಾಲ ರಾಮಾಂಜನಪ್ಪ, ಭಾರತೀಯ ಸಂಸ್ಕೃತಿಯ ಸಂಕೇತವಾದ ಹಳೆಯ ನಾಣ್ಯಗಳು, ಭವಿಷ್ಯದ ಜನರಿಗೆ ಐತಿಹಾಸಿಕ ಮಹತ್ವ ಮನವರಿಕೆ ಮಾಡಿಕೊಡಬೇಕು. ಭಾರತವು ಸಂಪದ್ಭರಿತ ದೇಶವಾಗಿದ್ದು, ವ್ಯಾಪಾರಕ್ಕಾಗಿ ಬಂದ ವಿದೇಶಿಯರು ಚಿನ್ನ, ವಜ್ರ, ನಾಣ್ಯಗಳನ್ನು ಹಡಗಿನಲ್ಲಿ ಸಾಗಿಸಿದರು. ಹಳೆಯ ನಾಣ್ಯಗಳು ಸಂಗ್ರಹಿಸಿ, ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಿ ಎಂದರು.
ಹಳೆಯ ನಾಣ್ಯ ಸಂಗ್ರಹಗಾರ ಮಲ್ಲಿಗಪ್ಪಾಚಾರ್ ಸಂಗ್ರಹಿಸಿದ ಹಳೆಯ ನಾಣ್ಯಗಳ ಪ್ರದರ್ಶನ ನಡೆಯಿತು.
ಐ.ಕ್ಯೂ.ಎ.ಸಿ. ಸಂಚಾಲಕ ಟಿ.ಎನ್.ನರಸಿಂಹಮೂರ್ತಿ, ಎಂ.ಕೆ.ಮಂಜುಳ, ನಾಗಮ್ಮ, ರಾಧಾಕೃಷ್ಣ, ಅನಿತಲಕ್ಷ್ಮಿ, ನಿರ್ಮಲ, ಪಿ.ರಾಧಾ, ವಿಷ್ಣು, ರವಿಕುಮಾರ್, ಗಂಗಾಧರ್, ಧರಣೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.