ತುಮಕೂರು: ಸೈಬರ್ ಠಾಣೆಯಲ್ಲಿ ದಾಖಲಾದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ₹20.36 ಲಕ್ಷ ಕಳೆದುಕೊಂಡಿದ್ದಾರೆ.
ತಿಪಟೂರಿನ ಕೆ.ಆರ್.ಬಡಾವಣೆಯ ಎನ್.ನರಸಿಂಹಸ್ವಾಮಿ ಎಂಬುವರಿಗೆ ಫೇಸ್ಬುಕ್ನಲ್ಲಿ ಪರಿಚಯವಾದ ಗೆಳತಿ ಜೆಸ್ಸಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ದುಪ್ಪಟ್ಟು ಲಾಭ ಗಳಿಸಬಹುದು ಎಂದು ನಂಬಿಸಿ ಹಣ ವಂಚಿಸಿದ್ದಾಳೆ.
ಲಂಡನ್ನ ಜೆಸ್ಸಿ ಹೆಸರಿನ ಫೇಸ್ಬುಕ್ ಖಾತೆಯಿಂದ ರಿಕ್ವೆಸ್ಟ್ ಬಂದಿದ್ದು ನರಸಿಂಹಸ್ವಾಮಿ ಅದನ್ನು ಸ್ವೀಕರಿಸಿದ್ದಾರೆ. ಎಎಂಎಸ್ಪಿಎಲ್ ಆ್ಯಪ್ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ. ನಂತರ ಜೆಸ್ಸಿ, ನಿತೀಶ್ ಎಂಬುವರು ತಿಳಿಸಿದಂತೆ ಹಂತ ಹಂತವಾಗಿ ಒಟ್ಟು ₹11,35,042 ಹಣ ಆರ್ಟಿಜಿಎಸ್ ಮುಖಾಂತರ ವರ್ಗಾವಣೆ ಮಾಡಿದ್ದಾರೆ.
ಯಾವುದೇ ಹಣ ವಾಪಸ್ ಬಂದಿಲ್ಲ. ಈ ಬಗ್ಗೆ ನಿತೀಶ್ ಬಳಿ ಕೇಳಿದಾಗ ಇನ್ನೂ ₹3 ಲಕ್ಷ ವರ್ಗಾಯಿಸಿದರೆ ಮಾತ್ರ ಬಾಕಿ ಹಣ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ನಂತರ ಎಎಂಎಸ್ಪಿಎಲ್ ಆ್ಯಪ್ ಕೂಡ ಓಪನ್ ಆಗಿಲ್ಲ. ಇದರಿಂದ ಅನುಮಾನಗೊಂಡು ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ಮೆಗಾ ಗ್ಯಾಸ್ ಹೆಸರಲ್ಲಿ ಮೋಸ: ನಗರದ ಬನಶಂಕರಿಯ ಟಿ.ಪರಮೇಶ್ವರ ಅವರಿಗೆ ಮೆಗಾ ಗ್ಯಾಸ್ ಹೆಸರಿನಲ್ಲಿ ₹9 ಲಕ್ಷ ವಂಚಿಸಲಾಗಿದೆ. ವಂಚಕರು ಗ್ಯಾಸ್ ಹಣ ಬಾಕಿ ಇದ್ದು ಇವತ್ತೇ ಪಾವತಿ ಮಾಡುವಂತೆ ‘ಬಿಲ್ ಅಪ್ಡೇಟ್ ಎಪಿಕೆ’ ಫೈಲ್ ಲಿಂಕ್ ಕಳುಹಿಸಿದ್ದಾರೆ. ಸದರಿ ಫೈಲ್ ಕ್ಲಿಕ್ ಮಾಡಿದ ಪರಮೇಶ್ವರ ಬ್ಯಾಂಕ್ ಖಾತೆ ಮತ್ತು ಪಾಸ್ವಾರ್ಡ್ ಉಲ್ಲೇಖಿಸಿ ₹13 ಬಾಕಿ ಹಣ ಪಾವತಿಸಲು ಪ್ರಯತ್ನಿಸಿದ್ದಾರೆ. ಆಗ ಸರ್ವರ್ ಡೌನ್ ಎಂದು ತೋರಿಸಿದೆ.
ಅಂದೇ ಸಂಜೆ ಅಪರಿಚಿತ ವ್ಯಕ್ತಿ ಕರೆ ಮಾಡಿ ನಿಮ್ಮ ಬಿಲ್ ಅಪ್ಡೇಟ್ ಆಗಿದೆ ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲಿಯೇ ಅವರ ಖಾತೆಯಿಂದ ಹಂತ ಹಂತವಾಗಿ ₹9,01,246 ಹಣ ಕಡಿತವಾಗಿದೆ. ಹಣ ವಂಚಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.