
ತುಮಕೂರು: ಜಿಲ್ಲೆಯಲ್ಲಿ ಪ್ರಸ್ತುತ ₹10 ಸಾವಿರ ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ಚಾಲನೆಯಲ್ಲಿವೆ. ಯಾವುದೇ ಕಾಮಗಾರಿ ನಿಲ್ಲಿಸಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಎಲ್ಲ ಹಣ ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡುತ್ತಿದ್ದು, ಅಭಿವೃದ್ಧಿಗೆ ಅನುದಾನವಿಲ್ಲ ಎಂಬುವುದು ತಪ್ಪು ಕಲ್ಪನೆ. ಆಡಳಿತ ಪಕ್ಷದ ಶಾಸಕರ ಕ್ಷೇತ್ರಕ್ಕೆ ₹50 ಕೋಟಿ, ವಿರೋಧ ಪಕ್ಷದ ಶಾಸಕರಿಗೆ ₹25 ಕೋಟಿ ನೀಡಲಾಗಿದೆ. ಈ ಹಿಂದೆ ಯಾವ ಸರ್ಕಾರವೂ ಇಷ್ಟು ಹಣ ಕೊಟ್ಟಿರಲಿಲ್ಲ ಎಂದರು.
ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ₹300 ಕೋಟಿ ವೆಚ್ಚದ ಕಾಮಗಾರಿಗಳು ನಡೆಯುತ್ತಿವೆ. ನ. 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡಲಿದ್ದು, ಸುಮಾರು ₹669 ಕೋಟಿ ಮೊತ್ತದ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ₹69 ಕೋಟಿಯಲ್ಲಿ 100 ಹಾಸಿಗೆಯುಳ್ಳ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲಾಗಿದೆ. ಇದರ ಉಪಕರಣ ಖರೀದಿಗೆ ₹60 ಕೋಟಿ ನೀಡಲಾಗುತ್ತದೆ ಎಂದು ವಿವರಿಸಿದರು.
100 ಹಾಸಿಗೆಯುಳ್ಳ ತಾಯಿ, ಮಕ್ಕಳ ಆಸ್ಪತ್ರೆಗೆ ₹22 ಕೋಟಿ, ನರ್ಸಿಂಗ್ ಕಾಲೇಜಿಗೆ ಸುಮಾರು ₹20 ಕೋಟಿ, ತುರ್ತು ನಿಗಾ ಘಟಕಕ್ಕೆ ಸುಮಾರು ₹42 ಕೋಟಿ ವ್ಯಯಿಸಲಾಗಿದೆ. ಈ ಎಲ್ಲ ಕಟ್ಟಡಗಳು 7ರಿಂದ ಆರಂಭವಾಗಲಿವೆ. ಇದೇ ವೇಳೆ ಜಿಲ್ಲಾ ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ₹169 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ ನಡೆಸಲಾಗುವುದು. ದಿಬ್ಬೂರು, ದೋಬಿಘಾಟ್ ಬಳಿ ಆರೋಗ್ಯ ಕೇಂದ್ರ ಕಟ್ಟಡಕ್ಕೆ ಅಡಿಗಲ್ಲು ಹಾಕಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಭವನ ಜಾಗ ಪಾಲಿಕೆಯದ್ದು
ನಗರದ ಮರಳೂರು ಬಳಿ ಕಾಂಗ್ರೆಸ್ ಭವನಕ್ಕೆ ಹಂಚಿಕೆ ಮಾಡಿದ ಜಾಗ ಮಹಾನಗರ ಪಾಲಿಕೆ ಸೇರಿದ್ದು. ಇದು ಯಾರ ವೈಯಕ್ತಿಕ ಆಸ್ತಿಯಲ್ಲ ಎಂದು ಸಚಿವ ಜಿ.ಪರಮೇಶ್ವರ ಹೇಳಿದರು. ‘ಭವನ ನಿರ್ಮಾಣಕ್ಕೆ ನ್ಯಾಯಾಲಯದಿಂದ ಈವರೆಗೆ ಯಾವುದೇ ತಡೆಯಾಜ್ಞೆ ಬಂದಿಲ್ಲ. ಜಾಗದ ಮಾಲೀಕ ಎಂದು ಹೇಳಿಕೊಳ್ಳುವ ವ್ಯಕ್ತಿ ನ್ಯಾಯಾಲಯಕ್ಕೆ ಹೋಗಿ ಅಗತ್ಯ ದಾಖಲೆ ಸಲ್ಲಿಸಿದರೆ ಮುಂದಿನ ಪ್ರಕ್ರಿಯೆ ನಡೆಯುತ್ತದೆ’ ಎಂದರು. ಈಗಿರುವ ಜೆಡಿಎಸ್ ಭವನ ಕಾಂಗ್ರೆಸ್ಗೆ ಸೇರಿದ್ದು. ಈ ಕುರಿತು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ನ್ಯಾಯಾಲಯದ ಮೂಲಕ ಭವನವನ್ನು ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು.
ರಸ್ತೆ ದುರಸ್ತಿ: ವರದಿ ಸಲ್ಲಿಕೆಗೆ ಸೂಚನೆ
ತುಮಕೂರು: ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿ ದುರಸ್ತಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಅಂದಾಜು ವೆಚ್ಚದ ಕುರಿತು ವರದಿ ಸಲ್ಲಿಕೆಗೆ ಸೂಚಿಸಲಾಗಿದೆ ಎಂದು ಸಚಿವ ಜಿ.ಪರಮೇಶ್ವರ ಹೇಳಿದರು. ಜಿಲ್ಲಾ ಪಂಚಾಯಿತಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಎಷ್ಟು ಕಿ.ಮೀ ರಸ್ತೆಗಳಿವೆ. ಅದರಲ್ಲಿ ಎಷ್ಟು ಯೋಗ್ಯವಾಗಿವೆ? ಎಷ್ಟು ಹೊಸದಾಗಿ ಮಾಡಬೇಕಿದೆ? ಎಷ್ಟು ದುರಸ್ತಿ ಕೈಗೊಳ್ಳಬೇಕು? ಎಂಬುವುದರ ಬಗ್ಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ ಎಂದರು. ಎತ್ತಿನಹೊಳೆ ಯೋಜನೆಯಡಿ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ 0.5 ಎಂಎಲ್ಡಿ ನೀರು ಹಂಚಿಕೆಯಾಗಿದೆ. ಯೋಜನೆ ಪೂರ್ಣಗೊಳ್ಳುವ ಹೊತ್ತಿಗೆ ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿನ ಕೆರೆಗೆ ಕಾಯಕಲ್ಪ ನೀಡಲಾಗುವುದು. ಹಂಚಿಕೆ ಮಾಡಿದ ನೀರು ಸಂಗ್ರಹಕ್ಕೆ ಪೂರಕವಾಗಿ ಕೆರೆ ಸ್ವಚ್ಛಗೊಳಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.