ADVERTISEMENT

ವಿವಿಧ ಬ್ಯಾಂಕ್‌ಗಳ ನಿಷ್ಕ್ರಿಯ ಖಾತೆಗಳಲ್ಲಿರುವ ₹110 ಕೋಟಿಗೆ ವಾರಸುದಾರರೇ ಇಲ್ಲ!

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 6:52 IST
Last Updated 16 ನವೆಂಬರ್ 2025, 6:52 IST
ತುಮಕೂರಿನಲ್ಲಿ ಶುಕ್ರವಾರ ಎಸ್‌ಬಿಐ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಾಗೃತಿ ಪತ್ರ ಬಿಡುಗಡೆ ಮಾಡಲಾಯಿತು. ವಿವಿಧ ಬ್ಯಾಂಕ್ ಅಧಿಕಾರಿಗಳಾದ ಚೈತನ್ಯ ಕಂಚಿಬೈಲು, ಪ್ರಭಾಕರನ್, ಅನಿತಾಶ್ರೀ, ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ನರಸಿಂಹಮೂರ್ತಿ ಇತರರು ಉಪಸ್ಥಿತರಿದ್ದರು
ತುಮಕೂರಿನಲ್ಲಿ ಶುಕ್ರವಾರ ಎಸ್‌ಬಿಐ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಾಗೃತಿ ಪತ್ರ ಬಿಡುಗಡೆ ಮಾಡಲಾಯಿತು. ವಿವಿಧ ಬ್ಯಾಂಕ್ ಅಧಿಕಾರಿಗಳಾದ ಚೈತನ್ಯ ಕಂಚಿಬೈಲು, ಪ್ರಭಾಕರನ್, ಅನಿತಾಶ್ರೀ, ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ನರಸಿಂಹಮೂರ್ತಿ ಇತರರು ಉಪಸ್ಥಿತರಿದ್ದರು   

ತುಮಕೂರು: ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ನಿಷ್ಕ್ರಿಯ ಖಾತೆಗಳಲ್ಲಿರುವ ₹110.45 ಕೋಟಿ ಹಣವನ್ನು ವಾರಸುದಾರರಿಗೆ ತಲುಪಿಸಲು ಮೂರು ತಿಂಗಳ ಕಾಲ ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನವನ್ನು ಆರ್‌ಬಿಐ ಹಮ್ಮಿಕೊಂಡಿದೆ.

ನಗರದ ಶುಕ್ರವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಚೈತನ್ಯ ಕಂಚಿಬೈಲು ಈ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 26 ಬ್ಯಾಂಕ್‌ಗಳ 373 ಶಾಖೆಗಳಲ್ಲಿ 4,11,477 ಖಾತೆಗಳು ನಿಷ್ಕ್ರಿಯಗೊಂಡಿವೆ. ಈ ಖಾತೆಗಳಲ್ಲಿ ಒಟ್ಟು ₹110.45 ಕೋಟಿ ಹಣ ಇದೆ. ಸಂಬಂಧಿಸಿದವರು ಅಗತ್ಯ ದಾಖಲೆ ಸಲ್ಲಿಸಿ ಖಾತೆ ಸಕ್ರಿಯಗೊಳಿಸಬಹುದು. 10 ವರ್ಷಗಳಿಂದ ಖಾತೆ ನಿಷ್ಕ್ರಿಯಗೊಂಡಿದ್ದರೆ ಅದು ಆರ್‌ಬಿಐಗೆ ವರ್ಗಾವಣೆ ಆಗಿರುತ್ತದೆ. ಅಂತಹ ಖಾತೆಯನ್ನೂ ಸಕ್ರಿಯಗೊಳಿಸಲಾಗುವುದು ಎಂದರು.

ADVERTISEMENT

ಮೃತಪಟ್ಟ ಗ್ರಾಹಕರ ಸಂಬಂಧಿಕರು ಅಗತ್ಯ ದಾಖಲೆ ನೀಡಿ ಖಾತೆಯಲ್ಲಿರುವ ಹಣ ಪಡೆಯಬಹುದು. ನಿಷ್ಕ್ರಿಯಗೊಂಡಿರುವ ಬ್ಯಾಂಕ್ ಖಾತೆ ಸಕ್ರಿಯಗೊಳಿಸುವ ಪ್ರಕ್ರಿಯೆ ಡಿಸೆಂಬರ್ ವರೆಗೆ ನಡೆಯಲಿದೆ ಎಂದು ಹೇಳಿದರು.

ಆರ್‌ಬಿಐ ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರಭಾಕರನ್, ‘ಜನರಿಗೆ ಜಾಗೃತಿ ಮೂಡಿಸಿ ಖಾತೆ ಸಕ್ರಿಯಗೊಳಿಸಬೇಕು’ ಎಂದರು.

ಎಲ್ಐಸಿ ಅಧಿಕಾರಿ ಅನಿತಾಶ್ರೀ, ‘ಜಿಲ್ಲೆಯಲ್ಲಿ ನಿಷ್ಕ್ರಿಯ ವಿಮಾ ಖಾತೆಗಳಲ್ಲಿ ₹20 ಕೋಟಿ ಹೆಚ್ಚು ಮೊತ್ತವಿದ್ದು, ಅದನ್ನು ಪಡೆದುಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ನರಸಿಂಹಮೂರ್ತಿ, ವಿವಿಧ ಬ್ಯಾಂಕ್ ಅಧಿಕಾರಿಗಳಾದ ಟಿ.ಕೆ.ಸುರೇಂದ್ರ, ದೊರೆರಾಜ್, ಗಂಗೇಶ್ ಗುಂಜನ್, ಮೋಹನ್ ಸಾಯಿ ಗಣೇಶ್, ಸುಬ್ರಮಣ್ಯಂ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.