ADVERTISEMENT

ಉದ್ದಿಮೆ ಪರವಾನಗಿ ಇಲ್ಲದಿದ್ದರೆ ಬೀಗ

ಕೋಳಿ ಅಂಗಡಿ ಮತ್ತು ಮಾಂಸದ ಅಂಗಡಿ ಮಾಲೀಕರ ಸಂಘದ ಪದಾಧಿಕಾರಿಗಳ ಜತೆ ಆಯುಕ್ತರ ಸಭೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 12:57 IST
Last Updated 16 ಜುಲೈ 2019, 12:57 IST
ನಾಗೇಶ್‌ ಕುಮಾರ್
ನಾಗೇಶ್‌ ಕುಮಾರ್   

ತುಮಕೂರು: ನಗರದಲ್ಲಿ ಕೋಳಿ ಮಾಂಸ ಮತ್ತು ಇತರ ಮಾಂಸದ ಅಂಗಡಿಗಳು ಹೆಚ್ಚಿವೆ. ಈ ಅಂಗಡಿಗಳವರು ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎನ್ನುವ ದೂರಿನ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರು ಮಂಗಳವಾರ ಈ ಕೋಳಿ ಅಂಗಡಿ ಮಾಲೀಕರ ಸಂಘ ಮತ್ತು ಮಾಂಸದ ಅಂಗಡಿ ಮಾಲೀಕರ ಸಂಘದ ಪದಾಧಿಕಾರಿಗಳ ಜತೆ ಸಭೆ ನಡೆಸಿದರು.

ಈ ಎರಡು ಸಂಘದ ತಲಾ ಐದು ಮಂದಿ ಪದಾಧಿಕಾರಿಗಳು, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್, ಪಾಲಿಕೆ ಸದಸ್ಯೆ ಫರೀದಾ ಬೇಗಂ, ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್, ಪರಿಸರ ಹಾಗೂ ಆರೋಗ್ಯ ಇಲಾಖೆಯ ಇನ್‌ಸ್ಪೆಕ್ಟರ್‌ಗಳು ಸಭೆಯಲ್ಲಿ ಇದ್ದರು.

‘ಈ ಹಿಂದೆ ನಮ್ಮ ಸಂಘಗಳಲ್ಲಿ 60ರಿಂದ 70 ಮಂದಿ ಸದಸ್ಯತ್ವ ಪಡೆದಿದ್ದರು. ಅವರು ಮಾತ್ರ ವ್ಯಾಪಾರ ಮಾಡುತ್ತಿದ್ದರು. ಈಗ ಪಾಲಿಕೆಯೇ ಗುರುತಿಸಿರುವಂತೆ 136 ಮಂದಿ ಮಾಂಸದ ಉದ್ದಿಮೆ ನಡೆಸುತ್ತಿದ್ದಾರೆ’ ಎಂದು ಪದಾಧಿಕಾರಿಗಳು ತಿಳಿಸಿದರು.

ADVERTISEMENT

‘ನಮ್ಮ ಸಂಘದ ಸದಸ್ಯತ್ವ ಪಡೆದವರಿಗೆ ಮಾತ್ರ ಉದ್ದಿಮೆ ಪರವಾನಗಿಯನ್ನು ನೀವು ನೀಡಿದರೆ ಸ್ವಚ್ಛತೆ ನಿರ್ವಹಣೆ ಸಾಧ್ಯ. ಸ್ವಚ್ಛತೆಯ ನಿರ್ವಹಣೆಯ ಬಗ್ಗೆ ನಾವು ಪಾಲಿಕೆಗೆ ಜವಾಬ್ದಾರರಾಗಿರುತ್ತೇವೆ’ ಎಂದು ಪದಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.

ಅಂತಿಮವಾಗಿ ಕೋಳಿ ಮಾಂಸ ಮತ್ತು ಇತರ ಮಾಂಸದ ಮಾರಾಟಗಾರರ ಸಂಘಗಳ ಸದಸ್ಯತ್ವ ಪಡೆದವರಿಗೆ ಮಾತ್ರ ಪಾಲಿಕೆಯಿಂದ ಉದ್ದಿಮೆ ಪರವಾನಗಿ ನೀಡುವ ಬಗ್ಗೆ ತೀರ್ಮಾನಕೈಗೊಳ್ಳಲಾಯಿತು.

ಅಜ್ಜಗೊಂಡನಹಳ್ಳಿ ಘಟಕಕ್ಕೆ ತ್ಯಾಜ್ಯ ನೀಡಿ
ಮಾಂಸದ ಅಂಗಡಿಗಳವರು ತ್ಯಾಜ್ಯವನ್ನು ಅಜ್ಜಗೊಂಡನಹಳ್ಳಿ ಕಸ ವಿಲೇವಾರಿ ಘಟಕಕ್ಕೆ ತೆಗೆದುಕೊಂಡು ಹೋಗಿ ನೀಡಬೇಕು. ಇದಕ್ಕಾಗಿ ಅವರು ಎರಡು ವಾಹನಗಳ ವ್ಯವಸ್ಥೆ ಮಾಡಿಕೊಂಡಿದ್ದಾರೆ. ತ್ಯಾಜ್ಯವನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.