ADVERTISEMENT

ವಿದ್ಯುತ್‌ ಸ್ಪರ್ಶ; ವ್ಯಕ್ತಿ ಸಾವು

ಮದುವೆ ಮನೆಯಲ್ಲೀಗ ಸೂತಕದ ಛಾಯೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 13:26 IST
Last Updated 7 ಏಪ್ರಿಲ್ 2020, 13:26 IST

ಕೊರಟಗೆರೆ: ನಾದಿನಿಯ ಮದುವೆಯ ಸಂಭ್ರದಲ್ಲಿದ್ದ ವ್ಯಕ್ತಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದು, ಮದುವೆ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ.

ತಾಲ್ಲೂಕಿನ ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಡಬಂಡೇನಹಳ್ಳಿಯಲ್ಲಿ ಘಟನೆ ನಡೆದಿದ್ದು, ರವಿಕುಮಾರ್ (24) ಮೃತ ವ್ಯಕ್ತಿ.

ಅವರು ತಮ್ಮ ಪತ್ನಿಯ ತಂಗಿ (ನಾದಿನಿ) ಮದುವೆ ಹಿನ್ನೆಲೆಯಲ್ಲಿ ಬೋಡಬಂಡೇನಹಳ್ಳಿಯ ಮಾವನ ಮನೆಗೆ ಬಂದಿದ್ದರು. ಮೋಟರ್ ಮೂಲಕ ನೀರು ಬಿಟ್ಟುಕೊಂಡು ಮನೆ ಹೆಂಚಿನ ದೂಳನ್ನು ತೊಳೆಯುವಾಗ ವಿದ್ಯುತ್ ಸ್ಪರ್ಶವಾಗಿ ಅನಾಹುತ ಸಂಭವಿಸಿದೆ.

ADVERTISEMENT

ಅಸ್ವಸ್ಥರಾದ ರವಿಕುಮಾರ್‌ ಅವರನ್ನು ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ‌ ಮೃತಪಟ್ಟರು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಮದುವೆ ಸಂಭ್ರಮದಲ್ಲಿರಬೇಕಾದ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಸ್ಥಳಕ್ಕೆ ಪಿಎಸ್‌ಐ ಎಚ್.ಮುತ್ತುರಾಜು ಭೇಟಿ ನೀಡಿದ್ದರು.‌ ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.