ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ 26 ಕೆರೆಗಳಿಗೆ ಕುಡಿಯುವ ನೀರು ಹರಿಸುವ ಹೇಮಾವತಿ ಯೋಜನೆಯ ಕಾಮಗಾರಿಯು ಸ್ವಲ್ಪ ವೇಗ ಹೆಚ್ಚಿಸಿಕೊಳ್ಳಬೇಕು. ವೇಗ ಹೆಚ್ಚಾದರೆ ಆರು ತಿಂಗಳೊಳಗೆ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲು ಚಾಲನೆ ನೀಡಬಹುದು ಎಂದು ಕುಪ್ಪೂರು ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ತಿಗಳನಹಳ್ಳಿ ಭಾಗದಲ್ಲಿ ಹೇಮಾವತಿ ಯೋಜನೆಯ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದರು.
ತಾಲ್ಲೂಕಿನಲ್ಲಿ ಹೇಮಾವತಿ ಯೋಜನೆಯ ಕಾಮಗಾರಿ ಬಹಳ ವರ್ಷಗಳಿಂದ ನೆಡಯುತ್ತಿದೆ. ಇತ್ತೀಚೆಗೆ ಕಾಮಗಾರಿ ಚುರುಕು ಕಂಡರೂ ಎತ್ತಿನಹೊಳೆ ಯೋಜನೆಯ ಕಾಮಗಾರಿಗೆ ಹೋಲಿಸಿದರೆ ಹೇಮಾವತಿ ಯೋಜನೆಯ ವೇಗ ಕಡಿಮೆ ಇದೆ. ಹೇಮಾವತಿ ಕಾಮಗಾರಿ ವೇಗ ಹೆಚ್ಚಿಸಿಕೊಂಡರೆ ಈ ವರ್ಷದ ಕೊನೆಯ ವೇಳೆಗಾದರೂ ತಾಲ್ಲೂಕಿನ ಜನರಿಗೆ ನೀರು ದೊರಕಿಸಬಹುದು ಎಂದು ಹೇಳಿದರು.
ತಾಲ್ಲೂಕು ಶಾಶ್ವತ ಕುಡಿಯುವ ನೀರಾವತಿ ಹೋರಾಟ ಸಮಿತಿಯ ಅಧ್ಯಕ್ಷ ಪರಮೇಶ್ವರ್, ಸಮಿತಿಯ ಉಪಾಧ್ಯಕ್ಷ ಬೇವಿನಹಳ್ಳಿ ಚನ್ನಬಸವಯ್ಯ ಮಾತನಾಡಿದರು.
ಡಿಎಸ್ಎಸ್ ಮುಖಂಡ ಜೆ.ಸಿ.ಪುರ ಗೋವಿಂದರಾಜು, ತಿಗಳನಹಳ್ಳಿ ರೈತ ಶಿವಕುಮಾರ್, ಕೃಷ್ಣಮೂರ್ತಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.