ADVERTISEMENT

ಮಂಡಿಪೇಟೆಯಲ್ಲಿ ಶಾಸಕರಿಂದ ದಿನಸಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 13:25 IST
Last Updated 1 ಏಪ್ರಿಲ್ 2020, 13:25 IST
ನೆರವಿನ ಹಸ್ತ ಚಾಚುವಂತೆ ಅಂಗಡಿ ಮಾಲೀಕರಿಗೆ ಕೈ ಮುಗಿದು ಕೋರುತ್ತಿರುವ ಶಾಸಕ ಜ್ಯೋತಿ ಗಣೇಶ್
ನೆರವಿನ ಹಸ್ತ ಚಾಚುವಂತೆ ಅಂಗಡಿ ಮಾಲೀಕರಿಗೆ ಕೈ ಮುಗಿದು ಕೋರುತ್ತಿರುವ ಶಾಸಕ ಜ್ಯೋತಿ ಗಣೇಶ್   

ತುಮಕೂರು: ನಿರ್ಗತಿಕರು, ಬಡವರು, ಕೂಲಿಕಾರ್ಮಿಕರಿಗೆ ನೆರವಾಗಲು ಶಾಸಕ ಜ್ಯೋತಿಗಣೇಶ್ ನಗರದ ಮಂಡಿಪೇಟೆಯಲ್ಲಿ ಬುಧವಾರ ವರ್ತಕರಿಂದ ದಿನಸಿ ಪದಾರ್ಥಗಳನ್ನು ಸಂಗ್ರಹಿಸಿದರು.

ದಾನಿಗಳಿಂದ ಸಂಗ್ರಹಿಸಿದ ದವಸ ಧಾನ್ಯಗಳನ್ನು ಬಳಸಿ ನಗರದ ವೀರಶೈವ ಕಲ್ಯಾಣ ಮಂಟಪ, ಅಯ್ಯಪ್ಪಸ್ವಾಮಿ ಮಂದಿರ, ಶಂಕರಮಠ, ಬ್ರಾಹ್ಮಣರ ವಸತಿ ನಿಲಯದಲ್ಲಿ ಊಟ ತಯಾರಿಸಲಾಗುತ್ತಿದೆ. ಊಟವನ್ನು ನಿರ್ಗತಿಕರು, ಕೂಲಿ ಕಾರ್ಮಿಕರಿಗೆ ಪೂರೈಸಲಾಗುತ್ತಿದೆ ಎಂದು ಜ್ಯೋತಿ ಗಣೇಶ್ ತಿಳಿಸಿದರು.

ಉದ್ಯಮಿ ರಮೇಶ್ ಬಾಬು, ‘ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕೆಲಸ. ಇಂತಹ ಕಾರ್ಯಕ್ಕೆ ವರ್ತಕರು ಅಗತ್ಯವಿರುವ ದಿನನಿತ್ಯದ ವಸ್ತುಗಳನ್ನು ನೀಡಲು ಮುಂದೆ ಬಂದಿರುವುದು ಹೆಮ್ಮೆಯ ಸಂಗತಿ’ ಎಂದರು.

ADVERTISEMENT

ಉಪವಿಭಾಗಾಧಿಕಾರಿ ಅಜಯ್, ‘ವರ್ತಕರಿಗೆ ದಿನಸಿ ಪದಾರ್ಥಗಳ ನೆರವು ನೀಡುವ ಮನೋಭಾವವಿದ್ದರೂ ಹೇಗೆ ನೀಡಬೇಕು ಎಂಬ ಮಾರ್ಗ ತಿಳಿದಿರಲಿಲ್ಲ. ಇಂದು ಶಾಸಕರೇ ಖುದ್ದಾಗಿ ಮಾಲೀಕರನ್ನು ಭೇಟಿ ಮಾಡಿ ನಿರ್ಗತಿಕರಿಗೆ ಹೇಗೆ ನೆರವು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಕಾರ್ಯದಲ್ಲಿ ಹಲವು ಸ್ವಯಂಸೇವಕರು ತೊಡಗಿಸಿಕೊಂಡಿದ್ದಾರೆ. ಸಂಕಷ್ಟದಲ್ಲಿರುವವರಿಗೆ ಧನ ಸಹಾಯ ಮಾಡಲಿಚ್ಛಿಸುವವರು ಜಿಲ್ಲಾಡಳಿತವನ್ನು ಸಂಪರ್ಕಿಸಬಹುದು’ ಎಂದು ಮನವಿ ಮಾಡಿದರು.

ತಹಶೀಲ್ದಾರ್ ಮೋಹನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.