ತುಮಕೂರು: ನಗರದ ಗೋಕುಲ, ಬಡ್ಡಿಹಳ್ಳಿ ಬಡಾವಣೆ ನಾಗರಿಕರು ರಸ್ತೆ ಗುಂಡಿಗಳಿಗೆ ಪೂಜೆ ಸಲ್ಲಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ರಸ್ತೆ ಗುಂಡಿ ಮುಚ್ಚುವಂತೆ ಮಹಾನಗರ ಪಾಲಿಕೆಯನ್ನು ಸಾರ್ವಜನಿಕರು ಒತ್ತಾಯಿಸುತ್ತಲೇ ಬಂದಿದ್ದಾರೆ. ರಸ್ತೆ ಗುಂಡಿಗಳಿಂದ ಬೇಸತ್ತ ಜನರು ಈಗ ಪ್ರತಿಭಟನೆಗೆ ಇಳಿದಿದ್ದಾರೆ.
ಬಡಾವಣೆ ನಿವಾಸಿ ಹೈಕೋರ್ಟ್ ವಕೀಲ ಎಲ್.ರಮೇಶ್ ನಾಯಕ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಸ್ಥಳೀಯರು ಗುರುವಾರ ಸಂಜೆ ರಸ್ತೆ ಗುಂಡಿಗಳಿಗೆ ಪೂಜೆ ಮಾಡಿ, ಅಪಾಯಕಾರಿ ಗುಂಡಿಗಳ ಬಗ್ಗೆ ಜಾಗೃತಿ ಮೂಡಿಸಿದರು. ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಮೇಶ್ ನಾಯಕ್ ಈ ಹಿಂದೆ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ನಗರಾಭಿವೃದ್ಧಿ ಇಲಾಖೆ ಮಹಾನಗರ ಪಾಲಿಕೆಗೆ ನೋಟಿಸ್ ನೀಡಿದ್ದ ಹೈಕೋರ್ಟ್, ರಸ್ತೆ ಗುಂಡಿ ಮುಚ್ಚಲು ಕ್ರಮ ತೆಗೆದುಕೊಳ್ಳಬೇಕು. ಕೈಗೊಂಡ ಕ್ರಮದ ಬಗ್ಗೆ ಎರಡು ತಿಂಗಳಲ್ಲಿ ವರದಿ ನೀಡುವಂತೆ ಕಾಲಾವಕಾಶ ನೀಡಿತ್ತು. ಆದರೆ ಈವರೆಗೂ ಪಾಲಿಕೆ ಗುಂಡಿ ಮುಚ್ಚಿಲ್ಲ ಎಂದು ಆರೋಪಿಸಿದರು.
ಮೈದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಆರ್.ರವೀಂದ್ರ, ಸದಸ್ಯರಾದ ನರಸಿಂಹಮೂರ್ತಿ ಕರೇಕಲ್ಲುಪಾಳ್ಯ, ಸೋಮಣ್ಣ, ಗಂಗಾಧರ ನಾಯಕ್, ಪ್ರಸನ್ನಕುಮಾರ್, ಮುಖಂಡರಾದ ಮಲ್ಲಿಕಾರ್ಜುನಯ್ಯ, ಕೆ.ಎನ್.ಪುಟ್ಟರಾಜು, ಎಚ್.ಆರ್.ನಾಗರಾಜು, ಅರೆಗುಜ್ಜನಹಳ್ಳಿ ಮಂಜುನಾಥ್, ಮುರಳಿ ನಾಯಕ್, ನರಸಿಂಹರಾಜು, ಶ್ರೀರಂಗಪ್ಪ, ಗೋವಿಂದರಾಜು, ಲಕ್ಷ್ಮಿಕಾಂತರಾಜು, ಅಶ್ವತ್ಥ್, ಮಂಜುನಾಥ್, ರಮೇಶ್, ಪೃಥ್ವಿ ಜೆ.ಸಾಗರ್, ನವೀನ್, ಆನಂದ್ ಶಿವರಾಜು, ಹನುಮಂತರಾಜು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.