ತುಮಕೂರು: ನಗರದಲ್ಲಿ ನೋಡಿದರೂ ಅಗೆದಿರುವ ರಸ್ತೆಗಳು, ಸಂಚರಿಸಲು ಸಾಧ್ಯವಾಗದ ಫುಟ್ಪಾತ್ಗಳು ಗೋಚರಿಸುತ್ತವೆ. ‘ಸ್ಮಾರ್ಟ್ ರೂಪ’ ಕೊಡುತ್ತೇವೆಂದು ಹೇಳುತ್ತಿರುವ ಸ್ಥಳಗಳಲ್ಲಿ ನಡೆಯುತ್ತಿರುವ ಕಾಮಗಾರಿ ಗಳ ಗುಣಮಟ್ಟ ಗಮನಿಸಿದರೆ ಯಾರಿಗೂ ನಗರ ‘ಸ್ಮಾರ್ಟ್’ ಆಗುತ್ತದೆ ಎಂಬ ಭಾವನೆ ಮೂಡುವುದಿಲ್ಲ.
ಕಾಮಗಾರಿಗಳ ಗುಣಮಟ್ಟದ ಬಗ್ಗೆ ಆರೋಪ ತೀವ್ರಗೊಂಡಾಗ ಜನಪ್ರತಿನಿ ಧಿಗಳು, ಅಧಿಕಾರಿಗಳು ಸಭೆ ನಡೆಸಿ ಗುಣಮಟ್ಟ ಕಾಪಾಡಬೇಕು, ಕಾಲಮಿತಿಯಲ್ಲಿ ಯೋಜನೆ ಮುಗಿಸಬೇಕು ಎಂಬ ಸಲಹೆ ನೀಡುತ್ತಾರೆ. ಮತ್ತೆ ಬೆಳಿಗ್ಗೆ ಅದೇ ಪರಿಸ್ಥಿತಿ ಮುಂದುವರಿದಿರುತ್ತದೆ.
ಯಾವುದೇ ಸಮಸ್ಯೆ ಇಲ್ಲದ ಫುಟ್ಪಾತ್ ಮೇಲಿನ ಕಲ್ಲುಚಪ್ಪಡಿಗಳನ್ನು ತೆಗೆದು ಟೈಲ್ಸ್ ಹಾಕಲಾಗುತ್ತಿದೆ. ಇದೇ ಚಪ್ಪಡಿಗಳನ್ನು ಮತ್ತೊಂದು ಕೆಲಸಕ್ಕೆ ಬಳಸಿ ಬಿಲ್ ಮಾಡಿಕೊಳ್ಳಲಾಗುತ್ತಿದೆ. ಚರಂಡಿಗೆ ಹಾಕಿದ್ದ ಕಲ್ಲುಗಳನ್ನೇ ಕಿತ್ತು, ಅದೇ ಕಲ್ಲುಗಳನ್ನು ಅಳವಡಿಸಿ ಹೊಸ ಕಾಮಗಾರಿಯ ಲೆಕ್ಕ ತೋರಿಸಲಾಗುತ್ತಿದೆ. ‘ಹೊಸ ಬಾಟಲಿಗೆ ಹಳೆ ಮದ್ಯ’ ಎಂಬ ಮಾತು ಜನರಿಂದ ಕೇಳಿಬರುತ್ತಿದೆ.
*
ಈಗ ಕಾಮಗಾರಿಗಳು ಚುರುಕುಗೊಂಡಿದ್ದು, ಗುಣಮಟ್ಟದ ಕೆಲಸ ನಡೆದಿದೆ. ಕಾಲಮಿತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು
-ಬಿ.ಟಿ.ರಂಗಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ, ಸ್ಮಾರ್ಟ್ ಸಿಟಿ
*
ಜನರಿಗೆ ಎಷ್ಟರ ಮಟ್ಟಿಗೆ ಉಪಯೋಗ ಆಗುತ್ತದೆ ಎಂಬ ಬಗ್ಗೆ ಕಾಳಜಿ ಇಲ್ಲ. ಗುಣಮಟ್ಟ ಕೇಳುವಂತಿಲ್ಲ. ನಗರದ ಬೆಳವಣಿಗೆಯ ಮುನ್ನೋಟವಿಲ್ಲ. ಹಣ ಬಂದಿದೆ ಖರ್ಚುಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ.
-ಕೆ.ದೊರೈರಾಜು, ಪಿಯುಸಿಎಲ್ ಜಿಲ್ಲಾ ಸಂಚಾಲಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.