ADVERTISEMENT

ಉರ್ದು ಶಾಲೆ ತೆರವು: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 3:06 IST
Last Updated 25 ಮಾರ್ಚ್ 2021, 3:06 IST
ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯನ್ನು ಬೇಗಂ ಮೊಹಲ್ಲಾಗೆ ಸ್ಥಳಾಂತರಿಸದೆ ಸಮೀಪದಲ್ಲಿ ಶಾಲೆ ಪ್ರಾರಂಭಿಸುವಂತೆ ಪ್ರತಿಭಟನೆ ನಡೆಸಲಾಯಿತು
ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯನ್ನು ಬೇಗಂ ಮೊಹಲ್ಲಾಗೆ ಸ್ಥಳಾಂತರಿಸದೆ ಸಮೀಪದಲ್ಲಿ ಶಾಲೆ ಪ್ರಾರಂಭಿಸುವಂತೆ ಪ್ರತಿಭಟನೆ ನಡೆಸಲಾಯಿತು   

ಶಿರಾ: ನಗರದ ಅಸ್ಸಾರ್ ಮೊಹಲ್ಲಾದಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಜಾಗ ಮುಜರಾಯಿ ಇಲಾಖೆಗೆ ಸೇರಿದೆ ಎಂದು ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಮಂಗಳವಾರ ಶಾಲೆಯನ್ನು ತೆರವುಗೊಳಿಸಿ ಕಟ್ಟಡಕ್ಕೆ ಬೀಗ ಹಾಕಿ ಶಾಲೆಯನ್ನು ತೆರವುಗೊಳಿಸಲಾಗಿದೆ.

ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 64 ಮಂದಿ ವಿದ್ಯಾರ್ಥಿಗಳಿದ್ದು ಮೂರು ಮಂದಿ ಶಿಕ್ಷಕರಿದ್ದಾರೆ. ಪ್ರಸ್ತುತ 6 ಮತ್ತು 7 ನೇ ತರಗತಿಯ 12 ವಿದ್ಯಾರ್ಥಿಗಳು ಶಾಲೆ ಬರುತ್ತಿದ್ದಾರೆ.

ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಬಿದ್ದು ಹೋಗಿದ್ದರಿಂದ ಶಾಲೆ ನಡೆಸಲು ಈ ಹಿಂದೆ ರೇಷ್ಮೆ ಇಲಾಖೆಗೆ ಸೇರಿದ್ದ ಜಾಗವನ್ನು ಶಾಲೆಗೆ ಬಿಟ್ಟುಕೊಡಲಾಗಿತ್ತು.

ADVERTISEMENT

ರೇಷ್ಮೆ ಇಲಾಖೆಗೆ ಸೇರಿದ ಜಾಗ ಷಹರ್ ಗಂಜ್ ಅಂಜನೇಯ ಸ್ವಾಮಿ ದೇವಾಲಯಕ್ಕೆ‌ ಸೇರಿದೆ ಎಂದು ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತಿತ್ತು. ನ್ಯಾಯಾಲಯ ಸಹ 140x140 ಗಜ ಜಾಗ ಷಹರ್ ಗಂಜ್ ಅಂಜನೇಯ ಸ್ವಾಮಿ ದೇವಾಲಯಕ್ಕೆ ಸೇರಿದ್ದು ತಕ್ಷಣ ತೆರವುಗೊಳಿಸಿ ಅವರಿಗೆ ನೀಡುವಂತೆ ಅದೇಶ ನೀಡಿತ್ತು.

ನ್ಯಾಯಾಲಯದ ಅದೇಶದಂತೆ ಶಾಲೆ ತೆರವುಗೊಳಿಸಲಾಗಿದ್ದು, ವಿದ್ಯಾರ್ಥಿಗಳನ್ನು ಸಮೀಪದ ಬೇಗಂ ಮೊಹಲ್ಲಾದ ಶಾಲೆಗೆ ಹೋಗುವಂತೆ ಸೂಚಿಸಲಾಗಿದೆ.

ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಶಾಲೆಯನ್ನು ಮುಚ್ಚಿ ಬೇರೆ ಶಾಲೆಗೆ ವಿದ್ಯಾರ್ಥಿಗಳನ್ನು ಹೋಗುವಂತೆ ಹೇಳಿರುವುದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ‌ ನಡೆಸಿದರು.

ಮಕ್ಕಳನ್ನು‌ ಯಾವುದೇ ಕಾರಣಕ್ಕೂ ಬೇಗಂ ಮೊಹಲ್ಲಾದ ಶಾಲೆಗೆ ಕಳುಹಿಸುವುದಿಲ್ಲ. ರಸ್ತೆ ದಾಟಿ ಮಕ್ಕಳು ಹೋಗಿ ಬರಲು ಕಷ್ಟವಾಗುವುದರಿಂದ ಪಕ್ಕದಲ್ಲಿರುವ ರೇಷ್ಮೆ ಇಲಾಖೆಗೆ ಸೇರಿರುವ ಉಳಿಕೆ ಕಟ್ಟಡದಲ್ಲಿ ಶಾಲೆ ಪ್ರಾರಂಭಿಸುವಂತೆ ಪಟ್ಟು ಹಿಡಿದಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರೇವಣ್ಣಸಿದ್ದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಪ್ಪ, ಡಿವೈಎಸ್ ಪಿ ಕುಮಾರಪ್ಪ ಬುಧವಾರ ಸ್ಥಳಕ್ಕೆ ‌ಬೇಟಿ ನೀಡಿ ಪೋಷಕರ ಮನವೊಲಿಸಲು ಪ್ರಯತ್ನಿಸಿದರು ಯಾವುದೇ ಪ್ರಯೋಜನವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.