ತುಮಕೂರು: ಮಾರುಕಟ್ಟೆಯಲ್ಲಿ ಬೀನ್ಸ್ ದರ ಏರುಗತಿಯಲ್ಲೇ ಸಾಗಿದ್ದು, ಈ ವಾರ ಕೆ.ಜಿ.ಗೆ ₹150ರಂತೆ ಮಾರಾಟವಾಗುತ್ತಿದೆ. ಟೊಮೆಟೊ ಬೆಲೆ ಕೆ.ಜಿ.ಗೆ ₹40 ಇದೆ. ನುಗ್ಗೆಕಾಯಿ ಇದೀಗ ಮಾರುಕಟ್ಟೆಗೆ ಬರುತ್ತಿದ್ದು, ಕೆ.ಜಿ ₹80ರಂತೆ ಮಾರಾಟವಾಗುತ್ತಿದೆ.
ಸ್ಥಳೀಯ ಮಾರುಕಟ್ಟೆಗೆ ಹೊರಗಿನಿಂದ ತರಕಾರಿ ಬರುತ್ತಿಲ್ಲ. ಜಿಲ್ಲೆಯಲ್ಲಿ ಬೆಳೆದ ತರಕಾರಿಗಳಷ್ಟೇ ಸರಬರಾಜಾಗುತ್ತಿದೆ. ಮಳೆಯಾಗುತ್ತಿರುವ ಕಾರಣ ಬೀನ್ಸ್ ಬೆಳೆ ಹಾಳಾಗಿದ್ದು, ಆವಕ ಕಡಿಮೆಯಾಗಿದೆ. ಹೀಗಾಗಿ ಬೆಲೆ ಹೆಚ್ಚಾಗಿದೆ.
ಕ್ಯಾರೇಟ್ ಬೆಲೆ ಸಹ ಏರಿಕೆಯಾಗಿದೆ ಎನ್ನುತ್ತಾರೆ ಮಾರುಕಟ್ಟೆ ತರಕಾರಿ ವ್ಯಾಪಾರಿಗಳು.
ಸೇಬು ಕೆ.ಜಿ.ಗೆ ₹80ರಿಂದ 120ರ ವರೆಗೆ, ಸೀತಾಫಲ ₹80, ದಾಳಿಂಬೆ ಗಾತ್ರಕ್ಕನುಗುಣವಾಗಿ ₹100ರಿಂದ 150ರ ವರೆಗೆ ಬೆಲೆ ಇದೆ. ಗೌರಿ, ಗಣೇಶ ಹಬ್ಬದ ನಂತರ ಏಲಕ್ಕಿ ಬಾಳೆಹಣ್ಣಿನ ಬೆಲೆ ₹60ರಲ್ಲೇ ಮುಂದುವರಿದಿದೆ. ಬಾಳೆಹಣ್ಣು, ಪಪ್ಪಾಯ, ಮೋಸಂಬಿ, ಸೇಬು ಹೆಚ್ಚು ಮಾರಾಟವಾಗುತ್ತಿದೆ ಎಂದು ಮಾಹಿತಿ ನೀಡುತ್ತಾರೆ ಹಾಪ್ ಕಾಮ್ಸ್ ಮಳಿಗೆಯ ಟಿ.ಆರ್.ನಾಗರಾಜು.
ಬೇಳೆ ಕಾಳು ಸ್ಥಿರ: ನಗರದ ಮಂಡಿಪೇಟೆಯಲ್ಲಿ ಬೇಳೆ ಕಾಳುಗಳ ಬೆಲೆ ಸ್ಥಿರವಾಗಿದೆ. ಕಳೆದ ಕೆಲವು ವಾರಗಳಿಂದ ದಿನಸಿ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ಹೆಸರು ಕಾಳು ಕೆ.ಜಿ.ಗೆ ₹85ರಿಂದ ₹90, ಬಟಾಣಿ ₹130ರಿಂದ ₹140, ಹೆಸರು ಬೇಳೆ ಕೆ.ಜಿ.ಗೆ ₹95ರಿಂದ ₹100ರಂತೆ ಮಾರಾಟವಾಗುತ್ತಿದೆ.
ಚಿಕನ್ ಬೆಲೆ ಹೆಚ್ಚಳ: ಕೋಳಿ ಮಾಂಸದ ಬೆಲೆ ಹೆಚ್ಚಾಗಿದ್ದು, ಈ ವಾರ ಕೆ.ಜಿ.ಗೆ ₹220ಕ್ಕೆ ಮಾರಾಟವಾಗುತ್ತಿದೆ. ಎಳೆಯ ಕುರಿ ಮಾಂಸದ ಬೆಲೆ ಕೆ.ಜಿ ₹600, ಸಾಧಾರಣ ಮಟನ್ ₹ 550ಕ್ಕೆ, ಮೊಟ್ಟೆ ಒಂದಕ್ಕೆ ₹5ರಂತೆ ಮಾರಾಟವಾಗುತ್ತಿದೆ ಎನ್ನುತ್ತಾರೆ ನಿಮ್ರಾ ಚಿಕನ್, ಮಟನ್ ಸ್ಟಾಲ್ನ ಶಾಹಿದ್.
ಮೀನು ಬೆಲೆ ಕಡಿಮೆ: ನಗರದ ಮತ್ಯ್ಸದರ್ಶಿನಿಯಲ್ಲಿ ಮೀನಿನ ಬೆಲೆ ಸ್ವಲ್ಪ ಕಡಿಮೆಯಾಗುತ್ತಿದೆ. ಬಂಗುಡೆ ಈ ವಾರ ಕೆ.ಜಿ ₹220ಕ್ಕೆ ಮಾರಾಟವಾಗುತ್ತಿದೆ. ಬಿಳಿ ಮಾಂಜಿ ₹630, ಬೂತಾಯಿ ₹180, ಅಂಜಲ್ ₹630ರಿಂದ ₹780, ಬೊಳಿಂಜಿರ್ ₹220ಕ್ಕೆ ಮಾರಾಟ ವಾಗುತ್ತಿದೆ ಎಂದು ಮತ್ಯ್ಸದರ್ಶಿನಿ ಮಾಲೀಕ ಸಿದ್ದರಾಮಯ್ಯ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.