ADVERTISEMENT

ವೇಮನರ ಚಿಂತನೆಗಳು ಇಂದಿಗೂ ಪ್ರಸ್ತುತ: ಎಸ್‌.ಪಿ.ಮುದ್ದಹನುಮೇಗೌಡ

ನಗರದ ಕನ್ನಡ ಭವನದಲ್ಲಿ ನಡೆದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 20:11 IST
Last Updated 19 ಜನವರಿ 2019, 20:11 IST
ಸಮುದಾಯಕ್ಕಾಗಿ ಶ್ರಮಿಸಿದ ನಿವೃತ್ತ ಎಇಇ ಗೋವಿಂದ ರೆಡ್ಡಿ, ನಿವೃತ್ತ ಆರ್‌ಟಿಒ ಕೃಷ್ಣ ರೆಡ್ಡಿ, ಕರ್ನಾಟಕ ರಾಜ್ಯ ವ್ಯವಸಾಯೋತ್ಪನ್ನ ಮಾರುಕಟ್ಟೆ ಮಾಜಿ ನಿರ್ದೇಶಕ ಎಸ್.ಕೆ.ರೆಡ್ಡಿ, ನಿವೃತ್ತ ಪ್ರಾಚಾರ್ಯ ವೆಂಕಟರಂಗಾರೆಡ್ಡಿ ಅವರನ್ನು ಸನ್ಮಾನಿಸಲಾಯಿತು
ಸಮುದಾಯಕ್ಕಾಗಿ ಶ್ರಮಿಸಿದ ನಿವೃತ್ತ ಎಇಇ ಗೋವಿಂದ ರೆಡ್ಡಿ, ನಿವೃತ್ತ ಆರ್‌ಟಿಒ ಕೃಷ್ಣ ರೆಡ್ಡಿ, ಕರ್ನಾಟಕ ರಾಜ್ಯ ವ್ಯವಸಾಯೋತ್ಪನ್ನ ಮಾರುಕಟ್ಟೆ ಮಾಜಿ ನಿರ್ದೇಶಕ ಎಸ್.ಕೆ.ರೆಡ್ಡಿ, ನಿವೃತ್ತ ಪ್ರಾಚಾರ್ಯ ವೆಂಕಟರಂಗಾರೆಡ್ಡಿ ಅವರನ್ನು ಸನ್ಮಾನಿಸಲಾಯಿತು   

ತುಮಕೂರು: ಮಹಾಯೋಗಿ ವೇಮನ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾ ರೆಡ್ಡಿ ಜನಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‌ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜವನ್ನು 15 ನೇ ಶತಮಾನದಲ್ಲಿಯೇ ತಿದ್ದಿದಂತಹ ಮಹಾನ್‌ ದಾರ್ಶನಿಕರು ವೇಮನ. ಹಾಗಾಗಿ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.

ADVERTISEMENT

ಸಾಮಾನ್ಯ ಜ್ಞಾನದ ಮೂಲಕವೇ ಡಾಂಭಿಕತೆ, ಯೋಗ, ಕುಟುಂಬ, ಧರ್ಮ- ಅಧರ್ಮ, ಜ್ಞಾನ- ಅಜ್ಞಾನ, ಮುಕ್ತಿ ಮಾರ್ಗ, ಸದ್ಗತಿ ಸೇರಿದಂತೆ ಜೀವನದಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳುವ ಕುರಿತು 4 ಸಾವಿರಕ್ಕೂ ಹೆಚ್ಚು ಪದ್ಯಗಳನ್ನು ರಚಿಸುವ ಮೂಲಕ ತೆಲುಗಿನ ಸರ್ವಜ್ಞನೆನಿಸಿಕೊಂಡಿದ್ದಾರೆ. ಇಂದಿಗೂ ಅವರ ವಿಚಾರಗಳು ಆಂಧ್ರ ಮತ್ತು ಕರ್ನಾಟಕ ರಾಜ್ಯಗಳ ಸಂಸ್ಕೃತಿಯಲ್ಲಿ ಜೊತೆ ಜೊತೆಯಾಗಿ ಸಾಗುತ್ತಿವೆ ತಿಳಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ‘ಇಂದಿನ ಯುವಜನರು ಅಡ್ಡದಾರಿ ಹಿಡಿದು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಪೋಷಕರು ಮಕ್ಕಳನ್ನು ಉತ್ತಮ ದಾರಿಯಲ್ಲಿರ ನಡೆಯುವಂತೆ ಉತ್ತಮ ಮಾರ್ಗದರ್ಶನ ನೀಡಲು ವೇಮನರ ಸಂದೇಶಗಳನ್ನು ನೀಡಬೇಕಾಗಿದೆ’ ಎಂದು ಹೇಳಿದರು.

ಸಾನಿಧ್ಯ ವಹಿಸಿ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರು, ವಾಸ್ತವದ ನೆಲೆಯಲ್ಲಿ ಬದುಕುವುದು ಕಷ್ಟ. ವೇಮನರ ನೀತಿ ಮಾತುಗಳನ್ನು ಜೀವನದಲ್ಲಿ ಅನುಸರಿಸಿದಲ್ಲಿ ಮುಕ್ತಿ ಮಾರ್ಗ ದೊರೆಯುತ್ತದೆ ಎಂದು ತಿಳಿಸಿದ ಅವರು ತುಮಕೂರಿನಲ್ಲಿ ಯಾವುದಾದರೊಂದು ಉದ್ಯಾನವನಕ್ಕೆ ವೇಮನರ ಹೆಸರನ್ನು ನಾಮಕರಣ ಮಾಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ವೆಂಕಟರೆಡ್ಡಿ ರಾಮರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಆಪಿನಕಟ್ಟೆ, ಜಿಲ್ಲಾ ರೆಡ್ಡಿ ಜನಸಂಘ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಉಪಾಧ್ಯಕ್ಷ ಬಿ.ಆರ್.ಮಧು ಹಾಗೂ ಪಾಲಿಕೆಯ ನಾಗೇಶ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.