ತುಮಕೂರು: ಕೊರೊನಾ ಕೆಲಸದಲ್ಲಿ ತೊಡಗಿರುವವರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಗುರುವಾರ ಸಿಐಟಿಯು ಕರೆ ನೀಡಿದ್ದ ‘ಬೇಡಿಕೆಗಳ ದಿನ’ ಪ್ರತಿಭಟನೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಹಾಗೂ ವಿವಿಧ ವಲಯಗಳ ಕಾರ್ಮಿಕರು ಬೇಡಿಕೆಗಳ ಭಿತ್ತಿಪತ್ರಗಳನ್ನು ಹಿಡಿದು ತಾವು ಇದ್ದ ಸ್ಥಳದಲ್ಲಿಯೇ ಪ್ರತಿಭಟಿಸಿದರು. ಹೂವು ಸಾಕು, ಸುರಕ್ಷತೆ, ವಿಮೆ ಬೇಕು ಎನ್ನುವ ಘೋಷಾವಾಕ್ಯಗಳನ್ನು ಭಿತ್ತಿಪತ್ರಗಳು ಒಳಗೊಂಡಿದ್ದವು.
ತಾಲ್ಲೂಕು ಘಟಕಗಳ ಮುಖಂಡರು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು. ತುಮಕೂರಿನಲ್ಲಿ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ಅಂಗನವಾಡಿ ನೌಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಗೌರಮ್ಮ, ಖಜಾಂಚಿ ಜಬೀನಾಬಾನು , ತುಮಕೂರು ಪೌರ ಕಾರ್ಮಿಕರ ಸಂಘದ ಪ್ರಧಾನ ಕಾರ್ಯಧರ್ಶಿ ಎನ್.ಕೆ ಸುಬ್ರಹ್ಮಣ್ಯ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಕಂಟೈನ್ಮೆಂಟ್ ಮತ್ತು ಕೆಂಪು ವಲಯದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಸುರಕ್ಷತೆಗಾಗಿ ಪಿಪಿಇ ಕಿಟ್ ವಿತರಿಸಬೇಕು. ಎಲ್ಲ ನೌಕರರು, ಕಾರ್ಮಿಕರಿಗೆ ಆಗಾಗ್ಗೆ ಆರೋಗ್ಯ ಪರೀಕ್ಷೆ ನಡೆಸಬೇಕು. ಕರ್ತವ್ಯದಲ್ಲಿದ್ದಾಗ ಯಾವುದೇ ರೀತಿಯಲ್ಲಿ ಮರಣ ಹೊಂದಿದವರಿಗೆ ₹ 50 ಲಕ್ಷ ವಿಮೆ ನೀಡಬೇಕು, ಅವರ ಕುಟುಂಬ ಸದಸ್ಯರಿಗೆ ಕೆಲಸ ನೀಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.