ಪಡುಬಿದ್ರಿ: ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೆಜತ್ತಕಟ್ಟೆ ಎಂಬಲ್ಲಿ ದಾರುಲ್ ಅಮಾನ್ ಎಜುಕೇಶನಲ್ ಅಕಾಡೆಮಿ ಸಂಸ್ಥೆಯ ನಿರ್ಮಾಣ ಹಂತದಲ್ಲಿರುವ ಅನಾಥಾ ಲಯ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸುವಂತೆ ಅಲ್ಲದೆ, ನಿರ್ಮಿಸಲು ನೀಡಿದ ಪರವಾನಗಿ ಅಸಿಂಧುಗೊಳಿಸಿ ಎಲ್ಲೂರು ಗ್ರಾಮ ಪಂಚಾಯಿತಿ ಬುಧವಾರ ನೋಟಿಸ್ ನೀಡಿದೆ.
ಇಲ್ಲಿನ ಹಿರಾ ನಗರದಲ್ಲಿ ದಾರುಲ್ ಅಮಾನ್ ಸಂಸ್ಥೆಯು ಜಾಗವನ್ನು ಖರೀದಿಸಿ ಅನಾಥಾಲಯ ನಿರ್ಮಿಸಲು 2015ರಲ್ಲಿ ಪರವಾನಗಿ ಪಡೆದಿತ್ತು. ಆದರೆ, ಈ ಪರವಾನಗಿ ಅಕ್ರಮ ಮತ್ತು ಅಸಿಂಧು ಆಗಿದೆ. ಈ ಹಿಂದೆ ಪಿಡಿಒ ಆಗಿದ್ದ ಬೆನ್ನಿ ಕ್ವಾಡ್ರಸ್ ಎಂಬವರು ಸಂಸ್ಥೆಯ ಅನಾಥಾಲಯ ಕಟ್ಟಡಕ್ಕೆ ಪರವಾನಗಿ ನೀಡಿದ್ದರು. ಆದರೆ, ಪರವಾ ನಗಿ ಎಲ್ಲೂರು ಗ್ರಾಮ ಪಂಚಾಯಿತಿಯ ಸದಸ್ಯರ ಗಮನಕ್ಕೆ ತಾರದೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕಾರಣಕ್ಕಾಗಿ ಕಟ್ಟಡ ನಿರ್ಮಾಣದ ಪರವಾನಗಿಯು ಅಸಿಂಧು ಆಗಿದೆ. ಈ ಬಗ್ಗೆ ಇದೇ 13ರಂದು ಕರೆಯಲಾದ ಸಭೆಯಲ್ಲಿ ಚರ್ಚಿಸಿ, ಕಟ್ಟಡ ಪರವಾನಗಿ ಅಸಿಂಧು ಎಂದು ನಿರ್ಧರಿಸಲಾಗಿದೆ.
ನೋಟಿಸ್ಅನ್ನು ನೀಡಲು ಅಲ್ಲಿ ಯಾರೂ ಇರದ ಕಾರಣ ಕಟ್ಟಡದ ಬಾಗಿಲಿಗೆ ಅಂಟಿಸಲಾಯಿತು. ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಾಸಂತಿ ಮಧ್ವರಾಜ್, ಉಪಾಧ್ಯಕ್ಷ ಜಯಂತ್ ಕುಮಾರ್, ಸದಸ್ಯರಾದ ಸತೀಶ್ ಗುಡ್ಡಚ್ಚಿ, ಸಾಧು ಶೆಟ್ಟಿ, ರಾಜೇಂದ್ರ, ಕಿಶೋರ್ ಕುಂಜೂರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.