ADVERTISEMENT

ಆಳ್ವಾಸ್, ಫಿಲೋಮಿನಾ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 9:25 IST
Last Updated 10 ಅಕ್ಟೋಬರ್ 2011, 9:25 IST

ಸುರತ್ಕಲ್: ಮೂಡಬಿದಿರೆಯ ಆಳ್ವಾಸ್ ಕಾಲೇಜು ತಂಡ ಮತ್ತು ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜು ತಂಡ, ಸುರತ್ಕಲ್‌ನ ಗೋವಿಂದದಾಸ ಕಾಲೇಜಿನಲ್ಲಿ ಶನಿವಾರ ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು  ಕಬಡ್ಡಿ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡವು.
ಪುರುಷರ ವಿಭಾಗದ ಫೈನಲ್‌ನಲ್ಲಿ ಸೇಂಟ್‌ಫಿಲೋಮಿನಾ ಕಾಲೇಜು ತಂಡ, ಆಟದಿಂದ ಹಿಂದೆ ಸರಿದು ಆಳ್ವಾಸ್ ತಂಡಕ್ಕೆ ಪ್ರಶಸ್ತಿ ಬಿಟ್ಟುಕೊಟ್ಟಿತು.

ಆಳ್ವಾಸ್ ತಂಡದಲ್ಲಿ ಕಾಲೇಜಿಗೆ `ನಿಯಮಿತವಾಗಿ~ ಬರದ ಇಬ್ಬರು ಆಟಗಾರರನ್ನು ಆಡಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂತು.ಮಹಿಳಾ ವಿಭಾಗದ ಪಂದ್ಯದಲ್ಲಿ ಸೇಂಟ್ ಫಿಲೋಮಿನಾ ತಂಡ, ಸುರತ್ಕಲ್‌ನ ಗೋವಿಂದದಾಸ ಕಾಲೇಜು ತಂಡವನ್ನು ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಪುರುಷರ ವಿಭಾಗದ ಸೆಮಿಫೈನಲ್ ಪಂದ್ಯಗಳಲ್ಲಿ ಆಳ್ವಾಸ್ ತಂಡ 42-17 ಪಾಯಿಂಟ್‌ಗಳ ಅಂತರದಲ್ಲಿ ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜು ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದರೆ, ಸೇಂಟ್ ಫಿಲೋಮಿನಾ ತಂಡ 20-14 ಅಂತರದಲ್ಲಿ ಮಡಂತ್ಯಾರಿನ ಸೇಕ್ರೇಡ್ ಹಾರ್ಟ್ ಕಾಲೇಜು ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.

ಮಹಿಳಾ ವಿಭಾಗದಲ್ಲಿ  ಸೆಮಿಫೈನಲ್ ಪಂದ್ಯದಲ್ಲಿ ಫಿಲೋಮಿನಾ ಕಾಲೇಜು 58-16 ಅಂತರದಲ್ಲಿ ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜು ತಂಡವನ್ನು ಸುಲಭವಾಗಿ ಸೋಲಿಸಿದರೆ, ಗೋವಿಂದದಾಸ ಕಾಲೇಜು ತಂಡ ಫೈನಲ್‌ಗೆ ನೇರ ಪ್ರವೇಶ ಪಡೆದಿತ್ತು.

ಜಿಲ್ಲಾ ಕಬಡ್ಡಿ ಮತ್ತು ಬಾಡಿಬಿಲ್ಡರ್ಸ್‌ ಸಂಸ್ಥೆ ಅಧ್ಯಕ್ಷ ಎಚ್.ಸುದರ್ಶನ್ ಸಮಾರೋಪದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ದೈಹಿಕ ನಿರ್ದೇಶಕ ಎಚ್.ನಾಗಲಿಂಗಪ್ಪ, ದಿ.ಪದ್ಮನಾಭ ಅಮೀನ್ ಕ್ರೀಡೋತ್ಸವ ಸಂಚಾಲಕ ಸುಬ್ರಹ್ಮಣ್ಯ ಟಿ., ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೊಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಟಿ.ಎನ್. ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಗಿರಿಧರ ಹತ್ವಾರ್, ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಮೋಹನ್ ರಾವ್, ದೈಹಿಕ ಶಿಕ್ಷಕ ಹರೀಶ್, ಪ್ರೊ.ಕೃಷ್ಣಮೂರ್ತಿ, ಪ್ರೊ.ದೇವಪ್ಪ ಕುಳಾಯಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.