ADVERTISEMENT

ಇನ್ನೂ ದೂರವಾಗದ ಮಳೆ– ಕೃಷಿಕರ ಪರದಾಟ

ಪ್ರಶಾಂತ ರಾಜ ಅಡೂರು
Published 29 ನವೆಂಬರ್ 2015, 8:12 IST
Last Updated 29 ನವೆಂಬರ್ 2015, 8:12 IST

ಬದಿಯಡ್ಕ: ಕೆಲ ದಿನಗಳಿಂದ ಹಿಂಗಾರು ಮಳೆಯ ಅಬ್ಬರ ಸಂಜೆಯಾಗುತ್ತಲೇ ಜೋರಾಗುತ್ತದೆ. ಈ ಪ್ರದೇಶದಲ್ಲಿ ಬತ್ತದ ಕಟಾವು ಹಾಗೂ ಸಂಸ್ಕರಣೆಯ ಕೆಲಸಗಳು ಮುಗಿದಿದ್ದರೂ, ಎಲ್ಲವೂ ವ್ಯವಸ್ಥಿತವಾಗಿ ಮುಗಿದಿಲ್ಲ. ಬೈಹುಲ್ಲನ್ನು ಗದ್ದೆಗಳ ಬದಿಯಲ್ಲಿ ಟರ್ಪಾಲು ಹೊದೆಸಿ ರಾಶಿ ಹಾಕಿದ್ದು, ಮಳೆಯಿಂದಾಗಿ ಅದು ಒಣ ಗುವಲಕ್ಷಣ ಕಾಣುತ್ತಿಲ್ಲ. ಬತ್ತ ಮನೆ ಯೊಳಗೆ ಸೇರಿದ್ದರೂ, ಅದು ದಾಸ್ತಾನು ಮಾಡಬೇಕಾದರೆ ಇನ್ನೊಮ್ಮೆ ಬಿಸಿಲಿಗೆ ಹರಡಬೇಕು. ಇದೀಗ ಮಳೆ ಕಾಡುತ್ತಿರು ವುದರಿಂದ ಕೃಷಿಕರು ಪರದಾಡಬೇಕಾದ ಸ್ಥಿತಿ ಇದೆ.

ಅಡಿಕೆ ಕೃಷಿಕರ ಪಾಡು ಉತ್ತಮವಾಗಿಲ್ಲ. ಮಳೆಗಾಲ ಬೇಗನೆ ಆರಂಭವಾದ ಹಿನ್ನೆಲೆಯಲ್ಲಿ ಈ ವರ್ಷ ಅಡಿಕೆ ಬೇಗನೆ ಹಣ್ಣಾಗಿದೆ. ಮಳೆ ದೂರವಾಗದೆ ಅಡಿಕೆ ಕೊಯ್ಲು ನಡೆಸಿದರೆ, ಗುಣಮಟ್ಟ ರಕ್ಷಿಸಿಕೊಂಡು ಅದನ್ನು ಒಣಗಿಸುವಂತಿಲ್ಲ. ಈಗ ಮೊದಲ ಕೊಯ್ಲಿನ ಶೇಖಡಾ 60ರಷ್ಟು ಅಡಿಕೆ ಹಣ್ಣಾಗಿ ಉದುರಿದೆ. ಹಿಂಗಾರು ಮಳೆ ಕಡಿಮೆಯಾಗದ ಕಾರಣ ತೋಟ ಗಳಲ್ಲಿ ಕಾಡುಪೊದೆಗಳು ಬೇಗನೆ ಚಿಗುರಿ ಬೆಳೆಯುತ್ತದೆ. ಇದರಿಂದ ಉದುರಿದ ಅಡಿಕೆ ಹೆಕ್ಕುವುದೂ ಕಷ್ಟ. ತೋಟದಲ್ಲೇ ಉಳಿದ ಅಡಿಕೆಯು ಮಳೆ ನೀರು ಬಿದ್ದಾಗ, ಕಪ್ಪಾಗಿ ಮೊಳಕೆಯೊಡೆದು ಹಾಳಾಗುತ್ತದೆ. ಅದನ್ನು ತಪ್ಪಿಸಲು ಕೃಷಿ ಕರು ಪ್ರತಿದಿನ ಅಡಿಕೆ ಹೆಕ್ಕಬೇಕಾಗಿದೆ. ಆದರೆ ಇದು ಕಷ್ಟಕರ ಎಂದು ಕೃಷಿಕರು ಹೇಳುತ್ತಾರೆ.

ಕಷ್ಟ ಪಟ್ಟು ತೋಟದಿಂದ ಹೆಕ್ಕಿ ತಂದ ಅಡಿಕೆಯನ್ನು ಒಣಗಿಸುವುದು ಮತ್ತೊಂದು ಸಮಸ್ಯೆ. ಮಳೆ ದೂರ ವಾಗದ ಕಾರಣ ಅಂಗಳದ ದುರಸ್ತಿ ಕಾರ್ಯ ಸಾಧ್ಯವಾಗಿಲ್ಲ. ಮನೆಯ ಪಡ ಸಾಲೆ ಸಹಿತ ಎಲ್ಲಾ ಕಡೆಯೂ ಅಡಿಕೆ ಹರಡಿಯಾಯಿತು. ಪ್ಲಾಸ್ಟಿಕ್ ಮನೆಯೂ ತುಂಬಿದೆ. ಮಳೆ ಮುಂದುವರಿದರೆ ಇನ್ನು ಅಡಿಕೆ ಒಣಗಿಸುವುದು ಹೇಗೆ ಎಂಬ ಆತಂಕ ಕೃಷಿಕರನ್ನು ಕಾಡುತ್ತಿದೆ. ಇದೀಗ ಅಡಿಕೆಯ ರಕ್ಷಣೆಯೇ ಕೃಷಿಕರಿಗೆ ಸವಾಲಾಗಿದೆ.

ಹಿಂಗಾರು ಮಳೆ ಇನ್ನೂ ಮುಂದುವರಿದರೆ ಮುಂದಿನ ವರ್ಷದ ಅಡಿಕೆ ಫಸಲಿಗೂ ತೊಂದರೆಯಾಗಬಹುದೆಂಬ ಹೆದರಿಕೆಯೂ ಇದೆ. ಕಾರ್ಮಿಕರ ಕೊರತೆಯಿಂದ ಕಂಗಾಲಾಗಿರುವ ಅಡಿಕೆ ಕೃಷಿ ಕರಿಗೆ ವಾತಾವರಣವೂ ಪ್ರತಿಕೂಲವಾಗಿ ಅಸಹಕಾರ ತೋರುತ್ತಿದೆ. ರಬ್ಬರ್ ಬೆಳೆ ಗಾರರಿಗೂ ಹಿಂಗಾರು ಮಳೆ ತೊಂದರೆಯನ್ನು ಉಂಟುಮಾಡಿದೆ. ಸೋಮವಾರವೂ ಕೂಡಾ ಬದಿಯಡ್ಕ, ಮುಳ್ಳೇ ರಿಯ, ಅಡೂರು ಪ್ರದೇಶಗಳಲ್ಲಿ ಸುಮಾರು 1 ಗಂಟೆ ಕಾಲ ಧಾರಾಕಾರ ಮಳೆ ಸುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.