ADVERTISEMENT

ಎಟಿಎಂ ಕಳವಿಗೆ ವಿಫಲ ಯತ್ನ

ಸಾಸ್ತಾನ ಕಾರ್ಪೋರೇಶನ್‌ ಬ್ಯಾಂಕ್‌

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 9:14 IST
Last Updated 11 ಡಿಸೆಂಬರ್ 2013, 9:14 IST

ಬ್ರಹ್ಮಾವರ: ಸಾಸ್ತಾನ ಪಾಂಡೇಶ್ವರದಲ್ಲಿರುವ ಕಾರ್ಪೊ­ರೇಷನ್‌ ಬ್ಯಾಂಕ್‌ ಎ.ಟಿ.ಎಂನ್ನು ಸೋಮ­ವಾರ ರಾತ್ರಿ ಕಳವು ಮಾಡಲು ಯತ್ನಿಸಿದ ಘಟನೆ ನಡೆದಿದೆ. ಇತ್ತೀಚೆಗಷ್ಟೇ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿದ ಎ.ಟಿ.ಎಂ ಯಂತ್ರವನ್ನು ಮತ್ತು ಅಲ್ಲಿದ್ದ ಸಿ.ಸಿ. ಕ್ಯಾಮೆರಾವನ್ನು ಒಡೆದು ಹಾಕಿದ್ದಾರೆ.

ಮಂಗಳವಾರ ಬೆಳಿಗ್ಗೆ ಸುಮಾರು 8ಗಂಟೆಗೆ ಸ್ಥಳೀಯ ನಿವಾಸಿ ಅರುಣ್‌ ಲೂಯಿಸ್‌ ಎನ್ನುವವರು ಹಣ ತೆಗೆಯಲು ಎ.ಟಿ.ಎಂಗೆ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಕೂಡಲೇ ಕೋಟ ಪೋಲಿಸ್‌ ಠಾಣೆಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಪೋಲಿಸರು ಬ್ಯಾಂಕ್‌ ಪರಿ­ಶೀಲಿಸಿ ತನಿಖೆ ನಡೆಸಿದ್ದಾರೆ.

ಮಧ್ಯಾಹ್ನ ಸುಮಾ­ರಿಗೆ ಉಡುಪಿಯಿಂದ ಬಂದ ಶ್ವಾನದಳ ತಪಾಸಣೆ ನಡೆಸಿದಾಗ ಎ.ಟಿ.ಎಂ ಹಿಂಭಾ­ಗದಲ್ಲಿರುವ ಪೊದೆಯಲ್ಲಿ ಕಬ್ಬಿಣದ ಸರಳು ದೊರ­ಕಿದೆ. ಅಲ್ಲಿಂದ ಮುಂದೆ ಶ್ವಾನದಳ ಹೆದ್ದಾರಿವರೆಗೆ ಸಾಗಿತ್ತು. ಈ ಸರಳನ್ನು ದರೋಡೆಗೆ ಉಪಯೋ­ಗಿಸಿರಬಹುದು ಎಂದು ಅಂದಾಜಿಸ­ಲಾಗಿದೆ. ಬೆರ­ಳಚ್ಚು ತಜ್ಞರೂ ತನಿಖೆ ನಡೆಸಿದ್ದಾರೆ.

ಸುಮಾರು ಒಂದು ತಿಂಗಳ ಹಿಂದಷ್ಟೇ ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 90ಮೀ.ದೂರದಲ್ಲಿ ಈ ಎ.ಟಿ.ಎಂನ್ನು ಆರಂಭಿಸಲಾಗಿತ್ತು. ಯಾವುದೇ ಕಾವಲುಗಾರನ್ನು ಬ್ಯಾಂಕ್‌ ನೇಮಿಸಿರಲಿಲ್ಲ ಮತ್ತು ಸರಿಯಾದ ವಿದ್ಯುತ್‌ ದೀಪಗಳನ್ನು ಅಳವಡಿಸಿರಲಿಲ್ಲ ಎಂದು ಹೇಳಲಾಗಿದೆ. ಮಾಹಿತಿಯ ಪ್ರಕಾರ ರಾತ್ರಿ 9.12ಕ್ಕೆ ಕೊನೆಯ ಬಾರಿ ಎ.ಟಿಎಂ ಬಳಸಲಾಗಿತ್ತು.

ರಾತ್ರಿ ಸುಮಾರು 2.02ಕ್ಕೆ ಸಿ.ಸಿ ಕ್ಯಾಮೆರಾವನ್ನು ಹಾನಿಗೊಳಿಸಲಾಗಿದೆ ಎಂದು ಹೇಳಲಾಗಿದೆ. ಪೋಲಿಸರು ಸಿ.ಸಿ ಕ್ಯಾಮೆರಾ ದೃಶ್ಯಗಳನ್ನು ವೀಕ್ಷಿಸಿ ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬ್ರಹ್ಮಾವರ ಪೋಲಿಸ್‌ ವೃತ್ತ ನಿರೀಕ್ಷಕ ಅರುಣ ನಾಯಕ್‌, ಕೋಟ ಪೋಲಿಸ್‌ ಠಾಣೆಯ ಪಿ.ಎಸ್‌.ಐ ಕೆ.ಆರ್‌.ನಾಯಕ್‌ ಮತ್ತು ಇತರೆ ಅಧಿಕಾರಿಗಳು ಆಗಮಿಸಿದ್ದು ತನಿಖೆ ಪ್ರಗತಿಯಲ್ಲಿದೆ.

ಬೆಂಗಳೂರಿನ ಘಟನೆಯ ನಂತರ ಇಲ್ಲಿಯೂ ಕಾವಲುಗಾರನ ನೇಮಕ ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ನೀಡಲಾಗಿದೆ. ಎ.ಟಿಎಂ ನಿಂದ ಎಷ್ಟು ಹಣ ಹೋಗಿದೆ ಎನ್ನುವ ಬಗ್ಗೆ ಇನ್ನೂ ನಿಖರವಾಗಿ ಗೊತ್ತಾಗಿಲ್ಲ. ತನಿಖೆ ನಡೆಯುತ್ತಿದೆ ಎಂದು ಅಧಿಕಾರಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.