ಸುರತ್ಕಲ್: ಕರಾವಳಿ ಜಿಲ್ಲೆಗಳ ಸಿಇಟಿ ವಿದ್ಯಾರ್ಥಿಗಳ ಹಲವು ವರ್ಷಗಳ ಬೇಡಿಕೆ ಈಡೇರಿದೆ. ಸೋಮವಾರ ಎನ್ಐಟಿಕೆಯಲ್ಲಿ ಸಿಇಟಿ ಹೆಲ್ಪ್ಲೈನ್ ಕೇಂದ್ರ ತೆರೆಯುವ ಮೂಲಕ ಸಿಇಟಿ ವಿದ್ಯಾರ್ಥಿಗಳ ಕನಸು ನನಸಾಗಿದೆ. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸೀಟುಗಳಿಗೆ ಈ ಕೇಂದ್ರದಿಂದ ವಿದ್ಯಾರ್ಥಿಗಳು ಕೌನ್ಸೆಲಿಂಗ್ನಲ್ಲಿ ಭಾಗವಹಿಸಬಹುದಾಗಿದೆ.
ರಾಜ್ಯದ ಯಾವುದೇ ಪ್ರದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇಲ್ಲಿಂದಲೇ ಪ್ರವೇಶಾವಕಾಶ ಪಡೆಯಲು ಸಾಧ್ಯವಾಗಲಿದೆ. ಎನ್ಐಟಿಕೆ ನಿರ್ದೇಶಕ ಡಾ.ಜೆ ಉಮೇಶ್ ಸೋಮವಾರ ಸಿಇಟಿ ಹೆಲ್ಪ್ಲೈನ್ ಸೆಂಟರ್ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜವೀರ ಇಂದ್ರ ಮಾತನಾಡಿ, ಎನ್ಐಟಿಕೆಯ ಸಿಇಟಿ ಕೇಂದ್ರದ ಪ್ರಯೋಜನವನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಪಡೆಯಬೇಕು. ಈ ಹಿಂದೆ ರಾಜ್ಯದ ಇತರೆಡೆಯ ಜಿಲ್ಲೆಗಳಿಗೆ ಹೋಗಿ ವಿದ್ಯಾರ್ಥಿಗಳು ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಾಗಿತ್ತು. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಅಮೂಲ್ಯ ಸಮಯ, ಶ್ರಮ, ಆರ್ಥಿಕ ನಷ್ಟ ಎದುರಿಸುವಂತಾಗಿತ್ತು. ಈ ನಿಟ್ಟಿನಲ್ಲಿ ಇಲ್ಲಿ ಕೇಂದ್ರ ಆರಂಭವಾಗಿರುವುದು ಉತ್ತಮ ಬೆಳವಣಿಗೆ~ ಎಂದು ಅಭಿಪ್ರಾಯಪಟ್ಟರು.
ಜುಲೈ 10ರವರೆಗೆ ದಾಖಲೆಗಳ ಪರಿಶೀಲನೆ, 12ರಿಂದ 18ರವರೆಗೆ ಆಪ್ಶನ್ ಎಂಟ್ರಿ ನಡೆಯಲಿದೆ. ದ.ಕ., ಉಡುಪಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಂದ ವಿದ್ಯಾರ್ಥಿಗಳು ಭಾಗವ ಹಿಸುವ ನಿರೀಕ್ಷೆಯಿದ್ದು, ಕೌನ್ಸೆಲಿಂಗ್ ಮೂಲಕ 33 ವೈದ್ಯಕೀಯ ಕಾಲೇಜು ಗಳಲ್ಲಿ, 183 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟುಗಳನ್ನು ಪಡೆಯಬಹುದಾಗಿದೆ. ಕೇಂದ್ರದ ನೋಡೆಲ್ ಅಧಿಕಾರಿ ಸುರೇಶ್ ತುಂಗ, ಪಿ.ಪಿ.ಜೋಸೆಫ್, ವಿಜಯಕುಮಾರ್, ರಮೇಶ್, ಮನೋಹರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.