
ಪಡುಬಿದ್ರಿ: ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿನಡ್ಕ ಹಾಗೂ ದೀನ್ಸ್ಟ್ರೀಟ್ಗಳನ್ನು ವರ್ಷದೊಳಗೆ ಸಂಸದರ ನಿಧಿಯಿಂದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಭರವಸೆ ನೀಡಿದರು.
ಪಡುಬಿದ್ರಿಯ ಕಂಚಿನಡ್ಕ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರಿಗೆ ಈ ವಿಷಯ ತಿಳಿಸಿದರು.
ಲೋಕಸಭಾ ಉಪಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಕಂಚಿನಡ್ಕ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಸ್ತೆ ಹದಗೆಟ್ಟಿರುವುದನ್ನು ಸ್ಥಳೀಯರು ನಮ್ಮ ಗಮನಕ್ಕೆ ತಂದಿದ್ದು, ವರ್ಷದೊಳಗೆ ರಸ್ತೆಗೆ ಕಾಂಕ್ರೀಟ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕಂಚಿನಡ್ಕ ಶಾಲೆಯಿಂದ ಸುಜ್ಲಾನ್ ಗೇಟ್ ತನಕ ಮುಕ್ಕಾಲು ಕಿ.ಮೀ. ರಸ್ತೆಗೆ ರೂ.25 ಲಕ್ಷ, ಕಂಚಿನಡ್ಕ ಮುಮ್ತಾಜ್ ಮನೆಯಿಂದ ಪರಿಶಿಷ್ಟ ಜಾತಿಯ ಕಾಲನಿಯ ಮುಕ್ಕಾಲು ಕಿಮೀ ರಸ್ತೆಗೆ ರೂ.25 ಲಕ್ಷ ಮಸೀದಿಯಿಂದ ಶಾಲೆಯವರೆಗಿನ ಮುಕ್ಕಾಲು ಕಿ.ಮೀ ರಸ್ತೆಗೆ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್, ಪಡುಬಿದ್ರಿ ದೀನ್ಸ್ಟ್ರೀಟ್ನ ಸುಮಾರು 1 ಕಿ.ಮೀ ರಸ್ತೆಗೆ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಸಚಿವ ವಸಂತ ಸಾಲ್ಯಾನ್ ಮಾತನಾಡಿ ಕಂಚಿನಡ್ಕ ಪ್ರದೇಶದಲ್ಲಿ ಅಲ್ಪಸಂಖ್ಯಾತರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಬಗ್ಗೆ ಮಾಹಿತಿ ದೊರಕಿದ್ದು, ಈ ಬಗ್ಗೆ ಪಕ್ಷ ಕಾರ್ಯಕರ್ತರ ಸಮೀಕ್ಷೆ ನಡೆಸಿ ಮರು ಸೇರ್ಪಡೆಗೊಳಿಸಲಾಗುವುದು. ಇದೇ ರೀತಿ ಪಡಿತರ ಚೀಟಿ ಸಮಸ್ಯೆ ನಿವಾರಣೆಗೆಗೂ ಕ್ರಮಕೈಗೊಳ್ಳ ಲಾಗುವುದು ಎಂದರು.
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಎಂ..ಪಿ.ಮೊಯ್ದಿನಬ್ಬ, ಪಡುಬಿದ್ರಿ ಸ್ಥಾನೀಯ ಸಮಿತಿ ಅಧ್ಯಕ್ಷ ವಿಜಯ್ ಅಮೀನ್, ಕಾಂಗ್ರೆಸ್ ಮುಖಂಡ ಎಂ.ಎ.ಗಫೂರ್, ಗ್ರಾ.ಪಂ. ಸದಸ್ಯರಾದ ನವೀನ್ ಎನ್.ಶೆಟ್ಟಿ, ಅಬ್ದುಲ್ ಹಮೀದ್ ಕನ್ನಂಗಾರ್, ಸ್ಥಳೀಯರಾದ ಪಿ.ಎಂ.ಉಮರ್ ಫಾರೂಕ್, ಮುಹಮ್ಮದ್ ಇಕ್ಬಾಲ್ ನೂರಿ, ಜಯ ಶೆಟ್ಟಿ, ಬುಡಾನ್ ಸಾಹೇಬ್, ರವಿ ಶೆಟ್ಟಿ ಅಗರಮೇಲ್, ಪಿ.ಆಜಬ್ಬ, ಡೇವಿಡ್ ಡಿಸೋಜ, ಅಬ್ದುರ್ರಹ್ಮಾನ್ ಕನ್ನಂಗಾರ್, ಹಮ್ಮಬ್ಬ ಮೊಯಿದಿನ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.