ADVERTISEMENT

ಕಡಲ್ಕೊರೆತ: ಅನುದಾನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 6:16 IST
Last Updated 14 ಜೂನ್ 2013, 6:16 IST
ಪಡುಬಿದ್ರಿ ಸಮೀಪದ ಎರ್ಮಾಳಿನ ತೊಟ್ಟಂ ಕಡಲ್ಕೊರೆತ ಪ್ರದೇಶಕ್ಕೆ ಮಾಜಿ ಸಚಿವ ವಸಂತ ಸಾಲ್ಯಾನ್, ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಗುರುವಾರ ಭೇಟಿ ನೀಡಿದರು. 	(ಪಡುಬಿದ್ರಿ ಚಿತ್ರ)
ಪಡುಬಿದ್ರಿ ಸಮೀಪದ ಎರ್ಮಾಳಿನ ತೊಟ್ಟಂ ಕಡಲ್ಕೊರೆತ ಪ್ರದೇಶಕ್ಕೆ ಮಾಜಿ ಸಚಿವ ವಸಂತ ಸಾಲ್ಯಾನ್, ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಗುರುವಾರ ಭೇಟಿ ನೀಡಿದರು. (ಪಡುಬಿದ್ರಿ ಚಿತ್ರ)   

ಪಡುಬಿದ್ರಿ: ಕಳೆದ ಬಾರಿ ರಾಜ್ಯ ಸರ್ಕಾರ 3 ಜಿಲ್ಲೆಗಳ ಸಮುದ್ರ ಕೊರೆತಕ್ಕೆ ಪರಿಹಾರವಾಗಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ 300 ಕೋಟಿ ರೂಪಾಯಿ ಯೋಜನೆ ರೂಪಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಿದ್ದು, ರಾಜ್ಯ ಸರ್ಕಾರ ಈ ಕೂಡಲೇ ಕೇಂದ್ರಕ್ಕೆ ಮರು ಮನವಿ ಸಲ್ಲಿಸಿ ಅನುದಾನ ಬಿಡುಗಡೆಗೆ ಪ್ರಯತ್ನಿಸಬೇಕು ಎಂದು ಮಾಜಿ ಸಚಿವ ವಸಂತ ಸಾಲ್ಯಾನ್ ಒತ್ತಾಯಿಸಿದ್ದಾರೆ.

ಗುರುವಾರ ತೆಂಕ ಎರ್ಮಾಳು ಗ್ರಾಮದ ಯುಪಿಸಿಎಲ್ ಪೈಪ್‌ಲೈನ್ ಸಮೀಪದ ತೊಟ್ಟಂ ಎಂಬಲ್ಲಿ ಕಾಣಿಸಿ ಕೊಂಡಿರುವ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

`ನಾನು ಮೀನುಗಾರಿಕಾ ಸಚಿವ ನಾಗಿದ್ದ ಸಂದರ್ಭ ಉಳ್ಳಾಲದಲ್ಲಿ 9 ಕೋಟಿ ರೂಪಾಯಿ ವೆಚ್ಚದ ಪ್ರಾಯೋ ಗಿಕ ಶಾಶ್ವತ ತಡೆಗೋಡೆಗೆ ಯೋಜನೆ ಹಮ್ಮಿ ಕೊಂಡಿದ್ದು ಈವರೆಗೂ ಜಾರಿ ಯಾಗಿಲ್ಲ. ಕೂಡಲೇ ಅಲ್ಲಿ ಅದನ್ನು ಕಾರ್ಯಗತ ಗೊಳಿಸಬೇಕು, ಬಳಿಕ ರಾಜ್ಯದ ಸಮುದ್ರಕೊರೆತ ಪ್ರದೇಶಗಳಿಗೆ ಯೋಜನೆ ಮುಂದುವರಿಸಬೇಕು' ಎಂದರು.

ಶುಕ್ರವಾರ ಉಡುಪಿ ಜಿಲ್ಲಾಧಿಕಾರಿ ಬಳಿ ಜೆಡಿಎಸ್ ನಿಯೋಗ ತೆರಳಿ ಈ ಬಗ್ಗೆ ಮನವಿ ಸಲ್ಲಿಸಿ ಸಮುದ್ರ ಕೊರೆತ ತೀವ್ರಗೊಂಡಿರುವ ಪ್ರದೇಶಗಳಿಗೆ ತಕ್ಷಣ ತೆರಳಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಒತ್ತಾಯಿಸಲಾಗುವುದು. ಸಮುದ್ರ ಕೊರೆತ ಪ್ರದೇಶಗಳ ಬಗ್ಗೆ ಸಮೀಕ್ಷೆ ನಡೆಸಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೂ ಮನವಿ ಸಲ್ಲಿಸಲಾಗುವುದು ಎಂದರು.

ಯುಪಿಸಿಎಲ್ ತಡೆಗೋಡೆ ತೆರವಿಗೆ ಆಗ್ರಹ: ಎರ್ಮಾಳು ತೆಂಕ ಹಾಗೂ ಬಡಾ ಗ್ರಾಮವನ್ನು ಕಡಲತೀರದಲ್ಲಿ ಸಂಪರ್ಕಿಸುವ ತೊಟ್ಟಂ ಪ್ರದೇಶದಲ್ಲಿ ಯುಪಿಸಿಎಲ್‌ಗಾಗಿ ಸಮುದ್ರದಿಂದ ಪೈಪ್ ಅಳವಡಿಕೆಗೆ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ, ಸಮುದ್ರ ತಡೆಗೋ ೆಯನ್ನು ತಕ್ಷಣ ತೆರವುಗೊಳಿಸದಿದ್ದಲ್ಲಿ ತೆಂಕ ಹಾಗೂ ಪಡುಬಿದ್ರಿ ವ್ಯಾಪ್ತಿಯಲ್ಲಿ ಕಡಲ್ಕೊರೆತ ನಿರಂತರವಾಗಿರುತ್ತದೆ ಎಂದು ಸಾಲ್ಯಾನ್ ಎಚ್ಚರಿಸಿದರು.

ತೀವ್ರ ಕಡಲ್ಕೊರೆತದಿಂದ ಕಳೆದ 3 ವರ್ಷಗಳಿಂದ ಸತತವಾಗಿ ತೊಟ್ಟಂ ಬಳಿ ಮೀನುಗಾರಿಕಾ ರಸ್ತೆ ಸಮುದ್ರ ಪಾಲಾಗಿರುವ ಭೀತಿ ಎದುರಾಗಿದೆ. ಹಾಗಾಗಿ ಇದಕ್ಕೆ ಕಾರಣವಾಗಿರುವ ಯುಪಿಸಿಎಲ್ ತಾತ್ಕಾಲಿಕ ಸಮುದ್ರ ತಡೆ ಗೋಡೆಯನ್ನು ತಕ್ಷಣ ತೆರವುಗೊಳಿ ಸಬೇಕು ಎಂದು ಗುರುವಾರ ತೊಟ್ಟಂ ಸಮುದ್ರ ಕೊರೆತ ಪ್ರದೇಶಕ್ಕೆ ಜೆಡಿಎಸ್ ನಿಯೋಗದೊಂದಿಗೆ ಭೇಟಿ ನೀಡಿದ ವೇಳೆ ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ವಾಸುದೇವ ರಾವ್, ದಕ್ಷಿಣ ಕನ್ನಡ ಉಡುಪಿ ಸಹಕಾರಿ ಮೀನು ಮಾರಾಟ ಫೆಡರೇಷನ್ ಮಾಜಿ ಅಧ್ಯಕ್ಷ ವೈ. ಗಂಗಾಧರ ಸುವರ್ಣ, ಯೋಗೀಶ್ ಶೆಟ್ಟಿ, ಕೃಷ್ಣ ಸನಿಲ್, ಸಂಶುದ್ದೀನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.