ADVERTISEMENT

ಕಾಂಗ್ರೆಸ್ ಗೆ ಮೂರನೇ ಸ್ಥಾನ: ಜೀವರಾಜ್

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2014, 5:16 IST
Last Updated 12 ಏಪ್ರಿಲ್ 2014, 5:16 IST

ನರಸಿಂಹರಾಜಪುರ: ಪ್ರಸ್ತುತ ನಡೆ­ಯುವ ಲೋಕಸಭಾ ಚುನಾವಣೆ­ಯಲ್ಲಿ ಕಾಂಗ್ರೆಸ್ ಮುಖಂಡರು ಯುದ್ಧಕ್ಕಿಂತ ಮುಂಚೆ ಶಸ್ತ್ರ ತ್ಯಾಗ ಮಾಡಿದ್ದು ಮೂರನೇ ಸ್ಥಾನಗಳಿಸಲಿದೆ ಎಂದು ಶಾಸಕ ಡಿ.ಎನ್.ಜೀವರಾಜ್ ಲೇವಡಿ ಮಾಡಿದರು. ತಾಲ್ಲೂಕಿನ ಬಿ.ಎಚ್.ಕೈಮರ ಗ್ರಾಮದಲ್ಲಿ ಗುರುವಾರ ರಾತ್ರಿ ಉಡುಪಿ­–­ಚಿಕ್ಕಮಗಳೂರು ಲೋಕ­ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಕರಂದ್ಲಾಜೆ ಪರ ಮತಯಾಚನೆ ಸಮಾರಂಭದಲ್ಲಿ  ಮಾತನಾಡಿದರು.


ಪ್ರಸ್ತುತ ಲೋಕಸಭಾ ಚುನಾವಣೆ­ಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ 250ಕ್ಕೂ ಅಧಿಕ ಸ್ಥಾನ, ತೃತೀಯ ರಂಗ 120ಕ್ಕೂ ಅಧಿಕ ಹಾಗೂ ಕಾಂಗ್ರೆಸ್ 80 ಸ್ಥಾನಗಳಲ್ಲಿ ಜಯಗಳಿಸಲಿದೆ. ನರೇಂದ್ರ ಮೋದಿ ಟೀ ಮಾರಾಟ ಮಾಡಿದರೆ ಕಾಂಗ್ರೆಸ್ ನವರು ದೇಶ ಮಾರಾಟ ಮಾಡುತ್ತಾರೆ ಎಂದು ಜರಿದರು.

ಮೋದಿ ಬಡಮಕ್ಕಳ ಕಷ್ಟಗಳಿಗೆ ಸ್ಪಂದಿಸುತ್ತಾರೆ. ಕಾಂಗ್ರೆಸ್ ನವರಿಗೆ ಪ್ರಧಾನಿ ಹುದ್ದೆ ಎಂಬುದು ಖಾತೆ ಬದಲಾವಣೆಯಿದ್ದಂತೆ. ಈ ಲೋಕ­ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆಯಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಸಂಸದರು ಗುರುತಿಸ­ಬಹುದಾದ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲಿಲ್ಲ, ಹಾಗೆ ಮಾಡಿ­ದ್ದರೆ ಅದನ್ನು ತೋರಿಸುವ ಕೆಲಸ ಮಾಡಲಿ ಎಂದು ಸವಾಲು ಹಾಕಿದರು.

ಬಿಜೆಪಿ ಅಭ್ಯರ್ಥಿ ಇಂಧನ ಸಚಿವೆ­ಯಾಗಿದ್ದಾಗ ಈ ಭಾಗದ ವಿದ್ಯುತ್ ವಿತರಣಾ ಕೇಂದ್ರಕ್ಕೆ ಹಣ ಬಿಡುಗಡೆ ಮಾಡಿದರು. ಬರಗಾಲದ ನಡು­ವೆಯೂ ನಿರಂತರ ವಿದ್ಯುತ್ ಪೂರೈ­ಸುವ ಕಾರ್ಯ ಮಾಡಿದರು. ಎಂಡೋ­ಸಲ್ಫಾನ್ ನಿಂದ ಅಂಗ­ವೈಕಲ್ಯತೆ­ಗೊಳ­ಗಾದ ಮಕ್ಕಳಿಗೆ ಪುನರ್ ವಸತಿ ಸೌಲಭ್ಯ, ಮಂಗಳ­ಮುಖಿಯರಿಗೆ ಮಾಸಾ­ಶನ ಕೊಡಿಸುವ ಕಾರ್ಯ ಮಾಡಿದ್ದಾರೆ. ಬಿಜೆಪಿ ಅಧಿಕಾರ­ದಲ್ಲಿ­ದ್ದಾಗ ಪಕ್ಷಾತೀತ­ವಾಗಿ ಎಲ್ಲಾ ರೈತರ ಹಿತ ಕಾಪಾಡುವ ಕಾರ್ಯ ಮಾಡಿ­ದ್ದರೆ, ಕಾಂಗ್ರೆಸ್ ಒತ್ತುವರಿ ತೆರವುಗೊಳಿಸುವ ಕಾರ್ಯ ಮಾಡು­ತ್ತಿದ್ದೆ ಎಂದು ದೂರಿದರು.

ಬಿಜೆಪಿ ಮುಖಂಡ ಪಿ.ಜೆ.ಆಂಟನಿ ಮಾತನಾಡಿ, ಸಂಸದರು ಯಾವುದೇ ಕಾಮಗಾರಿಯನ್ನು ಕೈಗೊಳ್ಳದಿದ್ದರು ಸುಳ್ಳು ಮಾಹಿತಿಯಿರುವ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಹಿಂದೆ ಚಂದ್ರೇಗೌಡರು ಇದೇ ರೀತಿ ಮಾಡಿ­ದ್ದರು ಎಂದು ಆರೋಪಿಸಿದರು. ಮುಖಂಡರಾದ ಗೋಪಾಲ್, ವಿ.ನಿಲೇಶ್, ಸುಜಾತ, ಸಂಪತ್ ಕುಮಾರ್, ಜಿ.ಎಂ.ಪ್ರಕಾಶ್, ಎನ್.ಜಿ.­ನಾಗೇಶ್, ಮಲ್ಲಿಕಾ ನವೀನ್, ರೀನಾ ಬೆನ್ನಿ, ಡೈಸಿ ಜೇಮ್ಸ್, ಕೆಸವೆ ಮಂಜುನಾಥ್ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT