ADVERTISEMENT

ಕಾಂಗ್ರೆಸ್ ಪರ ಸಾಹಿತಿಗಳ ಪ್ರಚಾರ: ಮಾಳವಿಕಾ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2014, 5:52 IST
Last Updated 7 ಏಪ್ರಿಲ್ 2014, 5:52 IST

ಚಿಕ್ಕಮಗಳೂರು: ಜ್ಞಾನ ಪೀಠ ಪ್ರಶಸ್ತಿ ಪಡೆದ ಕೆಲವು ಸಾಹಿತಿಗಳು ನೇರವಾಗಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡುವ ಮೂಲಕ ಸಾಹಿತ್ಯ ಕ್ಷೇತ್ರ ಕಲುಷಿತ­­ಗೊಳಿಸುತ್ತಿರುವುದು ವಿಷಾದ­ನೀಯ ಎಂದು ಚಲನಚಿತ್ರ ನಟಿ ಹಾಗೂ ಬಿಜೆಪಿ ರಾಜ್ಯ ಸಹವಕ್ತಾರೆ ಮಾಳವಿಕಾ ಅವಿನಾಶ್‌ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನಗರದ ವಿವಿಧ ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಭಾನುವಾರ ಮತಯಾಚನೆ ಮಾಡಿ ಮಾತನಾಡಿದರು.
ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಗೌರವವಿದೆ. ಅದರಲ್ಲೂ ಜ್ಞಾನಪೀಠ ಪ್ರಶಸ್ತಿ ಬಗ್ಗೆ ದೇಶದ ಜನರಲ್ಲಿ ಉತ್ತಮ ಸಂದೇಶವಿದೆ. ಆದರೆ ಸಾಹಿತಿಗಳು ಪಕ್ಷಾ­ತೀತವಾದ ಮಾಡುವುದು ಬಿಟ್ಟು ಕಾಂಗ್ರೆಸ್‌ಗೆ ಮಣೆ ಹಾಕುತ್ತಿರುವುದನ್ನು ನೋಡಿದರೆ ರಾಷ್ಟ್ರದಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಆದ ಭ್ರಷ್ಟಾ­ಚಾರಕ್ಕೆ ಇವರ ಬೆಂಬಲವೂ ಇದೆ ಎಂಬ ಅನುಮಾನ ಜನರಲ್ಲಿ ಕಾಡುತ್ತಿದೆ ಎಂದು ಕಿಡಿಕಾರಿದರು.

‘ಚಿಕ್ಕಮಗಳೂರು- ಉಡುಪಿ ಲೋಕ­ಸಭಾ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೆ ಹೆಚ್ಚಿದ್ದಾರೆ. ನಮ್ಮ ಒಗ್ಗಟ್ಟನ್ನು ಮತದಾನದ ಮೂಲಕ ಬಹಿರಂಗ ಪಡಿಸಿಬೇಕು. ದಕ್ಷಿಣ ಭಾರತದಲ್ಲಿ ಒಬ್ಬ ಮಹಿಳೆ ಲೋಕಸಭಾ ಸದಸ್ಯರಾದರೆ ಇಡೀ ಮಹಿಳಾ ಸಮೂಹಕ್ಕೆ ಶಕ್ತಿ ಬಂದಂತೆ. ಈ ಹಿಂದೆ ಶೋಭಾ ಕರಂದ್ಲಾಜೆಯವರು ಬಿಜೆಪಿ ಸರ್ಕಾರದಲ್ಲಿ ಇಂಧನ ಮತ್ತು ಗ್ರಾಮೀಣಾ­ಭಿವೃದ್ದಿ ಇಲಾಖೆ ಮಂತ್ರಿ­ಯಾ­ದಾಗ ಉತ್ತಮವಾಗಿ ಕೆಲಸ ನಿಭಾ­ಯಿಸಿ ಮಹಿಳೆಯು ಅಚ್ಚುಕಟ್ಟಾಗಿ ಅಧಿಕಾರ ನಡೆಸಬಲ್ಲಳು ಎಂಬುದನ್ನು ರಾಜ್ಯದ ಜನಕ್ಕೆ ತೋರಿಸಿಕೊಟ್ಟಿದ್ದಾರೆ’ ಎಂದರು.

ಈ ಕ್ಷೇತ್ರದಲ್ಲಿ ಹಿಂದೆ ಬಂದಾಗ ರಸ್ತೆಗಳು ಅಭಿವೃದ್ಧಿ ಕಂಡಿರಲಿಲ್ಲ. ಈಗ ಸಿ.ಟಿ.ರವಿಯವರು ಶ್ರಮ ವಹಿಸಿ ಕ್ಷೇತ್ರದಲ್ಲಿನ ರಸ್ತೆಗಳು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯ ಮಾಡಿರು­ವುದನ್ನು ನೋಡಿದಾಗ ಬಿಜೆಪಿ ಪರ ಮತದಾರರು ಗಟ್ಟಿಯಾಗಿ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ನಗರಾಧ್ಯಕ್ಷ ವರಸಿದ್ದಿ ವೇಣು­ಗೋಪಾಲ್, ಸಿ.ಎಚ್.­ಲೋಕೇಶ್, ನಗರಸಭೆ ಅಧ್ಯಕ್ಷ ಕೆ.ಎಸ್.­ಪುಷ್ಪರಾಜ್, ಸದಸ್ಯರಾದ ರವೀಂದ್ರನಾಥ್‌ ಪ್ರಭು, ಎಲ್.ಕೆ.ರಮೇಶ್, ಸಿ.ಎಸ್.ರವಿ, ಕೆ.ಶ್ರೀನಿ­ವಾಸ್ ,ಮಹಿಳಾ ಮೋರ್ಚಾ ಜಿಲ್ಲಾ­ಧ್ಯಕ್ಷೆ ಆಶಾ, ವೀಣಾಶೆಟ್ಟಿ, ನಾರಾಯಣ, ಚಿನ್ನು, ರಾಜು, ಚೇತನ್, ಏಕಾಂತ­ರಾಮು, ಶಾರದ, ನಂದೀಶ್, ಸತೀಶ್, ರಾಕೇಶ್, ನೀಲೇಶ್, ಪೂರ್ಣೇಶ, ಮಧು ಕೆ.ಪಿ. ದಿನೇಶ್ ಕೋಟೆ, ಚಮಿನ್, ಉಪ್ಪಳ್ಳಿ ಲೋಕೇಶ್, ಮಿಲ್ಟ್ರಿಮಂಜು ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.