ADVERTISEMENT

ಕಾರಂತರ ಕಂಚಿನ ಪ್ರತಿಮೆ ಅನಾವರಣ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 5:35 IST
Last Updated 13 ಅಕ್ಟೋಬರ್ 2011, 5:35 IST

ಕೋಟತಟ್ಟು (ಉಡುಪಿ): ಕೋಟದ ಡಾ.ಶಿವರಾಮ ಕಾರಂತರ ಹುಟ್ಟೂರಿನಲ್ಲಿ ಸುಮಾರು ರೂ.2ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಡಾ.ಕಾರಂತ ಕಲಾ ಭವನ ಹಾಗೂ ಅಂದಾಜು ರೂ.8 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಡಾ.ಕಾರಂತರ ಕಂಚಿನ ಪ್ರತಿಮೆಯನ್ನು ಬುಧವಾರ ಅನಾವರಣಗೊಳಿಸಲಾಯಿತು.

ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಅನುಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್.ಆಚಾರ್ಯ ಅವರು `ಕಲಾ ಭವನ~ವನ್ನು ಉದ್ಘಾಟಿಸಿದರು. ಮೂರನೇ ಹಣಕಾಸು ಆಯೋಗ ಅನುಷ್ಠಾನ ಕಾರ್ಯಪಡೆ ಅಧ್ಯಕ್ಷ ಎ.ಜಿ.ಕೊಡ್ಗಿ ಅವರು ಡಾ.ಕಾರಂತರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಸುಮಾರು 80 ಸೆಂಟ್ಸ್ ಜಾಗದಲ್ಲಿ ಹರಡಿಕೊಂಡಿರುವ ಕಾರಂತರ ಕಲಾ ಭವನ ನೋಡುಗರ ಕಣ್ಮನ ಸೆಳೆಯುತ್ತಿದೆ.  ಸುಮಾರು 6 ಅಡಿ ಎತ್ತರದ 300 ಕೆ.ಜಿ.ತೂಕದ ಕಾರಂತ ಕಂಚಿನ ಪ್ರತಿಮೆ ಆಕರ್ಷಕವಾಗಿದೆ. 500ಕ್ಕೂ ಹೆಚ್ಚುಮಂದಿ ಕುಳಿತು ವೀಕ್ಷಿಸಬಹುದಾಗ ಆಕರ್ಷಕ ಬಯಲು ರಂಗಮಂದಿರ ನಿರ್ಮಿಸಲಾಗಿದೆ.

ತಿಮ್ಮಕ್ಕನಿಗೆ ಮೆರವಣಿಗೆ ಸ್ವಾಗತ: ಈ ಬಾರಿಯ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪುರಸ್ಕೃತರಾಗಿರುವ ಸಾಲುಮರದ ತಿಮ್ಮಕ್ಕ ಅವರನ್ನು ಹೂವಿನಿಂದ ಅಲಂಕರಿಸಿದ ವಾಹನದಲ್ಲಿ ಮೆರವಣಿಗೆ ಮೂಲಕ ಕಲಾ ಭವನದ ಉದ್ಘಾಟನೆಗೆ ಕರೆತರಲಾಯಿತು. ಚಂಡೆ, ಮದ್ದಳೆ, ಕೊಂಬು, ಕಹಳೆ ವಾದನದೊಂದಿಗೆ ಪೂರ್ಣಕುಂಭ ಸ್ವಾಗತವನ್ನು ಕೋರಲಾಯಿತು. ಸಾವಿರಾರು ಗ್ರಾಮಸ್ಥರು ನೆರೆದಿದ್ದ ಇಲ್ಲಿ ಹಬ್ಬದ ಕಳೆಯಿತ್ತು.

ಚಿತ್ರಕಲಾ ಪ್ರದರ್ಶನ: ಕಾರಂತರ ಜನ್ಮದಿನಾಚರಣೆಯೊಂದಿಗೆ  ಮೂರು ದಿನ ನಡೆದ ಈ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಕಡೆಗಳಿಂದ ಆಗಮಿಸಿದ್ದ ಚಿತ್ರಕಲಾವಿದರಿಂದ ಚಿತ್ರ ಕಲಾ ಪ್ರದರ್ಶನವನ್ನೂ ಆಯೋಜಿಸಲಾಗಿದ್ದು. ವಿಶೇಷವೆಂದರೆ ಇಲ್ಲಿ ಪಾಲ್ಗೊಂಡಿದ್ದ ಸುಮಾರು 20ಕ್ಕೂ ಹೆಚ್ಚು ಕಲಾವಿದರಿಗೆ ಶಿವರಾಮ ಕಾರಂತರ ಕೃತಿಗಳನ್ನು ಓದಲು ನೀಡಲಾಗಿತ್ತು. ಅದನ್ನು ಆಧರಿಸಿಯೇ ಇಲ್ಲರೂ ಚಿತ್ರಗಳನ್ನು ರಚಿಸಿದ್ದರು. ಚಿತ್ರಕಲಾ ಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.