ADVERTISEMENT

ಕಾರ್ಕಡದ ಕಾಳಿಂಗ ಹೊಳ್ಳ ಕನಸು– ನನಸು

ರಸ್ತೆಗಾಗಿ ನಿರಂತರ ಹೋರಾಟಕ್ಕೆ ಸಂದ ಫಲ: ವಿಧಾನಪರಿಷತ್ ಸದಸ್ಯ ನಿಧಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 6:19 IST
Last Updated 18 ಜೂನ್ 2018, 6:19 IST
ರಸ್ತೆ ನಿರ್ಮಾಣ ಮಾಡಲಾಗಿರುವುದು. (ಬ್ರಹ್ಮಾವರ ಚಿತ್ರ)
ರಸ್ತೆ ನಿರ್ಮಾಣ ಮಾಡಲಾಗಿರುವುದು. (ಬ್ರಹ್ಮಾವರ ಚಿತ್ರ)   

ಸಾಲಿಗ್ರಾಮ (ಬ್ರಹ್ಮಾವರ): ಸಾಲಿ ಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಾರ್ಕಡ ತೆಂಕಹೋಳಿ ನಿವಾಸಿ ಕಾಳಿಂಗ ಹೊಳ್ಳ ತಮ್ಮ ಮನೆ ಸಮೀಪದ ರಸ್ತೆ ಅಭಿವೃದ್ಧಿಗಾಗಿ ಸಾಕಷ್ಟು ಹೋರಾಟ ನಡೆಸಿ ಇದೀಗ ತನ್ನ ಕನಸು ನನಸಾಗಿಸಿಕೊಂಡಿದ್ದಾರೆ.

75 ವರ್ಷದ ಹಿರಿಯ ನಾಗರಿಕ ಹೊಳ್ಳ ತಮ್ಮ ಮನೆ ಮತ್ತು ಸಮೀಪದ ಹತ್ತಾರು ಮನೆಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ರಸ್ತೆ ನಿರ್ಮಿಸಿ ಕೊಡುವಂತೆ ಹಲವಾರು ವರ್ಷಗಳಿಂದ ಪಟ್ಟಣ ಪಂಚಾಯಿತಿಗೆ ಮನವಿ ನೀಡುತ್ತಾ ಬಂದಿದ್ದು, ಪ್ರಯೋಜನವಾಗದಿದ್ದಾಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು. ನಂತರ ಪ್ರಧಾನಿ ಕಾರ್ಯಾಲಯದಿಂದ ಬಂದ ಸೂಚನೆಯಂತೆ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರ ಅನುದಾನದಿಂದ ರಸ್ತೆ ಇದೀಗ ಅಭಿವೃದ್ಧಿಗೊಂಡಿದೆ.

ಈ ರಸ್ತೆ ಅಭಿವೃದ್ಧಿಗೆ 2011 ರಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅನುದಾನ ಬಿಡುಗಡೆ ಮಾಡಿತ್ತು. ಆಗ ಹೊಳ್ಳರು ತನ್ನ ಪಟ್ಟಾ ಸ್ಥಳವನ್ನು ರಸ್ತೆ ನಿರ್ಮಾಣಕ್ಕಾಗಿ ಬಿಟ್ಟುಕೊಟ್ಟಿದ್ದರು. ಆದರೆ ಶೇ75 ಮಾತ್ರ ಕಾಮಗಾರಿ ನಡೆಸಿ ಬಿಟ್ಟು ಬಿಟ್ಟಿದ್ದರು. ಅಪೂರ್ಣಗೊಂಡ ಕಾಮಗಾರಿಯಿಂದ ಕಾಳಿಂಗ ಹೊಳ್ಳರ ಮನೆ ಹಾಗೂ ಹತ್ತಿರದ ಹಲವು ಮನೆಗಳಿಗೆ ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ. ಮಳೆಗಾಲದಲ್ಲಿ ನಡೆದಾಡಲು ಮತ್ತು ಯಾವುದೇ ವಾಹನ ಕೂಡ ಸಂಚರಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಕುರಿತು ಕಾಳಿಂಗ ಹೊಳ್ಳರು 2011 ರಿಂದ ಜಿಲ್ಲಾಧಿಕಾರಿ, ಎ.ಸಿ.ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರು. ಪ್ರಯೋಜನವಾಗದಿದ್ದಾಗ ತಹಶೀಲ್ದಾರ್, ಲೋಕಾಯುಕ್ತ, ಎ.ಸಿ.ಬಿ.ಗೂ ದೂರು ನೀಡಿದರು. ಅನಂತರ ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದರು. ಹೊಳ್ಳರ ಈ ಹೋರಾಟ ಕುರಿತು ಪ್ರಜಾವಾಣಿಯೂ ಸೇರಿದಂತೆ ಹಲವು ಪತ್ರಿಕೆಗಳು ಹಲವುಬಾರಿ ವರದಿ ಮಾಡಿ ಗಮನ ಸೆಳೆದಿದ್ದವು.

ADVERTISEMENT

ಪ್ರಧಾನಿಗೆ ಎರಡು ಬಾರಿ ಮನವಿ: ಪ್ರಧಾನಿ ಅವರಿಗೆ ಮೊದಲ ಬಾರಿ ಮನವಿ ಸಲ್ಲಿಸಿದಾಗ ಪರಿಶೀಲಿಸುವಂತೆ ಜಿಲ್ಲಾಡಳಿತ ಹಾಗೂ ಸ್ಥಳೀಯಾಡಳಿತಕ್ಕೆ ಸೂಚನೆ ಬಂದಿತ್ತು. ಅದರಂತೆ ಸ್ಥಳೀಯಾಡಳಿತ ಪರಿಶೀಲಿಸಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಬೇಸರಗೊಂಡ ಹೊಳ್ಳ ಅವರು ಮತ್ತೆ ಪ್ರಧಾನಿಗೆ ಪತ್ರ ಬರೆದರು. ಆಗ ಸಮಸ್ಯೆ ಗಂಭೀರವಾಗಿ ಪರಿಶೀಲಿಸುವಂತೆ ಮತ್ತೊಮ್ಮೆ ಆದೇಶ ಬಂದು ಕಾಮಗಾರಿ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.