ADVERTISEMENT

ಕಾರ್ಕಳ: ಸಿಡಿಲು-ಮಳೆ ಆರ್ಭಟ, ವ್ಯಾಪಕ ಹಾನಿ-ಆರು ಕಾರ್ಮಿಕರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 5:40 IST
Last Updated 13 ಅಕ್ಟೋಬರ್ 2011, 5:40 IST

ಕಾರ್ಕಳ:ಕಳೆದೆರಡು ದಿನಗಲ್ಲಿ ಸುರಿದ ಸಿಡಿಲಿನಿಂದ ಕೂಡಿದ ಧಾರಾಕಾರ ಮಳೆಗೆ  ತಾಲ್ಲೂಕಿನ 10ಕ್ಕೂ ಅಧಿಕ ಕಡೆ ಮನೆಗಳಿಗೆ ಹಾನಿ ಉಂಟಾಗಿದೆ. ತಾಲ್ಲೂಕಿನ ನಂದಳಿಕೆ ಗ್ರಾಮದ ಕೈರೊಳಿ ಎಂಬಲ್ಲಿ ಮಂಗಳವಾರ ರಾತ್ರಿ ಸಿಡಿಲು ಬಡಿದ ಪರಿಣಾಮ ಮನೆಯೊಳಗಿದ್ದ  ಆರು ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವೆಡೆ ಬತ್ತದ ಬೆಳೆ ಹಾನಿಗೊಳಗಾಗಿದೆ. 

 ತಾಲ್ಲೂಕಿನ ರೆಂಜಾಳ ಗ್ರಾಮದ ಗಿರಿಜಾ ದೇವಾಡಿಗ ಎನ್ನುವವರ ಮನೆಗೆ ಸಿಡಿಲು ಬಡಿದು ವಿದ್ಯುತ್ ವ್ಯವಸ್ಥೆ ಹಾನಿಗೊಂಡಿದೆ. ರೂ 60ಸಾವಿರ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ತಾಲ್ಲೂಕಿನ ಎರ್ಲಪಾಡಿ ಗ್ರಾಮದ ವನಜಾ ಆಚಾರ್ತಿ ಎಂಬವರ ಮನೆಗೆ ಸಿಡಿಲು ಬಡಿದು 5 ಸಾವಿರ ರೂಪಾಯಿ ಹಾನಿಯಾಗಿದೆ.

ತಾಲ್ಲೂಕಿನ ಸಾಣೂರು ಗ್ರಾಮದ ರಾಮದಾಸ ಕಾಮತ್ ಅವರ ಮನೆಗೆ ಸಿಡಿಲು ಬಡಿದು 5 ಸಾವಿರ ರೂಪಾಯಿ ಹಾನಿಯಾಗಿದೆ. ಅದೇ ಗ್ರಾಮದ ಮೊಂತು ಶೆಡ್ತಿ ಅವರ ಬತ್ತದ ಬೆಳೆ ಮಳೆಯಿಂದಾಗಿ ಹಾನಿಗೊಳಗಾಗಿದೆ. ಇದರಿಂದ 10ಸಾವಿರ ರೂಪಾಯಿ ನಷ್ಟ ಸಂಭವಿಸಿದೆ. ರತ್ನರಾಜ ಕಂಬಳಿ ಅವರ ಬತ್ತದ ಗದ್ದೆಗೆ ಹಾನಿಗೊಳಗಾಗಿ 15ಸಾವಿರ ರೂಪಾಯಿ ನಷ್ಟ ಸಂಭವಿಸಿದೆ.

ನಿಟ್ಟೆ ಗ್ರಾಮದ ಭಾಸ್ಕರ ಆಚಾರ್ಯ ಅವರ ಮನೆಯ ಛಾವಣಿ ನಾಶವಾಗಿದ್ದು, 25 ಸಾವಿರಕ್ಕೂ ಅಧಿಕ ಮೌಲ್ಯದ ಸ್ವತ್ತು ಹಾನಿಗೊಳಗಾಗಿದೆ. ಅದೇ ಗ್ರಾಮದ ವಿಟ್ಟು ಮೊಯ್ಲಿ ಅವರ ಮನೆಗೆ ಸಿಡಿಲು ಬಡಿದು 20 ಸಾವಿರ ಹಾನಿಯಾಗಿದೆ. ನರಸಿಂಹ ಮೂರ್ತಿ ಎನ್ನುವವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಸಂಪರ್ಕ ಹಾನಿಯಾಗಿ 20 ಸಾವಿರ ನಷ್ಟ ಸಂಭವಿಸಿದೆ. ಮೊಲಿದ್ದೀನ್ ನೊರೊನ್ಹ ಅವರ ಮನೆಯ ವಿದ್ಯುತ್ ಸಂಪರ್ಕಕ್ಕೆ ನಾಶವಾಗಿ 18 ಸಾವಿರ ಹಾನಿಯಾಗಿದೆ.

ಇರ್ವತ್ತೂರು ಗ್ರಾಮದಲ್ಲಿ ದೇವಕಿ ಶೆಡ್ತಿ ಅವರ ಮನೆಗೆ ಹಾನಿಯಾಗಿ ರೂ 25 ಸಾವಿರ ನಷ್ಟ ಉಂಟಾಗಿದೆ. ಕುಟ್ಟಿ ಶೆಟ್ಟಿ ಅವರ ಮನೆಗೋಡೆ ಹಾನಿಗೊಂಡು 10 ಸಾವಿರ ನಷ್ಟ ಸಂಭವಿಸಿದೆ. 

  ತಾಲ್ಲೂಕಿನ ಕಾಂತಾವರ ಗ್ರಾಮದಲ್ಲಿ ಮಳೆಯಿಂದಾಗಿ ದಿನೇಶ್ ಶೆಟ್ಟಿ ಅವರ ಬತ್ತದ ಬೆಳೆ ನಾಶವಾಗಿ ರೂ.10 ಸಾವಿರ, ಸಂಜೀವ ಎ ಆಚಾರ್ಯ ಅವರ ಬೆಳೆ ನಾಶವಾಗಿ ರೂ.10ಸಾವಿರ ಹಾನಿ, ಕಮಲ ಶೆಡ್ತಿ ಅವರ ಬೆಳೆ ನಾಶವಾಗಿ ರೂ.10 ಸಾವಿರ ಹಾನಿಯುಂಟಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.