ಉಡುಪಿ: ಕಾಪು ಮತ್ತು ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳನ್ನು ಇನ್ನೂ ಪ್ರಕಟಿಸದಿರುವುದು ಕಾರ್ಯಕರ್ತರ ಕುತೂಹಲ ಹೆಚ್ಚಾಗಲು ಕಾರಣವಾಗಿದೆ. ಯಾರಿಗೆ ಟಿಕೆಟ್ ಸಿಗಬಹುದು ಹಾಗೂ ಯಾರನ್ನು ಪಕ್ಷ ಪರಿಗಣಿಸದಿರಬಹುದು ಎಂಬ ಚರ್ಚೆ ನಡೆಯುತ್ತಲೇ ಇದೆ.
ಉಡುಪಿ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಇನ್ನಿಲ್ಲದ ಲೆಕ್ಕಾಚಾರಗಳು ನಡೆಯುತ್ತಿವೆ. ಮಾಜಿ ಶಾಸಕ ಕೆ. ರಘುಪತಿ ಭಟ್ ಅವರಿಗೇ ಟಿಕೆಟ್ ಖಚಿತ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಭಟ್ಟರು ಸಹ ಟಿಕೆಟ್ ಪಡೆಯುವ ಸಂಪೂರ್ಣ ವಿಶ್ವಾಸದಲ್ಲಿ ಇದ್ದಾರೆ. ಈ ಕ್ಷೇತ್ರದ 24 ಮಂಡಲಗಳಲ್ಲಿ 23ರ ಮುಖಂಡರು ಭಟ್ಟರಿಗೇ ಟಿಕೆಟ್ ನೀಡಬೇಕು ಎಂದು ಅಭಿಪ್ರಾಯಕೊಟ್ಟಿರುವುದು ಅವರ ವಿಶ್ವಾಸಕ್ಕೆ ಕಾರಣವಾಗಿದೆ.
ಬಂಟ ಸಮುದಾಯದವರೇ ಆದ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಬಿ.ಎಂ. ಸುಕುಮಾರ ಶೆಟ್ಟಿ ಅವರಿಗೆ ಕ್ರಮವಾಗಿ ಕುಂದಾಪುರ ಹಾಗೂ ಬೈಂದೂರಿನಿಂದ ಟಿಕೆಟ್ ನೀಡಲಾಗಿದೆ. ಕಾಪು ಕ್ಷೇತ್ರದಲ್ಲಿ ಸಹ ಬಂಟ ಸಮುದಾಯವರೇ ಆದ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆದಿದೆ. ಸಮೀಕ್ಷೆಗಳಲ್ಲಿ ಅವರ ಪರ ಒಲವು ವ್ಯಕ್ತವಾದ ಕಾರಣ ಸೂಕ್ತ ಅಭ್ಯರ್ಥಿ ಎಂದು ಪರಿಗಣಿಸಲಾಗಿದೆ. ಆದರೆ ಅಲ್ಲಿಯೂ ಬಂಟರಿಗೆ ನೀಡಿದರೆ ಪ್ರಬಲ ಮೊಗವೀರ ಸಮುದಾಯಕ್ಕೆ ಯಾವ ಕ್ಷೇತ್ರದಿಂದ ಟಿಕೆಟ್ ನೀಡಬೇಕು ಎಂಬ ಪ್ರಶ್ನೆ ಮೂಡಿದೆ.
ಅದೇ ಕಾರಣಕ್ಕೆ ಯಶ್ಪಾಲ್ ಸುವರ್ಣ ಹಾಗೂ ಮಹಿಳಾ ಮೋರ್ಚಾದ ಅಧ್ಯಕ್ಷೆ ನಯನಾ ಗಣೇಶ್ ಅವರ ಹೆಸರು ಉಡುಪಿ ಕ್ಷೇತ್ರಕ್ಕೆ ಕೇಳಿ ಬರುತ್ತಿದೆ. ಇವರಿಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡಿ, ಕಾಪುವಿನಲ್ಲಿ ಗುರ್ಮೆ ಸುರೇಶ್ ಶೆಟ್ಟರನ್ನು ಕಣಕ್ಕಿಳಿಸುವ ಬಗ್ಗೆಯೂ ಚಿಂತನೆ ಇದೆ ಎನ್ನಲಾಗಿದೆ. ಯಶ್ಪಾಲ್ ಹಾಗೂ ಮಾಜಿ ಶಾಸಕ ಲಾಲಾಜಿ ಮೆಂಡನ್ ಅವರು ಕಾಪು ಕ್ಷೇತ್ರದ ಆಕಾಂಕ್ಷಿಗಳಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.