ADVERTISEMENT

ಕುಂದಾಪುರ: ಮಳೆ; ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 10:45 IST
Last Updated 8 ಜೂನ್ 2011, 10:45 IST
ಕುಂದಾಪುರ: ಮಳೆ; ಜನಜೀವನ ಅಸ್ತವ್ಯಸ್ತ
ಕುಂದಾಪುರ: ಮಳೆ; ಜನಜೀವನ ಅಸ್ತವ್ಯಸ್ತ   

ಕುಂದಾಪುರ: ಕಳೆದ ಎರಡು ದಿನಗಳಿಂದ ಕಡಿಮೆಯಾಗಿದ್ದ ಮಳೆ ಮಂಗಳವಾರ ಬೆಳಿಗ್ಗೆಯಿಂದ ಬಿರುಸುಗೊಂಡಿತ್ತು.ಬೆಳಿಗ್ಗೆಯಿಂದ ಎಡೆಬಿಡದೆ ಸುರಿದ ಮಳೆಯಿಂದ ತಾಲ್ಲೂಕಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.

ಗಾಳಿ- ಮಳೆಗೆ ಮರದ ಗೆಲ್ಲು ಧರಶಾಹಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಚತುಷ್ಪಥ ಕಾಮಗಾರಿಯಿಂದಾಗಿ ಕೋಟೇಶ್ವರ, ಕುಂದಾಪುರ ಹಾಗೂ ತೆಕ್ಕಟ್ಟೆ ಪರಿಸರದಲ್ಲಿ ಕೃತಕ ನೆರೆ ಉಂಟಾಗಿದೆ.  ನೀರಿನ ರಭಸದಲ್ಲಿ ಸಾಗಿ ಬರುವ ಕಸ-ಕಡ್ಡಿ, ತ್ಯಾಜ್ಯ ಅಲ್ಲಲ್ಲಿ ನಿಂತು ಸೊಳ್ಳೆ ಉತ್ಪತ್ತಿಯಾಗಿ ರೋಗ ಭೀತಿ ಉಂಟಾಗಿದೆ.

ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳ ಅಕ್ಕ-ಪಕ್ಕದಲ್ಲಿರುವ ಚರಂಡಿ ಇಲ್ಲದೆ ಇರುವುದರಿಂದ ಮಳೆ ನೀರು ರಸ್ತೆ ಮೇಲೆ ನಿಂತಿದೆ. ಇದರಿಂದಾಗಿ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಕೆಸರು ರಾಚುವ ಭೀತಿಯಲ್ಲೇ ಸಾಗಬೇಕಾದ ಪರಿಸ್ಥಿತಿ ಮುಂದಾಗಿದೆ.

ಮಳೆ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಕೋಟೇಶ್ವರ, ಸೇನಾಪುರ, ಹೆಮ್ಮಾಡಿ, ಕುಂದಾಪುರ ಮುಂತಾದ ಕಡೆಗಳಲ್ಲಿ ವಾಹನಗಳು ರಸ್ತೆ ಬದಿ ಹೂತುಹೋಗಿವೆ.  ರಾಷ್ಟ್ರೀಯ ಹೆದ್ದಾರಿ ವಿಸ್ಥರಣೆ  ಕಾಮಗಾರಿಗಾಗಿ ಕಡಿದಿರುವ  ಮರಗಳು ಚರಂಡಿಗೆ ಬಿದ್ದು, ನೀರಿನ ಸರಾಗ ಹರಿವಿಗೆ ತಡೆ ಒಡ್ಡುತ್ತಿವೆ.

ತಾಲ್ಲೂಕಿನ ಕುಂಭಾಸಿಯ ಮಂಜುನಾಥ ಮೊಗವೀರ ಎಂಬವರ ಪುತ್ರ ನಾಗರಾಜ್ ಮನೆಯ ಮೇಲೆ ಮರ ಬಿದ್ದು ಸಾವಿರಾರು ರೂ.ನಷ್ಟವಾಗಿರುವ ಕುರಿತು ತಹಸೀಲ್ದಾರ್ ಕಚೇರಿಗೆ ಮಾಹಿತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.