ಬೆಳ್ತಂಗಡಿ: ಕುತ್ಲೂರು ಗ್ರಾಮದ ಆಲಂಬ ಪರಿಸರದಲ್ಲಿ ಗುರುವಾರ ಸಂಭ್ರಮ - ಸಡಗರ. ಬಂಧು -ಮಿತ್ರರೆಲ್ಲ ಲಾಡು ಹಂಚಿ ಖುಷಿಪಟ್ಟರು. ನಾಲ್ಕು ತಿಂಗಳ ಜೈಲು ವಾಸದ ಬಳಿಕ ಗುರುವಾರ ಮನೆಗೆ ಮರಳಿದ ವಿಠಲ ಮಲೆಕುಡಿಯ ಮತ್ತು ಲಿಂಗಪ್ಪ ಮಲೆಕುಡಿಯ ಹುಟ್ಟೂರಿಗೆ ಆಗಮಿಸಿದಾಗ ಆಪ್ತೇಷ್ಟರು ಖುಷಿಪಟ್ಟರು.
ಈ ಸಂದರ್ಭದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ವಿಠಲ ಮಲೆಕುಡಿಯ `ಇದೇ 23ರಿಂದ ಕೊಣಾಜೆಯ ಮಂಗಳ ಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿ ತರಗತಿ ಆರಂಭವಾಗಲಿವೆ. ಓದು ಮುಂದು ವರಿಸುತ್ತೇನೆ~ ಎಂದು ಹೇಳಿದರು.
ರಾತ್ರಿ - ಹಗಲು ಜೈಲಿನಲ್ಲಿ ತನ್ನನ್ನು ಪ್ರಶ್ನಿಸಿದ ಪೊಲೀಸರಿಗೆ ತಾನು ನಕ್ಸಲರಿಗೆ ಬೆಂಬಲ ನೀಡಿದ ಬಗ್ಗೆ ಯಾವುದೇ ಮಾಹಿತಿ, ಪುರಾವೆ ಸಿಗಲಿಲ್ಲ. ಸಾಕಷ್ಟು ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಹೇಳುವ ಪೊಲೀಸರಿಗೆ ಆಧಿಕೃತವಾಗಿ ದಾಖಲೆ ಪತ್ತೆಯಾಗಿಲ್ಲ ಎಂದು ತಿಳಿಸಿದರು.
ತಂದೆ ಲಿಂಗಪ್ಪ ಯಾನೆ ನಿಂಗಣ್ಣ ಮಲೆಕುಡಿಯರ ಕೈಗೆ ಮತ್ತು ಕಾಲಿಗೆ ನಕ್ಸಲ್ ನಿಗ್ರಹ ದಳದ ಪೊಲೀಸರು ಹೊಡೆದ ಪೆಟ್ಟಿನ ಗಾಯ ಇನ್ನೂ ಮಾಸಿಲ್ಲ ಎಂದು ನೋವು ವ್ಯಕ್ತಪಡಿಸಿದರು. ಈ ಬಗ್ಗೆ ನ್ಯಾಯಾಲ ಯದಲ್ಲಿ ಖಾಸಗಿ ದೂರು ದಾಖಲಿಸಲಾ ಗುವುದು ಎಂದು ಡಿವೈಎಫ್ಐ ಕಾರ್ಯಕರ್ತರೊಬ್ಬರು ತಿಳಿಸಿದರು.
ವಿಠಲನ ತಾಯಿ ಹೊನ್ನಮ್ಮ, ಮಗ ಮತ್ತು ಪತಿಗೆ ಮಾಲೆ ಹಾಕಿ ಖುಷಿಪಟ್ಟರು. ಡಿವೈಎಫ್ಐ ರಾಜ್ಯ ಉಪಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ರಾಜದ್ರೋಹದ ಆರೋಪದಿಂದ ಮುಕ್ತರಾಗಿರುವುದು ಪ್ರಜಾಸತ್ತಾತ್ಮಕ ಹೋರಾಟಕ್ಕೆ ಸಂದ ಜಯವಾಗಿದೆ ಎಂದರು.
ಶೇಖರ್ ಲಾಯಿಲ, ವಸಂತ ನಡ, ದಾಮೋದರ ಭಟ್, ಪ್ರಶಾಂತ ಮತ್ತು ಪುಷ್ಪರಾಜ ಮೊದಲಾದವರು ಉಪಸ್ಥಿತರಿದ್ದರು.
ಇಂದು ಸಂಭ್ರಮೋತ್ಸವ: ಬೆಳ್ತಂಗಡಿಯಲ್ಲಿ ಶುಕ್ರವಾರ ಸಂಭ್ರಮೋತ್ಸವ ಆಚರಣೆ ನಡೆಯಲಿದೆ ಎಂದು ಶೇಖರ್ ಲಾಯಿಲ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.