ADVERTISEMENT

ಕೃತಿಗಳಿಂದ ಹೊಸ ಓದುಗರ ಸೃಷ್ಟಿ: ಅರ್ತಿಕಜೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 6:34 IST
Last Updated 9 ಏಪ್ರಿಲ್ 2013, 6:34 IST

ಪುತ್ತೂರು:  `ಮಾನವೀಯ ಸಂಬಂಧವುಳ್ಳ ಸಾಹಿತ್ಯ ಕೃತಿಗಳು ಹೊಸ ಓದುಗರನ್ನು ಸೃಷ್ಟಿಸಬಲ್ಲುದು' ಎಂದು ಹಿರಿಯ ಸಾಹಿತಿ ಪ್ರೊ.ವಿ.ಬಿ.ಅರ್ತಿಕಜೆ ಹೇಳಿದರು.

ಪುತ್ತೂರಿನ ಅನುರಾಗ ವಠಾರದಲ್ಲಿ ಭಾನುವಾರ ಸಂಜೆ ನಡೆದ ಕೆನರಾ ಬ್ಯಾಂಕಿನ ವಿಶ್ರಾಂತ ಪ್ರಬಂಧಕ ನಲ್ಕ ಗೋಪಾಲಕೃಷ್ಣ ಆಚಾರ್ ಅವರು ಬರೆದ `ನನ್ನ ಯಾತ್ರೆ ಮತ್ತು ಪ್ರವಾಸಗಳು' ಎಂಬ ಪುಸ್ತಕದ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗೋಪಾಲಕೃಷ್ಣ ಆಚಾರ್ ಅವರು ಮಾನವೀಯ ಸಂಬಂಧಗಳನ್ನು ಪ್ರವಾಸ ಕಥನದಲ್ಲಿ ಎತ್ತಿ ಹೇಳಿರುವುದು ತುಂಬಾ ಪ್ರಸ್ತುತ ಎಂದು ಅವರು ಅಭಿಪ್ರಾಯಪಟ್ಟರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವರದರಾಜ ಚಂದ್ರಗಿರಿ ಅವರು ನಲ್ಕ ಗೋಪಾಲಕೃಷ್ಣ ಆಚಾರ್ ಅವರು ಬರೆದ `ನನ್ನ ಯಾತ್ರೆ ಮತ್ತು ಪ್ರವಾಸಗಳು' ಎಂಬ ಪುಸ್ತಕ ಅನಾವರಣಗೊಳಿಸಿದರು.

ಸಾಹಿತ್ಯ ಪ್ರಕಾರದ ಚೌಕಟ್ಟುಗಳನ್ನು ಮೀರಿ ಆತ್ಮೀಯ ಧಾಟಿಯಲ್ಲಿ ರಚಿಸಿದ ವಿಭಿನ್ನ ಶೈಲಿಯ ಬರವಣಿಗೆ ಗೋಪಾಲಕೃಷ್ಣ ಆಚಾರ್ಯ ಅವರದ್ದಾಗಿದೆ. ಅವರ ಪ್ರವಾಸಾನುಭವಗಳ ಈ ಟಿಪ್ಪಣಿಗಳಲ್ಲಿ ಭವ್ಯ ಭಾರತದ ಚಿತ್ರ ಅಡಗಿದೆ ಎಂದರು.

ನಿವೃತ್ತ ಉಪನ್ಯಾಸಕ ಪ್ರೊ.ಹರಿನಾರಾಯಣ ಮಾಡಾವು ಅವರು ಕೃತಿ ಪರಿಚಯ ಮಾಡಿದರು. ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ.ಎ.ವಿ.ನಾರಾಯಣ , ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಗುರು ಐತ್ತಪ್ಪ ನಾಯ್ಕ ಉಪಸ್ಥಿತರಿದ್ದರು.

ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್,  ಸುಬ್ರಹ್ಮಣ್ಯ ಕೊಳತ್ತಾಯ, ಯು.ಕೆ. ನಾಕ್, ಶಿವಶಂಕರ್ ಪುತ್ತೂರು, ರಮೇಶ್ ಬಾಬು, ಜಿತೇಂದ್ರ, ಉದಯ ಆಚಾರ್ ,ವಿದ್ಯಾ ಗೋಪಾಲಕೃಷ್ಣ ಆಚಾರ್ಯ ನಲ್ಕ,  ಪ್ರಭಾ ಹರೀಶ್ ಆಚಾರ್ಯ,  ಪುತ್ತೂರಿನ ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು , ಡಿಂಡಿಮ ಪ್ರತಿಭೆಗಳಾದ ನಿರೀಕ್ಷಾ ಜೆ.ಕೆ , ವೈಷ್ಣವಿ ನಾಯಕ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.