ADVERTISEMENT

ಕೈಗಾರಿಕಾ ಮುಕ್ತವಲಯವಾಗಿ ಬಡಗಬೆಟ್ಟು: ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 8:37 IST
Last Updated 5 ಸೆಪ್ಟೆಂಬರ್ 2013, 8:37 IST

ಉಡುಪಿ: ಬಡಗಬೆಟ್ಟು ಗ್ರಾಮವನ್ನು ಕೈಗಾರಿಕಾ ಮುಕ್ತ ವಲಯ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಬಡಗುಬೆಟ್ಟು ಕೈಗಾರಿಕಾ ವಲಯ ವಿರೋಧಿ ಹೋರಾಟ ಸಮಿತಿ ಇತ್ತೀಚೆಗೆ ಏರ್ಪಡಿಸಿದ್ದ ಜಾಗೃತಿ ಮತ್ತು ಸಹಿ ಸಂಗ್ರಹ ಜಾಥಾದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.

`ಭೂಮಿಯನ್ನು ಕಬಳಿಸುವುದರ ಹಿಂದೆ ಭೂ ಮಾಫಿಯಾದ ಕೈವಾಡವಿದೆ. ಜನಪ್ರತಿನಿಧಿಗಳು, ಅಧಿಕಾರಿಗಳ ಭರವಸೆ ಗಳನ್ನು ನಂಬಿ ಮೋಸಹೋಗಬೇಡಿ. ಈ ಹಿಂದೆ ಪಡುಬಿದ್ರಿಯ ಯುಪಿಸಿಎಲ್ ಪ್ರಕರಣದಲ್ಲಿ ಜನಪ್ರತಿನಿಧಿಗಳ ಭರವಸೆ ಗಳಿಗೆ ಮರುಳಾಗಿ ಸಾವಿರಾರು ಕುಟುಂಬಗಳು ಭೂಮಿ ಕಳೆದುಕೊಂಡಿವೆ. ಈಗಾಗಲೇ ಹೋರಾಟಕ್ಕೆ ತಡೆ ಯೊಡ್ಡುವ ವದಂತಿಗಳು ಹರಡಿದ್ದು, ಕಾನೂನು ಹೋರಾಟ ಮುಂದುವರೆಸಿ' ಎಂದು ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ತಿಳಿಸಿದರು.

`ಕೈಗಾರಿಕಾ ವಲಯ ಘೋಷಣೆಯ ವಿರುದ್ದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಸರಿಯಾದ ಪ್ರತಿಕ್ರಿಯೆ ಹಾಗೂ ಭರವಸೆ ಬಂದಿಲ್ಲ. ಆದ್ದರಿಂದ ಮುಂದಿನ ಹೋರಾಟವನ್ನು ಕಾನೂನು ರೀತಿಯಲ್ಲಿ ಮಾಡುವ ಅನಿವಾರ್ಯತೆ ಇದೆ' ಎಂದು ಹೋರಾಟ ಸಮಿತಿಯ ಅಧ್ಯಕ್ಷ ಪ್ರಭಾಕರ ಶೆಟ್ಟಿ ಹೇಳಿದರು.

ಜಿಲ್ಲಾಡಳಿತ ಬಡಗುಬೆಟ್ಟು ಗ್ರಾಮದಲ್ಲಿ ಗುರುತಿಸಿರುವ 169 ಎಕರೆ ಕೈಗಾರಿಕಾ ವಲಯ ವ್ಯಾಪ್ತಿಯ 300ಕ್ಕೂ ಅಧಿಕ ಕುಟುಂಬಗಳ ಸದಸ್ಯರು ಆಂದೋಲನದಲ್ಲಿ ಭಾಗವಹಿಸಿದ್ದರು.

ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಶ್ರೀನಿವಾಸ ಉಪಾಧ್ಯಾಯ, ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಕಾಮತ್, ತಾಲ್ಲೂಕು ಪಂಚಾಯಿತಿ ಸದಸ್ಯ ಸತ್ಯಾನಂದ ನಾಯಕ್, ಸಮಿತಿಯ ಪದಾಧಿಕಾರಿಗಳಾದ ಬಲರಾಮ ಭಟ್, ವಸಂತ ಕುಮಾರ್, ಸತೀಶ್ ನಾಯಕ್, ಕೃಷ್ಣಾನಂದ ನಾಯಕ್, ಶ್ಯಾಮರಾಯ ಆಚಾರ್ಯ, ಭವಾನಿ ಶೆಟ್ಟಿ, ಪ್ರಭಾಕರ ಶೆಟ್ಟಿ ದೊಡ್ಡಮನೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.