ADVERTISEMENT

ಕೋಟ- ಹೊನ್ನಾರಿ ಫ್ರೆಂಡ್ಸ್ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 9:24 IST
Last Updated 5 ಏಪ್ರಿಲ್ 2013, 9:24 IST

ಕುಂದಾಪುರ: ಇಲ್ಲಿಗೆ ಸಮೀಪದ ಕೋಟ ಗಿಳಿಯಾರಿನ ಹೊನ್ನಾರಿ ಫ್ರೆಂಡ್ಸ್ ದ್ವಿತೀಯ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆದ  `ಚರಣ-2013' ಕಾರ್ಯಕ್ರಮ ಮಂಗಳವಾರ ಸಂಜೆ ಹೊನ್ನಾರಿಯ ಬೊಬ್ಬರ್ಯ ಹಾಗೂ ಪರಿವಾರ ದೈವಸ್ಥಾನ ವಠಾರದಲ್ಲಿ ಜರುಗಿತು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ  ನೀಲಾವರ ಸುರೇಂದ್ರ ಅಡಿಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ನೇಹಿತನ ಚಿರ ನೆನಪಿಗೆ ಗ್ರಾಮೀಣ ಪ್ರದೇಶದಲ್ಲಿ ದೇಶಭಕ್ತಿ ಪುಟಿದೇಳಿಸುವ ಸಲುವಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ.

ಮೊದಲು ಮನೆಗಳಲ್ಲಿ ಕೂಡುಕುಟುಂಬ ಕಲ್ಪನೆ ಇತ್ತು. ಎಷ್ಟೇ ಸಂಕಷ್ಟ ಎದುರಾದರೂ ಸಹಬಾಳ್ವೆ ಮೂಲಕ ಪರಿಹರಿಸಿಕೊಳ್ಳುವ ಶಕ್ತಿ ಇತ್ತು. ಇಂದಿನ ಯುವ ಜನಾಂಗದಲ್ಲಿ ಅಂತಹ ಶಕ್ತಿ ಕಡಿಮೆಯಾಗುತ್ತಿದೆ. ಸಂಕುಚಿತ ಭಾವನೆ ಜಾಸ್ತಿಯಾಗಿದ್ದು, ವಿಶಾಲತೆಯ ಕಲ್ಪನೆಯಿಲ್ಲದೆ ವಿಶ್ವ ಮಾನ್ಯವಾದ ನಮ್ಮ ಸಂಸ್ಕ್ರತಿ ನಶಿಸುತ್ತಿದೆಯೇ ಎನ್ನುವ ಅನುಮಾನ ಕಾಡುವಂತಾಗಿದೆ ಎಂದರು.

ಮೂಡುಗಿಳಿಯಾರು ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಉದಯ ಕುಮಾರ್ ಎಂ. ಮಾತನಾಡಿ, ಹುಟ್ಟು ಸಾವುಗಳ ನಡುವಿನ ಜೀವನದಲ್ಲಿ ಮಾಡುವ ಉತ್ತಮ ಕೆಲಸಗಳು ಚಿರಂತನವಾಗಿರುತ್ತದೆ. ಸಂಘ ಸಂಸ್ಥೆಗಳಿಂದ ರಾಜ್ಯ `ದೇಶದ ಬೆಳವಣಿಗೆ ಸಾಧ್ಯ. ನಮ್ಮ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದ ಚರಣನ ಸ್ಮರಣೆಗಾಗಿ ಮಾಡುತ್ತಿರುವ ಈ ಕಾರ್ಯಕ್ರಮ ನಿಜಕ್ಕೂ ಅಭಿನಂದನೀಯ ಎಂದರು.

ಹೊನ್ನಾರಿಯ ಬೊಬ್ಬರ್ಯ ದೇವಸ್ಥಾನದ ಮೊಕ್ತೇಸರ ರಾಜಶೇಖರ್ ಹೇರ್ಳೆ ಅಧ್ಯಕ್ಷತೆ ವಹಿಸಿದ್ದರು. ಎಂಜಿನಿಯರ್ ಉದಯ ಶೆಟ್ಟಿ ಕುಂದಾಪುರ ಶುಭಾಶಂಸನೆಗೈದರು. ಕೊಗ್ಗ ಆಚಾರ್ಯ, ಮಣೂರು ಪಡುಕೆರೆ ಸರ್ಕಾರಿ ಪ್ರೌಢಶಾಲೆಯ ಅಧ್ಯಾಪಕ ಶ್ರೀಧರ ಶಾಸ್ತ್ರಿ, ರಾಷ್ಟ್ರದೇವೋ ಭವ ಕಾರ್ಯಕ್ರಮ ನಿರ್ದೇಶಕ ಚಂದ್ರಶೇಖರ ಕೆ.ಶೆಟ್ಟಿ,  ಹೊನ್ನಾರಿ ಫ್ರೆಂಡ್ಸ್ ಅಧ್ಯಕ್ಷ ಜಿ. ಪ್ರಭಾಕರ ಶೆಟ್ಟಿ, ಕಾರ್ಯದರ್ಶಿ ಶಿವರಾಮ ಮರಕಾಲ ಇದ್ದರು.

ಶಾಲಿನಿ ಹಾಗೂ ರಂಜಿತಾ ಪ್ರಾರ್ಥಿಸಿದರು, ಪ್ರಶಾಂತ ಶೆಟ್ಟಿ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಮಂಗಳೂರಿನ ಸನಾತನ ನಾಟ್ಯಾಲಯದ ಶಾರದಾಮಣಿ ಶೇಖರ, ಶ್ರೀಲತಾ ನಾಗರಾಜ್ ಶಿಷ್ಯವೃಂದದವರಿಂದ `ರಾಷ್ಟ್ರದೇವೋ ಭವ' ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.