ADVERTISEMENT

ಜನರ ಭಾವನೆಗಳ ಜತೆ ಚೆಲ್ಲಾಟ ಸಲ್ಲದು: ರೈ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 10:24 IST
Last Updated 7 ಅಕ್ಟೋಬರ್ 2017, 10:24 IST
ಕಾರ್ಕಳ ಕುದುರೆಮುಖ ವನ್ಯಜೀವಿ ವಿಭಾಗದ ವತಿಯಿಂದ ಗುರುವಾರ ಆಯೋಜಿಸಿದ್ದ 63ನೇ ವನ್ಯಜೀವಿ ಸಪ್ತಾಹವನ್ನು ಸಚಿವ ರಮಾನಾಥ ರೈ ಉದ್ಘಾಟಿಸಿದರು.
ಕಾರ್ಕಳ ಕುದುರೆಮುಖ ವನ್ಯಜೀವಿ ವಿಭಾಗದ ವತಿಯಿಂದ ಗುರುವಾರ ಆಯೋಜಿಸಿದ್ದ 63ನೇ ವನ್ಯಜೀವಿ ಸಪ್ತಾಹವನ್ನು ಸಚಿವ ರಮಾನಾಥ ರೈ ಉದ್ಘಾಟಿಸಿದರು.   

ಕಾರ್ಕಳ: ಜನರ ಭಾವನೆಗಳ ಜೊತೆ ಚೆಲ್ಲಾಟವಾಡುವುದನ್ನು ರಾಜ್ಯ ಸರ್ಕಾರ ವಿರೋಧಿಸುತ್ತದೆ ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದರು. ನಗರದ ಸಾಲ್ಮರದಲ್ಲಿರುವ ಗ್ಯಾಲಕ್ಸಿ ಸಭಾಭವನದಲ್ಲಿ ಕುದುರೆಮುಖ ವನ್ಯ ಜೀವಿ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ 63ನೇ ವನ್ಯಜೀವಿ ಸಪ್ತಾಹವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಹುಲಿ ಯೋಜನೆ ಮತ್ತು ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ವಿರೋಧವಿದೆ.

ಈ ನಡುವೆಯೂ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದಲ್ಲಿ ತೀವ್ರ ಹೋರಾಟ ಮಾಡಲಿದ್ದೇವೆ. ಡೀಮ್ಡ್ ಅರಣ್ಯ ಸಮಸ್ಯೆಯ ಕುರಿತು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು ಇನ್ನಷ್ಟೇ ಜಾರಿಗೆ ಬರಬೇಕಾಗಿದೆ ಎಂದರು.

ಅರಣ್ಯ ಸಂರಕ್ಷಣೆಯ ಸಂದರ್ಭದಲ್ಲಿ ವಿವಿಧ ಅವಘಡಗಳಿಂದ ಸುಮಾರು 43 ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಅವರ ಮಕ್ಕಳಿಗೆ ಉಚಿತ ಶಿಕ್ಷಣ, ವನ್ಯಜೀವಿಗಳಿಂದ ವಿಕಲಚೇತನರಾದವರಿಗೆ ನೀಡುವ ಪರಿಹಾರ ಮೊತ್ತವನ್ನು ₹ 50 ಸಾವಿರದಿಂದ ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಭಾಗಶಃ ಗಾಯಗೊಂಡವರಿಗೆ ನೀಡಲಾಗುವ ಪರಿಹಾರ ಮೊತ್ತವನ್ನು ₹2.5 ಲಕ್ಷಕ್ಕೆ ಏರಿಸಲಾಗಿದೆ.

ADVERTISEMENT

ಮುಂದೆ ಪೊಲೀಸ್ ಇಲಾಖೆಯಂತೆ ಅರಣ್ಯ ಇಲಾಖೆಯಲ್ಲೂ ಸಾಧನೆ ಮೆರೆದ ಸಿಬ್ಬಂದಿಗೆ ಪದಕ ಹಾಗೂ ವರ್ಗಾವಣೆಯ ವೇಳೆ ಕೌನ್ಸೆಲಿಂಗ್‌ ನಡೆಸುವ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂಜಯ ಬಿಜೂರು ಮಾತನಾಡಿ, ನಾಡು ಸಮೃದ್ಧವಾಗಲು ಕಾಡು ಸುಸ್ಥಿತಿ ಯಲ್ಲಿರಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಾಲಿನಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವನ್ಯಜೀವಿ ಸಪ್ತಾಹದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿ ಸಲಾಯಿತು. ಸಾಧನೆ ಮಾಡಿದ ಅರಣ್ಯ ಸಿಬ್ಬಂದಿಯನ್ನು ಅಭಿನಂದಿಸಲಾಯಿತು.

ಅನಿತಾ ಅಂಚನ್, ಪ್ರಕಾಶ್ ಎಸ್.ನೆಟಾಲ್ಕರ್, ಡಾ.ಕರಿಕಲನ್, ಕಮಲ ಕರಿಕಲನ್, ಪಿಯೂಸ್ ರೊಡ್ರಿಗಸ್, ಪ್ರಭಾಕರನ್, ಆರ್.ಜಿ.ಭಟ್, ಎಂ. ರವಿರಾಜ್ ನಾರಾಯಣ್, ಹರ್ಷಿಣಿ ಕೆ, ಭಗವಾನ್ ದಾಸ್ ಉಪಸ್ಥಿತರಿದ್ದರು. ಗಣೇಶ್ ಭಟ್ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ನಿರೂಪಿಸಿದರು. ಭಾಸ್ಕರ್ ಬಿ.ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.