ADVERTISEMENT

ದನ ಕದಿಯಲೆಂದು ಬಂದು ಗೂಸಾ ತಿಂದ!

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 6:20 IST
Last Updated 18 ಏಪ್ರಿಲ್ 2012, 6:20 IST

ಕುಂದಾಪುರ: ಕೊಟ್ಟಿಗೆಯಲ್ಲಿ ಕಟ್ಟಿದ್ದ ದನಗಳನ್ನು ಕದಿಯಲೆಂದು ಬಂದಿದ್ದ ದನಗಳ್ಳರು ದನಗಳನ್ನು ವಾಹನದಲ್ಲಿ ತುಂಬಿಸುತ್ತಿದ್ದಾಗ ಮಾಲಿಕರು ಬಂದರೆಂದು ಪರಾರಿಯಾಗುವ ಪ್ರಯತ್ನದಲ್ಲಿ ವಾಹನದಿಂದ ಜಾರಿ ಬಿದ್ದು ಸ್ಥಳೀಯರಿಂದ ಧರ್ಮದೇಟು ತಿಂದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.

ಬಡಾ ಉಚ್ಚಿಲದ ಮಹಮ್ಮದ್ ಅಜರುದ್ದೀನ್(20) ಏಟು ತಿಂದವರು. ವಾಹನವನ್ನು ಮುಂದಕ್ಕೆ ಚಲಾಯಿಸಿದ ಕಾರಣದಿಂದ ಅಜರುದ್ದೀನ್ ಕೆಳಗೆ ಬಿದ್ದು ಧರ್ಮದೇಟು ತಿಂದು ಆಸ್ಪತ್ರೆ ಸೇರಿದ್ದಾನೆ.

ಘಟನೆಯ ವಿವರ
ಮಹಮ್ಮದ್ ಅಜರುದ್ದೀನ್(20), ಕಾಪುವಿನ ರಿಜ್ವಾನ್, ಮಂಗಳೂರಿನ ಸಿದ್ದಿಕ್, ಬೈಕಂಪಾಡಿಯ ಜಬ್ಬರ್ ಹಾಗೂ ಪಡುಬಿದ್ರಿ ಸಮೀಪದ ಪಲಿಮಾರಿನ ಇನ್ನೊಬ್ಬ ಸ್ನೇಹಿತನನ್ನು ಕೂಡಿಕೊಂಡು ಸ್ಕಾರ್ಪಿಯೋ ವಾಹನದಲ್ಲಿ ಕುಂದಾಪುರಕ್ಕೆ ದನ ಕಳವು ಮಾಡಲೆಂದು ಮಂಗಳವಾರ ಮಧ್ಯರಾತ್ರಿ ವೇಳೆಯಲ್ಲಿ ಹೊಂಚು ಹಾಕಿ ಬಂದಿದ್ದರು.

ಮಂಗಳವಾರ ಮುಂಜಾನೆ 3 ಗಂಟೆಯ ವೇಳೆಯಲ್ಲಿ ಅದಾಗಲೆ ಕಳವು ಮಾಡಿದ್ದ ಎರಡು ದನಗಳನ್ನು ವಾಹನದಲ್ಲಿ ತುಂಬಿಕೊಂಡಿದ್ದ ಕಳ್ಳರು ಕುಂದಾಪುರ ಸಮೀಪದ ವಡೇರಹೋಬಳಿ ಗ್ರಾಮದ ಬಸ್ರೂರು ಕ್ರಾಸಿನ ದೋಣಿ ಮನೆ ಚಂದ್ರ ಪೂಜಾರಿ ಹಾಗೂ ವಿಜೇಂದ್ರ ಪೂಜಾರಿ ಅವರ ಮನೆಯಲ್ಲಿ ಕದ್ದಿರುವ ದನಗಳನ್ನು ವಾಹನಕ್ಕೆ ತುಂಬಿಸಿಕೊಳ್ಳುತ್ತಿದ್ದ ವೇಳೆ ಅಕ್ಕಪಕ್ಕದ ಜನರು ಸೇರಿಕೊಂಡರು. 

ಏಕಾಏಕಿ ವಾಹನದ ಸುತ್ತ ಜನ ಜಮಾಯಿಸಿದ್ದರಿಂದ ಕಂಗಾಲಾದ ಕಳ್ಳರು ಪರಾರಿಯಾಗುವ ಆತುರದಲ್ಲಿ ತಂಡದಲ್ಲಿದ್ದ ಮಹಮ್ಮದ್ ಅಜರುದ್ದೀನ್ ಕೆಳಕ್ಕೆ ಬಿದ್ದಿದ್ದಾನೆ. ಜೊತೆಯಲ್ಲಿ ಬಂದಿದ್ದ ಸ್ನೇಹಿತ ಕೆಳಕ್ಕೆ ಬಿದ್ದರೂ ಆತನನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡದ ಕಳ್ಳರು ಅಲ್ಲಿಂದ ಪರಾರಿಯಾದರು.

 ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.