ಉಡುಪಿ: ರಾಜಕೀಯವಾಗಿ ಅತಂತ್ರರಾಗಿರುವ ಧನಂಜಯ್ ಕುಮಾರ್ ಹತಾಶೆಯ ಹೇಳಿಕೆ ನೀಡಿದ್ದಾರೆ ಎಂದು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ತಿರುಗೇಟು ನೀಡಿದ್ದಾರೆ.
ಶೋಭಾ ಕರಂದ್ಲಾಜೆ ಅವರನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರೇ ಸೋಲಿಸಲಿದ್ದಾರೆ ಎಂದು ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಧನಂಜಯ್ ಕುಮಾರ್ ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುನಿಲ್ ಕುಮಾರ್, ನಮ್ಮದೇ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ನಾನು ಒಳಸಂಚು ಮಾಡುತ್ತಿದ್ದೇನೆ ಎಂದು ನೀಡಿರುವ ಹೇಳಿಕೆ ಅರ್ಥಹೀನವಾದದ್ದು. ಶೋಭಾ ಅವರನ್ನು ಗೆಲ್ಲಿಸುವ ಜವಾಬ್ದಾರಿ ನನ್ನ ಮೇಲಿದೆ ಮತ್ತು ಗೆಲ್ಲಿಸುವ ವಿಶ್ವಾಸವೂ ಇದೆ. ಅವರಿಗೆ ತಾಕತ್ತಿದ್ದರೆ ಉಡುಪಿ ಜಿಲ್ಲೆಯಲ್ಲಿ ಒಂದಂಕಿಗಿಂತ ಹೆಚ್ಚು ಮತ ಪಡೆದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ.
ಧನಂಜಯ್ ಅವರು ರಾಜ್ಯದ ರಾಜಕೀಯದಲ್ಲಿ ನಗಣ್ಯರಾಗಿದ್ದಾರೆ. ಅವರು ಏನೆಂದು ಅರ್ಥ ಮಾಡಿಕೊಂಡು ಮುಂದುವರೆಯುವುದು ಒಳಿತು. ಗೆದ್ದಲು ಕಟ್ಟಿದ ಹುತ್ತದಲ್ಲಿ ಹಾವು ಸೇರಿಕೊಳ್ಳುವಂತೆ ಕಾರ್ಯಕರ್ತರು ಶ್ರಮದಿಂದ ಕಟ್ಟಿದ ಪಕ್ಷದಲ್ಲಿ ಸೇರಿಕೊಂಡು ಫಲವನ್ನು ಉಂಡಿದ್ದಾರೆ. ಅವರ ಜೊತೆ ಹಗಲಿರುಳು ಪಕ್ಷಕ್ಕೆ ದುಡಿದವರು ಇನ್ನೂ ಕಾರ್ಯಕರ್ತರಾಗಿಯೇ ಉಳಿದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ ದೇಶದಲ್ಲಿ ಪಕ್ಷ ಬಹುಮತ ಪಡೆದ ಅಧಿಕಾರಕ್ಕೇರಲಿದೆ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.