ADVERTISEMENT

ನಕಲಿ ಸಹಿ, ಮೊಹರು ಬಳಕೆಗೆ ಆಕ್ಷೇಪ

ಕುಂದಾಪುರ ಪುರಸಭೆ ಸಾಮಾನ್ಯ ಸಭೆ-; ಅಧಿಕಾರಿ ವಿರುದ್ಧ ಗರಂ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 10:44 IST
Last Updated 1 ಜೂನ್ 2018, 10:44 IST

ಕುಂದಾಪುರ: ಮುಖ್ಯಾಧಿಕಾರಿಯ ಗಮನಕ್ಕೆ ಬಾರದೆ ಸಹಿ ಹಾಗೂ ಮೊಹರು ಬಳಕೆಗೆ ಆಕ್ಷೇಪ, ಪುರಸಭೆಗೆ ಕಾನೂನು ಮಾರ್ಗದರ್ಶನ ನೀಡಲು ವಕೀಲರ ಲಭ್ಯತೆ ಇದ್ದರೂ ಸಾವಿರಾರು ರೂಪಾಯಿ ವೆಚ್ಚದಲ್ಲಿ ಕಾನೂನು ಪುಸ್ತಕ ಖರೀದಿಸಿದ ಕುರಿತು ಅಸಮಾಧಾನಕ್ಕೆ ಪುರಸಭೆಯ ಸಾಮಾನ್ಯ ಸಭೆ ಸಾಕ್ಷಿಯಾಯಿತು.

ಗುರುವಾರ ಇಲ್ಲಿನ ಡಾ.ವಿ.ಎಸ್‌.ಆಚಾರ್ಯ ಸಭಾಭವನದಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಹಲ ವಾರು ವಿಚಾರಗಳು ಚರ್ಚೆಗೆ ಬಂದವು.

ಪುರಸಭಾ ವ್ಯಾಪ್ತಿಯಲ್ಲಿ ಸಾಮಾನ್ಯ ಜನರು ಮನೆ ಕಟ್ಟಲು ಪರವಾನಗಿ ಪಡೆಯಲು ಹರಸಾಹಸ ಪಡಬೇಕು, ಆದರೆ, ಶ್ರೀಮಂತರಿಗೆ ಕಟ್ಟಡ ಕಟ್ಟಲು ಪುರಸಭೆಯ ಮುಖ್ಯಾಧಿಕಾರಿಯ ಗಮನಕ್ಕೆ ಬಾರದೆ ಅವರ ಸಹಿ ಹಾಗೂ ಮೋಹರು ಬಳಸಿ ಪರವಾನಗಿ ನೀಡಲಾ ಗುತ್ತಿದೆ. ಪುರಸಭೆ ಮುಖ್ಯಾಧಿಕಾರಿ ಪರ ವಾನಗಿ ಕೊಟ್ಟಿಲ್ಲ ಎಂದಾದರೆ ಇದನ್ನು ನಕಲು ಮಾಡಿದ್ದು ಯಾರು ಎಂದು ಹಿರಿಯ ಸದಸ್ಯ ಪಿ.ಗುಣರತ್ನ ಪ್ರಶ್ನಿಸಿದರು.

ADVERTISEMENT

‘ಬಡವರಿಗೆ ಒಂದು, ಉಳ್ಳವರಿಗೆ ಒಂದು ಎನ್ನುವ ನ್ಯಾಯಾ ಏಕೆ? ಸಾಮಾನ್ಯ ಸಭೆಯ ಗಮನಕ್ಕೂ ತಾರದೆ ನೀವೇ ತೀರ್ಮಾನ ಕೈಗೊಳ್ಳುವುದಾದರೆ ಈ ಸಭೆ ಯಾವ ಪುರುಷಾರ್ಥಕ್ಕೆ’ ಎಂದು ಖಾರವಾಗಿ ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ಕೆ.ಮೋಹನ್‌ದಾಸ್‌ ಶೆಣೈ ಹಾಗೂ ಸತೀಶ್‌ ಶೆಟ್ಟಿ. ಅಧಿಕಾರಿಗಳ ಹೆಸರಿನಲ್ಲಿ ನಕಲಿ ಪರವಾನಗಿ ನೀಡಿರುವುದು ಅತ್ಯಂತ ಗಂಭೀರ ಸಂಗತಿ ಎಂದರು. ಇದಕ್ಕೆ ಸ್ಪಂದಿಸಿದ ಮುಖ್ಯಾಧಿಕಾರಿ ವಾಣಿ ಶೆಟ್ಟಿ, ‘ಈ ರೀತಿ ಪರವಾನಗಿ ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ, ಈ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಪುರಸಭೆಗೆ ಅಗತ್ಯ ಸಂದರ್ಭದಲ್ಲಿ ಕಾನೂನು ಮಾಹಿತಿ ಮಾಡಲು ವಕೀ ಲರ ಲಭ್ಯತೆ ಇರುವಾಗ, ಸದಸ್ಯರ ವಿರೋಧವಿದ್ದರೂ, ಸರ್ವಾನುಮತದ ತೀರ್ಮಾನ ಎಂದು ನಿರ್ಣಯ ಪುಸ್ತಕ ದಲ್ಲಿ ದಾಖಲಿಸಿ ಟೆಂಡರ್‌ ಕರೆಯದೆ ₹95 ಸಾವಿರ ಮೌಲ್ಯದ ಕಾನೂನು ಪುಸ್ತಕ ಖರೀದಿ ಮಾಡುವ ಅಗತ್ಯ ಏನಿತ್ತು’ ಎಂದು ಅಸಮಧಾನ ವ್ಯಕ್ತಪ ಡಿಸಿದ ಪುಷ್ಪಾ ಶೇಟ್‌, ‘ಖರೀದಿ ಮಾಡಿರುವ ಪುಸ್ತಕ ಎಲ್ಲಿದೆ ಅದನ್ನು ಸಭೆಗೆ ತನ್ನಿ’ ಎಂದರು.  ಇದನ್ನು ಬೆಂಬಲಿಸಿ ಮಾತನಾಡಿದ ಚಂದ್ರಶೇಖರ ಖಾರ್ವಿ ಹಾಗೂ ಶ್ರೀಧರ ಶೇರುಗಾರ, ಪುರಸಭೆಯಲ್ಲಿ ಸೂಕ್ತ ಗ್ರಂಥಾಲಯದ ವ್ಯವಸ್ಥೆ ಇಲ್ಲದೆ ಇರುವಾಗ ಇಷ್ಟೊಂದು ಮೊತ್ತದ ಪುಸ್ತಕ ಖರೀದಿಯ ಅಗತ್ಯವಾ ದರೂ ಏಕೆ ಎಂದರು. ಸದಸ್ಯರ ಆಗ್ರಹಕ್ಕೆ ಮಣಿದ ಅಧಿಕಾರಿಗಳು ಖರೀದಿ ಮಾಡ ಲಾಗಿರುವ ಪುಸ್ತಕಗಳನ್ನು ಸಭೆಯಲ್ಲಿ ಪ್ರದರ್ಶಿಸಿದರು.

ಒಳಚರಂಡಿ: ನಗರದಲ್ಲಿ ನಡೆ ಯುತ್ತಿರುವ ಒಳಚರಂಡಿಯ ಕಾಮಗಾರಿ ಗಳಿಂದಾಗಿ ರಸ್ತೆಗಳು ಹಾಳಾಗುತ್ತಿದೆ. ಪೈಪ್‌ ಲೈನ್‌ ಅಳವಡಿಕೆಗಾಗಿ ಭಾಗ ಮಾಡಿರುವ ರಸ್ತೆಗಳಲ್ಲಿ ರಸ್ತೆ ಮುಚ್ಚುವ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ. ಪೈಪ್‌ ಲೈನ್‌ಗಾಗಿ ಅಗೆದಿರುವ ರಸ್ತೆಗಳಲ್ಲಿ ಕುಸಿತ ಕಾಣುತ್ತಿದೆ. ಕಾಮಗಾರಿಯ ವ್ಯಾಪ್ತಿಯಲ್ಲಿ ಆಗಬೇಕಾಗಿರುವ 7 ‘ವೆಟ್‌ ವೆಲ್‌’ ಗಳಲ್ಲಿ ಒಂದೇ ಒಂದು ಕಾಮಗಾರಿಯೂ ನಡೆದಿಲ್ಲ. ಮಳೆಗಾಲ ಬರುತ್ತಿರುವುದರಿಂದ ಪುರಸಭೆಯ ನಿವಾಸಿಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ತಾಪತ್ರಯ ಕಾಣಲಿದೆ ಎಂದು ರವಿರಾಜ್‌ ಖಾರ್ವಿ ಆಕ್ಷೇಪ ವ್ಯಕ್ತಪಡಿಸಿದರು.

ನೇರಂಬಳ್ಳಿ ಪರಿಸರದಲ್ಲಿ ತ್ಯಾಜ್ಯ ನೀರು ಹೊರ ಬರುತ್ತಿದ್ದು ಇದನ್ನು 400 ಮೀ ವ್ಯಾಪ್ತಿಗೆ ವಿಸ್ತರಿಸಿ ಎಂದರೂ ಗಮನ ಹರಿಸುತ್ತಿಲ್ಲ ಎಂದು ಗುಣರತ್ನ ದೂರಿದರು.

ಪುರಸಭೆಯ ಎಂಜಿನಿಯರ್‌ ವರ್ತನೆಯ ಬಗ್ಗೆ ಸದಸ್ಯರು ಪಕ್ಷಭೇದ ಮರೆತು ಆಕ್ಷೇಪ ವ್ಯಕ್ತಪಡಿಸಿದರು. ವಿಷಯ ಪ್ರಾಸ್ತಾಪಿಸಿದ ಹಿರಿಯ ಸದಸ್ಯ ಕೆ.ಮೋಹನ್‌ದಾಸ್‌ ಶೆಣೈ, ಎಂಜಿನಿ ಯರ್‌ ಅವರು ಹಿರಿಯ ಸದಸ್ಯರು ಎನ್ನುವುದನ್ನು ನೋಡದೆ ಸದಸ್ಯರಿಗೆ ಅಗೌರವನ್ನು ತೋರುತ್ತಾರೆ ಎಂದರು. ಇದಕ್ಕೆ ಪ್ರತಿಸ್ಪಂದಿಸಿದ ಮುಖ್ಯಾಧಿಕಾರಿ ಮುಂದಿನ ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಯ ಸಮ್ಮುಖದಲ್ಲಿ ಚರ್ಚೆ ಮಾಡುವ ಕುರಿತು ಅವರು ಭರವಸೆ ನೀಡಿದರು.

ಕೋಡಿ ಪರಿಸರದಲ್ಲಿ ನಡೆದ ದಾರಿಯ ವಿಚಾರ ಆಡಳಿತ ಹಾಗೂ ವಿಪಕ್ಷ ಸದಸ್ಯರಿಬ್ಬರ ನಡುವೆ ಒಂದಷ್ಟು ಹೊತ್ತು ಕಾವೇರಿದ ವಾಗ್ವಾದಕ್ಕೆ ಕಾರಣವಾಯಿತು.

ಪುರಸಭೆ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ ಅಧ್ಯಕ್ಷತೆ ವಹಿಸಿದ್ದರು. ಉಪಾ ಧ್ಯಕ್ಷ ರಾಜೇಶ್‌ ಕಾವೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿಠಲ ಕುಂದರ್‌ ಇದ್ದರು.

**
ಪುರಸಭೆಯಲ್ಲಿ ತುರ್ತು ಕಾಮಗಾರಿಗಳ ಅಗತ್ಯ ಇರುವುದರಿಂದಾಗಿ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಸಾಮಾನ್ಯ ಸಭೆ ನಡೆಸಲಾಗಿದೆ
ವಾಣಿ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.