ಉಡುಪಿ: ‘ನೇಜಾರಿನಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣ ಮಾಡಲಾಗುವುದು’ ಎಂದು ಮೀನುಗಾರಿಕೆ, ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿ ಯೇಶನ್ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಉಚಿತ ಅಥ್ಲೆಟಿಕ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾನು ವಾರ ಅವರು ಮಾತನಾಡಿದರು. ‘ಈಗಿರುವ ಈಜುಕೊಳ 25 ಮೀಟರ್ ಉದ್ದ ಮಾತ್ರ ಇದೆ, ಆದ್ದರಿಂದ ಅಂತರರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ 50 ಮೀಟರ್ ಉದ್ದದ ಇನ್ನೊಂದು ಈಜುಕೊಳ ನಿರ್ಮಾಣ ಮಾಡಲಾಗುವುದು. ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು’ ಎಂದು ಅವರು ಹೇಳಿದರು.
‘ಜಿಲ್ಲಾ ಕ್ರೀಡಾಂಗಣದ ಸುತ್ತಲೂ ಪೆವಿಲಿಯನ್ ನಿರ್ಮಾಣ ಮಾಡಲು ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರು ರಾಜ್ಯ ಸಭಾ ಸದಸ್ಯರ ನಿಧಿ ಯಿಂದ ₹2.31 ಕೋಟಿ ನೀಡಿದ್ದಾರೆ. ಇದಕ್ಕೆ ಸರಿ ಸಮಾನಾದ ಅನುದಾನವನ್ನು ನೀಡುವುದಾಗಿ ಕೇಂದ್ರ ಕ್ರೀಡಾ ಸಚಿವರು ಭರವಸೆ ನೀಡಿದ್ದಾರೆ. ಹಣ ಬಿಡುಗಡೆಯಾದರೆ ಪೆವಿಲಿಯನ್ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು.
ಜಿಲ್ಲಾ ಒಳಾಂಗಣ ಕ್ರೀಡಾಂಗಣಕ್ಕೆ ಹವಾ ನಿಯಂತ್ರಣ ವ್ಯವಸ್ಥೆ ಅಳವಡಿಸಲು ಸಹ ₹1 ಕೋಟಿ ಬಿಡುಗಡೆ ಮಾಡ ಲಾಗಿದೆ. ಜಿಮ್ನಾಷಿಯಂ ಅನ್ನು ಅಂತರ ರಾಷ್ಟ್ರೀಯ ದರ್ಜೆಗೇರಿಸಲು ಸಹ ₹2 ಕೋಟಿ ಮಂಜೂರು ಮಾಡಲಾಗಿದೆ. ಬಾಲಕಿಯರಿಗೆ ₹1ಕೋಟಿ ವೆಚ್ಚದಲ್ಲಿ ಪ್ರತ್ಯೇಕ ಕ್ರೀಡಾ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲಾಗುವುದು. ಶಾಸಕ ನಾದ ನಂತರ ಸುಮಾರು ₹8 ಕೋಟಿ ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಿದ್ದೇನೆ’ ಎಂದರು.
‘ಕ್ರೀಡಾಪಟುಗಳನ್ನು ಪ್ರೋತ್ಸಾಹಿ ಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅತ್ಯುತ್ತಮ ಒಂದು ಸಾವಿರ ಕ್ರೀಡಾಪಟುಗಳನ್ನು ಆಯ್ಕೆ ಮಾಡಿಕೊಂಡು ಅವರ ಎಲ್ಲ ಖರ್ಚು ಗಳನ್ನು ಭರಿಸಿ ತರಬೇತಿ ನೀಡಲಾ ಗುತ್ತದೆ. ಕೇಂದ್ರ ಸರ್ಕಾರ ಸಹ ಇದೇ ರೀತಿಯ ಯೋಜನೆ ಹಮ್ಮಿಕೊಂಡಿದ್ದು, ರಾಜ್ಯದ ಸುಮಾರು 200 ಕ್ರೀಡಾ ಪಟುಗಳಿಗೆ ಅವಕಾಶ ಸಿಗುವ ನಿರೀಕ್ಷೆ ಇದೆ. ಕ್ರೀಡಾಪಟುಗಳನ್ನು ದತ್ತು ತೆಗೆದುಕೊಳ್ಳುವಂತೆ 48 ಕಾರ್ಪೊರೇಟ್ ಕಂಪೆನಿಗಳಿಗೆ ಮನವಿ ಮಾಡಲಾಗಿದ್ದು, ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಅಂತರರಾಷ್ಟ್ರೀಯ ಕ್ರೀಡಾಕೂ ಟಗಳಲ್ಲಿ ಭಾಗವಹಿಸುವವರಿಗೆ ಈಗ ಇಲಾಖೆ ವತಿಯಿಂದ ₹8ರಿಂದ ₹10 ಲಕ್ಷ ನೀಡಲಾಗುತ್ತಿದೆ. ಆದರೆ, ಸುಮಾರು ₹50 ಲಕ್ಷ ಪ್ರತಿ ಕ್ರೀಡಾಪಟುವಿಗೆ ಖರ್ಚಾಗುತ್ತದೆ, ಆದ್ದರಿಂದ ಉಳಿದ ಮೊತ್ತವನ್ನೂ ಹೊಂದಿಸಿಕೊಳ್ಳುವ ಪ್ರಯತ್ನ ಸಹ ನಡೆದಿದೆ’ ಎಂದರು.
’ಕ್ರೀಡಾ ಇಲಾಖೆಯ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹145 ಕೋಟಿಯಿಂದ ₹285 ಕೋಟಿಗೆ ಏರಿಸಿದ್ದಾರೆ. ಆದ್ದರಿಂದ ಅನುದಾನದ ಕೊರತೆ ಇಲ್ಲ. ಅಲ್ಲದೆ, ಅನುದಾನವನ್ನು ಕಾಲಮಿತಿಯಲ್ಲಿ ಖರ್ಚು ಮಾಡುವಂತೆಯೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ’ ಎಂದರು.
‘ಮಕ್ಕಳಿಗೆ ತರಬೇತಿ ನೀಡಿ ಉತ್ತಮ ಕ್ರೀಡಾಪಟುಗಳನ್ನಾಗಿ ರೂಪಿಸುವ ವ್ಯವಸ್ಥೆ ವಿದೇಶದಲ್ಲಿದೆ. ಇಲ್ಲಿಯೂ ಎಳೆಯ ಮಕ್ಕಳಿಗೆ ಒಳ್ಳೆಯ ತರಬೇತಿ ನೀಡಿ ಅಂತರರಾಷ್ಟ್ರೀಯ ಕ್ರೀಡಾಪಟುಗ ಳನ್ನಾಗಿ ಬೆಳೆಸುವ ಚಿಂತನೆ ಇದೆ. ಚಿಕ್ಕ ಪ್ರಾಯದಲ್ಲಿಯೇ ತರಬೇತಿ ನೀಡಿದರೆ ಅವರು ಉತ್ತಮ ಸಾಧನೆ ಮಾಡಬಲ್ಲರು’ ಎಂದರು.
ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ದಿನೇಶ್ ಪುತ್ರನ್, ಉಪಾಧ್ಯಕ್ಷ ರಮೇಶ್ ಕಾಂಚನ್, ತರಬೇತುದಾರರಾದ ಅನಂತ ರಾಮ್, ಕೆಂಪರಾಜ್, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಇದ್ದರು.
***
ವಿದ್ಯಾಭ್ಯಾಸದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಭಾಗವಹಿಸಬೇಕು, ಕ್ರೀಡೆಯಲ್ಲಿಯೂ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯವಿದೆ
-ಪ್ರಮೋದ್ ಮಧ್ವರಾಜ್, ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.