ADVERTISEMENT

ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 10:00 IST
Last Updated 7 ಏಪ್ರಿಲ್ 2012, 10:00 IST

ಉಡುಪಿ: ಜಿಲ್ಲಾ ಮಟ್ಟದಲ್ಲಿ ಉತ್ತಮ ತಂಡ ರಚಿಸಿ ಪ್ರತಿಭೆಗಳನ್ನು ಗುರುತಿಸಿ ಹೊರ ತರುವ ಕೆಲಸ ಯುವಕ ಸಂಘಗಳಿಂದಾಗಬೇಕು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದರು.

ನೇಜಾರು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಉಡುಪಿ ತಾಲ್ಲೂಕು ಯುವಜನ ಒಕ್ಕೂಟ, ಗುರು ಯುವಕ ಮಂಡಲ ನೇಜಾರು, ಜೇಸಿಐ ಕಲ್ಯಾಣಪುರ, ರೋಟರಿ ಕಲ್ಯಾಣಪುರ ಹಾಗೂ ಲಯನ್ಸ್ ಕ್ಲಬ್ ಕಲ್ಯಾಣಪುರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಉಡುಪಿ ಜಿಲ್ಲಾಮಟ್ಟದ ಯುವಜನ ಮೇಳದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ಉತ್ತಮ ತಂಡಗಳಿಗೆ ಪ್ರೋತ್ಸಾಹದ ಜೊತೆಗೆ ಶಕ್ತಿ ತುಂಬುವ ಕೆಲಸವನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಜವಾಬ್ದಾರಿ ಯುತವಾಗಿ ನಿರ್ವಹಿಸ ಬೇಕು. ಸ್ಪರ್ಧೆಗಳಲ್ಲಿ ಸಮಸ್ಯೆಗಳು ಬಾರದ ರೀತಿಯಲ್ಲಿ ಅರ್ಹರಿಗೆ ಸಿಗುವಂತೆ ತೀರ್ಪುಗಾರರು ಎಚ್ಚರ ವಹಿಸಬೇಕು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ಸ್ಥಳೀಯರನ್ನು ಸೇರಿಸಿ ಹೆಚ್ಚು ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.

ಉಡುಪಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಂತರ ರಾಷ್ಟ್ರೀಯ ಮಟ್ಟದ ವಿಶೇಷ ರೋಲರ್ ಸ್ಕೇಟಿಂಗ್ ಪಟು ಪ್ರಮೀಳ ಪಿಂಟೊ ಅವರನ್ನು ಸನ್ಮಾನಿಸಲಾಯಿತು. ಭಜನೆ, ಲಾವಣಿ, ಭಾವಗೀತೆ, ರಂಗಗೀತೆ, ಜಾನಪದ ಗೀತೆ, ಜಾನಪದ ನತ್ಯ, ಕೋಲಾಟ, ರಾಗಿ ಬೀಸುವ ಪದ, ಗೀಗೀಪದ, ಏಕಪಾತ್ರ ಅಭಿನಯ, ವೀರಗಾಸೆ, ಡೊಳ್ಳು ಕುಣಿತ, ಚರ್ಮವಾದ್ಯ ಮೇಳ, ಯಕ್ಷಗಾನ, ಸಣ್ಣಾಟ, ದೊಡ್ಡಾಟ ಸೇರಿ 16 ವಿಧದ ಸ್ಪರ್ಧೆಗಳು ನಡೆದವು.

ಜಿಲ್ಲಾ ಪಂಚಾಯತಿ ಸದಸ್ಸೆ ಮಲ್ಲಿಕಾ ಅಶೋಕ್, ಕಲ್ಯಾಣಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುನಿತಾ ಪೂಜಾರಿ, ಕಲ್ಯಾಣಪುರ ರೋಟರಿ ಕ್ಲಬ್ ಅಧ್ಯಕ್ಷ ರವಿ ಆಚಾರ್ಯ, ಸಂತೆಕಟ್ಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಗಣೇಶ್ ನಾಯಕ್, ಜೇಸಿ ವಲಯ 15, ಜಿ ಮತ್ತು ಡಿ ವಿಭಾಗದ ನಿರ್ದೇಶಕ ಪ್ರಮಲ್ ಕುಮಾರ್, ನೇಜಾರು ಗುರು ಯುವಕ

ಮಂಡಲದ ಕಾರ್ಯದರ್ಶಿ ಶ್ರೀಧರ್, ಉಡುಪಿ ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪಿ. ನಾಗರಾಜ್, ತಾಲ್ಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಹರೀಶ್ ಕೋಟ್ಯಾನ್, ಉಡುಪಿ, ಕಾರ್ಕಳ, ಕುಂದಾಪುರ, ತಾಲ್ಲೂಕು ಯುವಜನಾ ಸೇವಾ ಮತ್ತು ಕ್ರೀಡಾಧಿಕಾರಿಗಳಾದ ನಾರಾಯಣ ರಾವ್, ಗಣಪಯ್ಯ, ದಿನಕರ ಹೆಗ್ಡೆ, ದಿನಕರ ಹೇರೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.